ಕೋಟೆ ನಾಡಲ್ಲಿ ಈಗ ಜಿಟಿ ಜಿಟಿ ಮಳೆ; ಫಲ ಕೊಟ್ಟಿದೆಯಂತೆ ಕತ್ತೆ ಮದುವೆ
ಚಿತ್ರದುರ್ಗ, ಆಗಸ್ಟ್ 7: ರಾಜ್ಯದ ಬಹುತೇಕ ಕಡೆ ಮಳೆ ಸುರಿಯುತ್ತಿದ್ದರೂ ಚಿತ್ರದುರ್ಗದಲ್ಲಿ ಮಾತ್ರ ಮಳೆ ಸುಳಿವೇ ಇರಲಿಲ್ಲ. ಇದರಿಂದ ಜನ ಚಿಂತೆಗೀಡಾಗಿದ್ದರು. ಆದರೆ ನಿನ್ನೆಯಿಂದ ಜಿಲ್ಲೆಯ ಕೆಲವೆಡೆ ಸ್ವಲ್ಪ ಮಳೆಯಾಗಲು ಆರಂಭಿಸಿದೆ.
ಉತ್ತರ ಕರ್ನಾಟಕದಲ್ಲಿ ಊರಿಗೆ ಊರೇ ಕೊಚ್ಚಿ ಹೋಗುವಂತೆ ಮಳೆಯಾಗುತ್ತಿದೆ. ಆದರೆ ಚಿತ್ರದುರ್ಗದಲ್ಲಿ ಮಳೆಯೇ ಇರಲಿಲ್ಲ. ಇದೀಗ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗುತ್ತಿದೆ. ಸದ್ಯಕ್ಕೆ ಇಲ್ಲಿ 1.7 ಮಿ.ಮೀ ಮಳೆಯಾಗಿದ್ದು, ಹಿರಿಯೂರು 4.8, ಹೊಳಲ್ಕೆರೆ 17.8, ಹೊಸದುರ್ಗ 24.6, ಮೊಳಕಾಲ್ಮೂರು 1.6, ಚಿತ್ರದುರ್ಗ 6.2, ಚಳ್ಳಕೆರೆ 3.5, ಮಿಮೀ ಮಳೆಯಾಗಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಇನ್ನೂ ಮಳೆಯಾಗಿಲ್ಲ.
ಎಲ್ಲೆಲ್ಲೂ ಮಳೆಯೋ ಮಳೆ, ಆದ್ರೆ ಇಲ್ಲಿ ಕಥೆ ಕೇಳೋರೇ ಇಲ್ಲ...
ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿದ್ದು, ಈರುಳ್ಳಿ, ಶೇಂಗಾ, ಮೆಕ್ಕೆಜೋಳ ಬೆಳೆಗಳಿಗೆ ಹೋದ ಜೀವ ಬಂದಂತಾಗಿದೆ. ಹಿರಿಯೂರಿನಲ್ಲಿ ರಾಗಿ, ಜೋಳ, ತೊಗರಿ ಮತ್ತಿತರ ಧಾನ್ಯಗಳ ಬಿತ್ತನೆ ಕಾರ್ಯ ಕೈಗೊಳ್ಳಬಹುದು ಎನ್ನುತ್ತಾರೆ ಈ ಭಾಗದ ಕೃಷಿಕರು.
ಚಿಕ್ಕಮಂಗಳೂರು ಜಿಲ್ಲೆಯ ಕಳಸ, ಕೊಪ್ಪ, ಶೃಂಗೇರಿ, ಮೂಡಿಗೆರೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು ಇತ್ತ ದಿನದಿಂದ ದಿನಕ್ಕೆ ಭದ್ರಾ ಡ್ಯಾಂನಲ್ಲಿ ನೀರಿನ ಶೇಖರಣೆ ಹೆಚ್ಚುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಭದ್ರಾ ಡ್ಯಾಂಗೆ ನೀರು ಬಂದರೆ ಹಿರಿಯೂರಿನ ವಿವಿ ಸಾಗರಕ್ಕೆ ಅನುಕೂಲವಾಗಲಿದೆ. ಮತ್ತೊಂದು ಕಡೆ ಭದ್ರಾ ಕಾಮಗಾರಿ ಮುಗಿಯುತ್ತಿದ್ದು, ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿದು ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ವಿವಿ ಸಾಗರ ಹೋರಾಟ ಸಮಿತಿಯ ಮುಖಂಡರು.
ವೀಡಿಯೋ; ನೋಡನೋಡುತ್ತಲೇ ತುಂಗಾ ನದಿಯಲ್ಲಿ ಕೊಚ್ಚಿ ಹೋದ ಮಹಿಳೆ!
ಆದರೆ ಇವೆಲ್ಲವೂ ಕತ್ತೆ ಮದುವೆ ಮಾಡಿಸಿದ್ದರ ಫಲ ಇರಬಹುದು ಎಂದೂ ಹೇಳುತ್ತಿದ್ದಾರೆ ಆದಿವಾಲ ಗೊಲ್ಲರಹಟ್ಟಿ ಗ್ರಾಮಸ್ಥರು. ಮಳೆಗಾಗಿ ಹಿರಿಯೂರು ತಾಲೂಕಿನ ಆದಿವಾಲ ಗೊಲ್ಲರ ಹಟ್ಟಿಯ ಗ್ರಾಮಸ್ಥರು ಮೊನ್ನೆಯಷ್ಟೆ ಕತ್ತೆಗಳಿಗೆ ಮದುವೆ ಮಾಡಿಸಿದ್ದರು. ಗ್ರಾಮದ ಬನವಾಸಿ ರಂಗನಾಥ ಸ್ವಾಮಿ ದೇವರ ಮೊರೆ ಹೋಗಿ, ಗ್ರಾಮದಲ್ಲಿ ಮಳೆಗಾಗಿ ಅದ್ಧೂರಿಯಾಗಿ ಕತ್ತೆಗೆ ಮದುವೆ ಮಾಡಿಸಿದ್ದರು.
ಶಿರ್ಲೆ ಫಾಲ್ಸ್ ನಲ್ಲಿ ಸಿಕ್ಕಿಕೊಂಡಿದ್ದ ಹುಬ್ಬಳ್ಳಿ ಪ್ರವಾಸಿಗರ ರಕ್ಷಣೆ
ಪಕ್ಕದ ಸೋಮೆರಹಳ್ಳಿ ಗ್ರಾಮದ ಒಂದು ಗಂಡು ಕತ್ತೆ ಮತ್ತು ಇನ್ನೊಂದು ಹೆಣ್ಣು ಕತ್ತೆಯನ್ನು ಕರೆತಂದು ಮನುಷ್ಯರಿಗೆ ಮದುವೆ ಮಾಡುವ ವಿಧಾನದಂತೆ ಕತ್ತೆಗೆ ಮದುವೆ ಮಾಡಿಸಿದ್ದರು. ಗ್ರಾಮದಲ್ಲಿ ಮೆರವಣಿಗೆ ಮಾಡಿ, ಗಂಗಮ್ಮನ ಪೂಜೆ ಮಾಡಿದ ನಂತರ ಎಲ್ಲರಿಗೂ ಊಟದ ವ್ಯವಸ್ಥೆಯನ್ನೂ ಮಾಡಿದ್ದರು.