ಸಚಿವ ಅಶೋಕ ಬೆಳೆನಷ್ಟ ವೀಕ್ಷಣೆ ಕಂಡು ಗರಂ ಆದ ರೈತರು!
ಚಿತ್ರದುರ್ಗ, ಜನವರಿ 11: ಕಂದಾಯ ಸಚಿವ ಆರ್. ಅಶೋಕ ಚಿತ್ರದುರ್ಗ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ಕಡಲೆ ಬೆಲೆ ನಾಶವಾಗಿದ್ದನ್ನು ಪರಿಶೀಲನೆ ನಡೆಸಿದರು. ರೈತರ ಹೊಲಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ ವೈಖರಿಗೆ ರೈತರು ಅಸಮಾಧಾನಗೊಂಡಿದ್ದಾರೆ.
ಸೋಮವಾರ ಸಚಿವ ಆರ್. ಅಶೋಕ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದ ರೈತರ ಹೊಲದಲ್ಲಿ ಮಳೆಯಿಂದ ಹಾನಿಗೊಳಗಾದ ಕಡಲೆ ಬೆಳೆ ವೀಕ್ಷಣೆ ಮಾಡಿದರು. ಜನವರಿ 7ರಂದು ಒನ್ ಒಂಡಿಯಾ ಕನ್ನಡ 'ಚಿತ್ರದುರ್ಗದಲ್ಲಿ ಅಕಾಲಿಕ ಮಳೆಗೆ ಕಡಲೆ ಬೆಳೆ ಸಂಪೂರ್ಣ ನಾಶ' ಎಂಬ ಶೀರ್ಷಿಕೆಯಡಿ ವಿವರವಾದ ವರದಿಯನ್ನು ಪ್ರಕಟಿಸಿತ್ತು.
ಚಿತ್ರದುರ್ಗದಲ್ಲಿ ಅಕಾಲಿಕ ಮಳೆಗೆ ಕಡಲೆ ಬೆಳೆ ಸಂಪೂರ್ಣ ನಾಶ
ವರದಿಗೆ ಕಂದಾಯ ಸಚಿವ ಆರ್. ಅಶೋಕ ಅವರು ಸ್ಪಂದಿಸಿದ್ದು ಸೋಮವಾರ ಬೆಳೆ ನಾಶದ ಬಗ್ಗೆ ಪರಿಶೀಲನೆ ಮಾಡಿದರು. ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಹೊಲದಲ್ಲಿ ನೀರು ನಿಂತು ಕಡಲೆ ಬೆಳೆ ಜಲಾವೃತಗೊಂಡಿತ್ತು. ಆದರೆ, ಸಚಿವರ ಪರಿಶೀಲನೆ ಕಂಡು ರೈತರು ಗರಂ ಆಗಿದ್ದಾರೆ.
Oneindia Impact; ಕಡಲೆ ಬೆಳೆ ಹಾನಿ ಪರಿಶೀಲನೆ ನಡೆಸಿದ ಆರ್. ಅಶೋಕ
ಕೈ, ಕಾಲು ಮಣ್ಣಾಗದಂತೆ ಬೆಳೆ ನಷ್ಟದ ವೀಕ್ಷಣೆಯನ್ನು ಸಚಿವರು ಮುಗಿಸಿದರು. ಕಂದಾಯ ಸಚಿವರ ಕಾಟಾಚಾರದ ಭೇಟಿಗೆ ರೈತರು ಬೇಸರ ವ್ಯಕ್ತಪಡಿಸಿದರು. ಬೆಳೆ ಹಾನಿಯಾಗಿರುವ ರೈತರಿಗೆ ಪರಿಹಾರವನ್ನು ನೀಡುವ ಭರವಸೆಯನ್ನು ಸಚಿವರು ಕೊಟ್ಟಿದ್ದಾರೆ.
ಕಾಫಿ ಬೆಳೆಗಾರರಿಗೆ ಸಂಕಟ ತಂದಿಟ್ಟ ಅಕಾಲಿಕ ಮಳೆ
ಕಾಟಾಚಾರದ ಪರಿಶೀಲನೆ
ಕಂದಾಯ ಸಚಿವ ಆರ್. ಅಶೋಕ ಕಡೆಲೆ ಹೊಲದ ತುದಿಯಲ್ಲಿ ನಿಂತು ಬೆಳೆ ನಷ್ಟದ ಅಂದಾಜು ನಡೆಸಿದರು. ಹಿರಿಯೂರಿನ ಬಬ್ಬೂರು ಗ್ರಾಮದಲ್ಲಿ ರೈತನ ಕೈಯಲ್ಲೇ ಕಡಲೆ ಗಿಡ ಕಿತ್ತುಕೊಂಡುವಂತೆ ಹೇಳಿದರು. "ಏ ಬಾರಪ್ಪ ಗಿಡ ಕಿತ್ತುಕೊಡು. ಏನ್ ಮಾಡೋದು ಬಿಜೆಪಿ ಸರ್ಕಾರ ಬಂದರೆ ಮಳೆ ಜಾಸ್ತಿ" ಎಂದು ಹೇಳಿದ ಸಚಿವರು ಬೆಳೆ ಕಳೆದುಕೊಂಡ ರೈತನ ಎದುರು ತಮಾಷೆ ಮಾಡಿ ನಕ್ಕರು. ಇದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂದಾಯ ಸಚಿವರ ಹೇಳಿಕೆ
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, "ಚಿತ್ರದುರ್ಗ ಜಿಲ್ಲೆಯಲ್ಲಿ 350 ಹೆಕ್ಟೇರ್ ಜಮೀನಿನಲ್ಲಿ ಕಡಲೆ ಮತ್ತು ಈರುಳ್ಳಿ ಬೆಳೆ ನಾಶವಾಗಿದೆ. ಬೆಳೆ ನಾಶವಾದ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಂತರ ಪರಿಹಾರದ ಕುರಿತು ಪರಿಶೀಲನಾ ಸಭೆ ನಡೆಸಿ ಸರ್ಕಾರಕ್ಕೆ ವರದಿ ನೀಡುತ್ತೇನೆ" ಎಂದರು.
ಸಾವಿರಾರು ಹೆಕ್ಟೇರ್ ಬೆಳೆ ನಾಶ
"ಅಕಾಲಿಕವಾಗಿ ಬಿದ್ದ ಮಳೆಯಿಂದ ರಾಜ್ಯದಲ್ಲಿ ಸಾವಿರಾರು ಹೆಕ್ಟೇರ್ ನಷ್ಟು ಜಮೀನು ಹಾಳಾಗಿದ್ದು ಇದನ್ನು ನೋಡಿ ಸಮೀಕ್ಷೆಗಾಗಿ, ನೊಂದ ರೈತರಿಗೆ, ನಷ್ಟ ಉಂಟಾದವರಿಗೆ ಪರಿಹಾರ ಕೊಡುವ ದೃಷ್ಟಿಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದೇನೆ. ವಿಶೇಷವಾಗಿ ಹೆಚ್ಚಿನ ಮಳೆಯಿಂದಾಗಿ ಕಡಲೆ ಬೆಳೆ ಬೇರು ಕೊಳೆತು ಹೋಗಿದೆ. ಇದರಿಂದಾಗಿ ಎಲೆಯಲ್ಲಾ ಒಣಗಿ ಹಾಳಾಗಿದೆ" ಎಂದು ಸಚಿವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ
"ಈರುಳ್ಳಿ ಕೂಡ ಬೇರೆ ಬೇರೆ ರಾಜ್ಯ ಮತ್ತು ದೇಶಗಳಿಗೆ ಮಾರಾಟವಾಗುತ್ತಿತ್ತು ಅದು ಕೂಡ ಮಳೆ ಬಂದು ಹಾವೇರಿ ಜಿಲ್ಲೆಯಲ್ಲಿ ಸಮಸ್ಯೆಯಾಗಿದೆ. ಧಾರವಾಡದಲ್ಲಿ ಕೂಡ ಸಮಸ್ಯೆಯಾಗಿದೆ. ಕೋಲಾರದಲ್ಲಿ ದ್ರಾಕ್ಷಿಗೆ ಹಾನಿಯಾಗಿದ್ದು ನನ್ನ ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ರೈತರಿಗೆ ಪರಿಹಾರ ಏನು ಸಿಗುಬೇಕು ಅದನ್ನು ನಾವು ಮಾಡುತ್ತೇವೆ" ಎಂದರು.