ಚಿತ್ರದುರ್ಗ: ಕಣಿವೆ ಮಾರಮ್ಮನ ಜಾತ್ರೆಯಲ್ಲಿ ಅಪ್ಪು ಪೋಟೋ ಮೆರವಣಿಗೆ
ಚಿತ್ರದುರ್ಗ ಮೇ 7: ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಮುಂಭಾಗದಲ್ಲಿರುವ ಶ್ರೀ ಕಣಿವೆ ಮಾರಮ್ಮನ ರಥೋತ್ಸವ ಶುಕ್ರವಾರ ಬಹಳ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಈ ರಥೋತ್ಸವದಲ್ಲಿ ಉತ್ಸವಮೂರ್ತಿ ರಥದಲ್ಲಿ ಪ್ರತಿಷ್ಠಾಪಿಸುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಭಕ್ತರು ರಥವನ್ನು ಭಕ್ತಿ ಭಾವದಿಂದ ಎಳೆದು, ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ತನ್ನ ಇಷ್ಟಾರ್ಥಗಳನ್ನು ಪೂರೈಸಿದರು.
ಅಪ್ಪು ಪೋಟೋ ಮೆರವಣಿಗೆ:
ಕಣಿವೆ ಮಾರಮ್ಮನ ರಥೋತ್ಸವ ಹಿನ್ನೆಲೆಯಲ್ಲಿ ಮಾರಮ್ಮನ ತೇರಿನ ಜೊತೆಗೆ ಡಾ.ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಅಪ್ಪು ಪೋಟೋ ಹಿಡಿದು ಮೆರವಣಿಗೆ ಮಾಡಿದ್ದು ಜಾತ್ರೆಯ ವಿಶೇಷವಾಗಿ ಕಂಡು ಬಂದಿತ್ತು.
ಹರಿದು ಬಂದ ಜನಸಾಗರ:
ಎರಡು ವರ್ಷಗಳಿಂದ ಕರೋನಾದಿಂದ ಸ್ಥಗಿತಗೊಂಡಿದ್ದ ಮಾರಮ್ಮನ ಜಾತ್ರೆಗೆ ಈ ಬಾರಿ ಜನಸಾಗರವೇ ಹರಿದು ಬಂತು. ಟ್ರಾಕ್ಟರ್, ಆಟೋ, ಬೈಕ್, ಕಾರು, ಇತರೇ ವಾಹನಗಳಲ್ಲಿ ರಾಜ್ಯ, ಹೊರರಾಜ್ಯ ಸೇರಿದಂತೆ ಜಿಲ್ಲೆಯ ಮೂಲೆ ಮೂಲೆಗಳಿಂದ ಭಕ್ತರ ದಂಡೇ ಆಗಮಿಸಿತ್ತು.
ಕಣಿವೆ ಮಾರಮ್ಮನ ಹಿನ್ನೆಲೆ:
ಮಾರಮ್ಮನ ದೇವಸ್ಥಾನದ ವಿಚಾರಕ್ಕೆ ಬಂದರೆ ಇತಿಹಾಸ ಒಳಗೊಂಡಿದೆ. ನೂರಾರು ವರ್ಷಗಳ ಇತಿಹಾಸವಿರುವ ಕಣಿವೆ ಮಾರಮ್ಮ ದೇವಿ ವಾಣಿ ವಿಲಾಸ ಜಲಾಶಯ ಅಣೆಕಟ್ಟೆಯ ರಕ್ಷಕಿ ಎಂಬ ನಂಬಿಕೆ ಇದೆ. ಎರಡು ಗುಡ್ಡಗಳ ನಡುವಿನ ಪ್ರದೇಶದಲ್ಲಿ ವಾಣಿ ವಿಲಾಸ ಜಲಾಶಯ ಅಣೆಕಟ್ಟೆ ನಿರ್ಮಿಸಿದ್ದು, ಎರಡು ಗುಡ್ಡಗಳ ಕಣಿವೆಯಂತಹ ಪ್ರದೇಶದಲ್ಲಿ ಈ ದೇಗುಲ ಇರುವ ಕಾರಣ ಕಣಿವೆ ಮಾರಮ್ಮ ಎಂಬ ಹೆಸರು ಬಂದಿದೆ. ಇಲ್ಲಿ ಮೇ ತಿಂಗಳಲ್ಲಿ ಕಣಿವೆ ಮಾರಮ್ಮನ ಜಾತ್ರೆ ನಡೆಯುತ್ತದೆ. ನವರಾತ್ರಿಯಂದು ತಾಯಿಗೆ ವಿಶೇಷ ಪೂಜೆ ಅಲಂಕಾರ ನೈವೇದ್ಯ ಸಮರ್ಪಣೆ ನಡೆಯುತ್ತದೆ. ಅಂದು ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಮತ್ತಿತರರು ಭಾಗಗಳಿಂದ ಭಕ್ತರು ತಾಯಿಯ ಸನ್ನಿಧಿಗೆ ಆಗಮಿಸುತ್ತಾರೆ.
ಯಾವುದೇ ಕೆಲಸ ಪ್ರಾರಂಭಕ್ಕೂ ಮೊದಲು ದೇವರನ್ನು ನೆನೆದರೆ ಅವನು ಕಾಪಾಡಿಯೇ ಕಾಪಾಡುತ್ತಾನೆ ಅನ್ನೋ ನಂಬಿಕೆ ನಮ್ಮಲ್ಲಿ ಮೊದಲಿನಿಂದಲೂ ಬೆಳೆದು ಬಂದಿದೆ. ಆ ಕೆಲಸ ಚಿಕ್ಕದೇ ಆಗಲಿ ಅಥವಾ ದೊಡ್ಡದೇ ಆಗಲಿ. ಇದಕ್ಕೆ ಸಾಕ್ಷಿಯಾಗಿ ನಿಂತಿರೋದೆ ಈ ದೇವಾಲಯ. ಇಲ್ಲಿ ತಾಯಿ ಅಂಬಿಕೆನೇ ಆಣೆಕಟ್ಟು ಕಾಯೋಕೆ ನಿಂತಿದ್ದಾಳೆ.
ಹೌದು ಇದೇ ಈ ದೇವಾಲಯದ ವಿಶೇಷತೆಯಾಗಿದೆ. ಇಲ್ಲಿ ತಾಯಿಯ ಪಾದಕ್ಕೆ ತಾಗಿ ಆಣೆಕಟ್ಟು ನಿಂತಿದೆ. ಮಾರಿಕಾಂಬೆಯೇ ತನ್ನ ಪಾದದ ಮೂಲಕ ಆ ಆಣೆಕಟ್ಟು ಹಿಡಿದು ನಿಂತಿದ್ದಾಳೆ ಅನ್ನೋದು ಭಕ್ತರ ನಂಬಿಕೆ. ಅದಕ್ಕೆ ಇಲ್ಲಿನ ಆಣೆಕಟ್ಟಿಗೆ ಮಾರಿಕಣಿವೆ ಡ್ಯಾಂ ಅಂತಾನೆ ಕರಿಯೋದು. ಇದು ಮಾರಿ ಕಣಿವೆ ಡ್ಯಾಂ ಎಂದು ಕರಿಸಿಕೊಳ್ಳೋ ವಾಣಿವಿಲಾಸ ಆಣೆಕಟ್ಟಿನ ಬಳಿಯಿರೋ ಮಾರಿಕಾಂಬ ಅಥವಾ ಕಣಿವೆ ಮಾರಮ್ಮ ದೇವಾಲಯ. ಆಣೆಕಟ್ಟಿಗೆ ತಾಗಿಕೊಂಡೇ ಈ ದೇವಾಲಯ ಇದೆ. ಇಲ್ಲಿರುವ ಮಾರಿಕಾಂಬೆ ಈ ಡ್ಯಾಂಗೆ ಯಾವುದೇ ರೀತಿಯ ತೊಂದರೆ ಬರದ ರೀತಿಯಲ್ಲಿ ಕಾಯುತ್ತಾಳೆ ಅನ್ನೋದು ಇಲ್ಲಿಯ ಜನರ ನಂಬಿಕೆಯಾಗಿದೆ.
ಇದಕ್ಕೆ ಮತ್ತೊಂದು ಕಾರಣ ಇದೆ. ಸಾಮಾನ್ಯವಾಗಿ ಎಲ್ಲಾ ದೇವಾಲಯಗಳ ಮೂರ್ತಿಗಳು ಗರ್ಭಗುಡಿ ಬಾಗಿಲಿಗೆ ಮುಖ ಮಾಡಿದ್ರೆ, ಇಲ್ಲಿ ಮಾತ್ರ ಮಾರಿಕಾಂಬೆ ಬೆನ್ನು ಮಾಡಿ ಕುಳಿದ್ದಾಳೆ. ಇನ್ನು ತಾಯಿಯ ಕಾಲಿನ ಹೆಬ್ಬೆರಳಗಳು ಆಣೆಕಟ್ಟೆಗೆ ಒತ್ತಿ ಹಿಡಿದಂತಿದೆ. ಹೀಗಾಗಿ ತಾಯಿ ಆಣೆಕಟ್ಟನ್ನು ತನ್ನ ಬೆರಳಿನಲ್ಲಿ ಒತ್ತೊ ಹಿಡಿದು ಕಾಯುತ್ತಿದ್ದಾಳೆ ಅನ್ನೋದು ಭಕ್ತ ನಂಬಿಕೆ. ಇಲ್ಲಿ ತಾಯಿಯ ಬೆನ್ನ ಬದಿಯ ಭಾಗಕ್ಕೆ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತೆ.
ದೇವಾಲಯದ ಇತಿಹಾಸ:
ಕಣಿವೆ ಮಾರಮ್ಮನ ದೇವಸ್ಥಾನದ ಇತಿಹಾಸ ಗಮನಿಸಿದಾಗ ಇದನ್ನು ವಿಜಯ ನಗರದ ಅರಸರು 14- 15 ನೇ ಶತಮಾನದಲ್ಲಿ ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಇದಾದ ನಂತರ ಮೈಸೂರು ಅರಸರು ಡ್ಯಾಂ ಕಟ್ಟಿದ ಬಳಿಕ ಇದನ್ನು ಪುನರ್ ಸ್ಥಾಪಿಸಿದರು.
ವಿವಿ ಸಾಗರ ಡ್ಯಾಂ:
ಬಯಲು ಸೀಮೆಯ ಏಕೈಕ ಜನರ ಜೀವನಾಡಿಯಾಗಿರುವ ವಿವಿ ಸಾಗರ ಡ್ಯಾಂ ಜಿಲ್ಲೆಯ ಜನತೆಗೆ ನೀರುಣಿಸುವ ಸಾಗರವಾಗಿದೆ. ಈ ಡ್ಯಾಂ ನ್ನು ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಮೈಸೂರಿನ ರಾಣಿ ಕಟ್ಟಿಸಿದ್ದಾರೆ. ಮಾರಿಕಾಂಬ ದೇವಾಲಯದ ವಿಚಾರಕ್ಕೆ ಬರೋದಾದ್ರೆ ಇಲ್ಲಿ ಮೇ ತಿಂಗಳಲ್ಲಿ ಜಾತ್ರೆ ನಡೆಯುತ್ತೆ. ನವರಾತ್ರಿಯಲ್ಲಿ ತಾಯಿಗೆ ವಿಶೇಷ ಪೂಜೆ ಮಾಡಲಾಗುತ್ತೆ. ಆಗ ಆಂದ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರ ದಂಡೇ ಆಗಮಿಸುತ್ತೆ. ಇನ್ನು ದೇವಾಲಯಕ್ಕೆ ಹೋದರೆ ದೇವರ ದರ್ಶನ ಜೊತೆಗೆ ಒಮ್ಮೆ ವಿವಿ ಸಾಗರ ಡ್ಯಾಂ ಹಾಗೂ ಪ್ರಕೃತಿಯ ವಿಹಂಗಮ ನೋಟ ಸವಿಯಬಹುದಾಗಿದೆ.
Recommended Video