ಪಿಎಸ್ಐ ಮರು ಪರೀಕ್ಷೆ ಮೂಲಕ ಪ್ರಾಮಾಣಿಕರಿಗೆ ಸರ್ಕಾರದಿಂದ ಅನ್ಯಾಯ: ಹೆಚ್ ಡಿ ಕುಮಾರಸ್ವಾಮಿ
ಚಿತ್ರದುರ್ಗ, ಏಪ್ರಿಲ್ 30: ಕರ್ನಾಟಕದಲ್ಲಿ ಪ್ರಾಮಾಣಿಕವಾಗಿ ಪಿಎಸ್ಐ ಪರೀಕ್ಷೆಯನ್ನು ಬರೆದು ಪಾಸಾದ ಅಭ್ಯರ್ಥಿಗಳಿಗೆ ಯಾವುದೇ ರೀತಿ ಅನ್ಯಾಯ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪಿಎಸ್ಐ ಮರುಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು ಅವರು ವಿರೋಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಮಾತನಾಡಿದ ಅವರು, ತಪ್ಪು ಮಾಡಿರುವ ಅಭ್ಯರ್ಥಿಗಳಿಗೆ ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗದ ಅವಕಾಶದಿಂದ ಸಂಪೂರ್ಣವಾಗಿ ದೂರ ಇಡಬೇಕು ಎಂದು ಆಗ್ರಹಿಸಿದರು.
ಪಿಎಸ್ಐ ನೇಮಕಾತಿಗೆ ಯುಪಿಎಸ್ಸಿ ಮಾದರಿ ಪರೀಕ್ಷೆ : ಸಿಎಂ ಬಸವರಾಜ ಬೊಮ್ಮಾಯಿ
ಪಿಎಸ್ಐ ಪರೀಕ್ಷೆ ಬರೆದ ಪ್ರಾಮಾಣಿಕ ಅಭ್ಯರ್ಥಿಗಳು ಕೇಳುತ್ತಿರುವುದರಲ್ಲಿ ನ್ಯಾಯವಿದೆ. ಯಾರು ಹಣ ಕೊಟ್ಟು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ, ಅಕ್ರಮವೆಸಗಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಸರ್ಕಾರಕ್ಕೆ ಸಿಗುತ್ತದೆ. ಅಕ್ರಮ ಎಸಗಿದವರನ್ನು ಹೊರತುಪಡಿಸಿ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾಗಿರುವ ಅಭ್ಯರ್ಥಿಗಳನ್ನು ಯಾಕೆ ಬೀದಿಪಾಲು ಮಾಡುತ್ತೀರಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಪ್ರಾಮಾಣಿಕರಿಗೆ ಏಕೆ ಶಿಕ್ಷೆ ಕೊಡುತ್ತೀರಿ?:
ಪಿಎಸ್ಐ ಪರೀಕ್ಷೆಯನ್ನು ಸರಿಯಾಗಿ ನಡೆಸದೇ ಸರ್ಕಾರ ಲೋಪವೆಸಗಿದೆ. ಇದು ಸರ್ಕಾರದ ತಪ್ಪು ಹಾಗೂ ವೈಫಲ್ಯ. ವಸ್ತುಸ್ಥಿತಿ ಹೀಗಿರುವಾಗ ಪ್ರಾಮಾಣಿಕರಿಗೆ ಏಕೆ ಶಿಕ್ಷೆ ಕೊಡುತ್ತೀರಾ?, ಅವರು ಏನು ತಪ್ಪು ಮಾಡಿದ್ದಾರೆ ಎಂದು ಸರ್ಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
"ನಾನು ನಿನ್ನೆ ಬೆಳಗ್ಗೆ ಪತ್ರಿಕೆಯಲ್ಲಿ ಓದುತಿದ್ದೆ, ಒಬ್ಬ ಅಭ್ಯರ್ಥಿಯ ತಾಯಿಗೆ ಒಂದೂವರೆ ಸಾವಿರ ರೂ. ಪೆನ್ಷನ್ ಬರುತ್ತದೆ. ಆ ಹಣದಲ್ಲಿ ನಮ್ಮ ಕುಟುಂಬ ಬದುಕುತ್ತಿದೆ. ನಾನು ಬಿಇ ಮೆಕ್ಯಾನಿಕಲ್ ಮಾಡಿದ್ದೇನೆ, ಈಗ ಪರೀಕ್ಷೆ ರದ್ದು ಮಾಡಿ ಪುನಃ ಪರೀಕ್ಷೆ ಬರೆಯಬೇಕು ಎಂದರೆ ಹೇಗೆ?, ನಾನು ಹಣ ಕೊಟ್ಟು ಪಾಸು ಮಾಡಿಸಿಕೊಂಡಿಲ್ಲ ಎಂದು ತನ್ನ ಕುಟುಂಬ ಪರಿಸ್ಥಿತಿಯನ್ನು ಅಳುತ್ತಾ ಹೇಳುತ್ತಾನೆ. ಹೀಗೆ ನೂರಾರು ಅಭ್ಯರ್ಥಿಗಳ ಜೀವನದ ಜೊತೆ ಸರ್ಕಾರ ಆಟವಾಡುತ್ತಿದೆ. ಈಗ ನೋಡಿದರೆ ತನಿಖಾ ವರದಿಯನ್ನೇ ಸಂಪೂರ್ಣವಾಗಿ ಕೈಗೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಬಾರದು. ಈ ಹಿಂದೆ 2011ರ ಕೆಪಿಎಸ್ಸಿ ಪರೀಕ್ಷೆಯನ್ನು ಅಂದಿನ ಸರ್ಕಾರ ಹೇಗೆ ಹಾಳು ಮಾಡಿತ್ತು," ಎಂದು ದೂರಿದರು.
ಅಕ್ರಮ ಎಸಗಿದವರನ್ನು ಮೊದಲು ಪತ್ತೆ ಮಾಡಿರಿ:
ಪಿಎಸ್ಐ ಪರೀಕ್ಷೆಯಲ್ಲಿ ಯಾರು ಅಕ್ರಮ ಎಸಗಿದವರನ್ನು ಮೊದಲು ಪತ್ತೆ ಹಚ್ಚಿರಿ. ಅಂಥವರ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವುದನ್ನು ಬಯಲಿಗೆ ಎಳೆಯಿರಿ. ಅಕ್ರಮವಾಗಿ ಪರೀಕ್ಷೆ ಬರೆದು ಪಾಸಾದವರನ್ನು ಸಂಪೂರ್ಣವಾಗಿ ಮುಂದಿನ ಯಾವುದೇ ಸರ್ಕಾರಿ ನೌಕರಿಗೆ ಅರ್ಹರಲ್ಲ ಎಂದು ಆದೇಶ ಹೊರಡಿಸಿ. ಯಾರು ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾಗಿದ್ದಾರೆಯೋ ಅವರ ಜೀವನದ ಜೊತೆ ಚಲ್ಲಾಟವಾಡಬೇಡಿ ಎಂದು ಸರ್ಕಾರಕ್ಕೆ ಹೆಚ್ ಡಿಕೆ ಕಿವಿಮಾತು ಹೇಳಿದ್ದಾರೆ.
ಅಧಿಕಾರ ಸಿಕ್ಕಿದರೆ ನೀರು ಕೊಡುತ್ತೇವೆ:
ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ರಾಜ್ಯದ ಜನತೆ 5 ವರ್ಷಗಳ ಆಳ್ವಿಕೆಗೆ ಅವಕಾಶ ಕೊಟ್ಟರೆ ರಾಜ್ಯಕ್ಕೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಈ ಯೋಜನೆಗಳ ಜಾರಿಗೆ ಎಷ್ಟು ಕೋಟಿ ಹಣ ಖರ್ಚಾದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜನರಿಗೆ ನೀರು ಒದಗಿಸುವುದೇ ನಮ್ಮ ಸಂಕಲ್ಪ. ಅದಕ್ಕಾಗಿ ಜನರಲ್ಲಿ ತಿಳುವಳಿಕೆ ಮೂಡಿಸಲಾಗುತ್ತಿದೆ ಎಂದರು.
ನಿನ್ನೆ ಜಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೆಲವು ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟಿದ್ದಾರೆ. ಆದರೆ, ನಾನು ಮುಖ್ಯಮಂತ್ರಿ ಆಗಿದ್ದಾಗ ಜಗಳೂರು ಭಾಗಕ್ಕೆ ನೀರು ಕೊಡಲು, ಕೆರೆ ತುಂಬಲು ಯೋಜನೆ ರೂಪಿಸಿದ್ದೆ. ಅದಕ್ಕೆ ಬಿಜೆಪಿ ಈಗ ಅಡಿಗಲ್ಲು ಹಾಕಲು ಹೊರಟಿದೆ ಎಂದು ಟಾಂಗ್ ಕೊಟ್ಟರು.
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನ್ಯಾಯ:
ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿ ರಾಜ್ಯಕ್ಕೆ 75 ವರ್ಷಗಳಿಂದ ನಿರಂತರ ಅನ್ಯಾಯವಾಗಿದೆ. ದೇವೇಗೌಡರು ಪ್ರಧಾನಿ ಆಗಿದ್ದ ಸಂದರ್ಭವನ್ನು ಹೊರತುಪಡಿಸಿದರೆ ಉಳಿದೆಲ್ಲ ಸಂದರ್ಭಗಳಲ್ಲಿ ರಾಜ್ಯಕ್ಕೆ ಭಾರೀ ಅನ್ಯಾಯವಾಗಿದೆ. ಕೃಷ್ಣಾ ನದಿ ಯೋಜನೆಯನ್ನು ರಾಷ್ಟ್ರೀಯ ಯೊಜನೆ ಎಂದು ಘೋಷಿಸಿ ಎಂದು ರಾಜ್ಯ ಸರ್ಕಾರ ಈಗ ಕೇಳುತ್ತಿದೆ. ಆದರೆ, ಕೇಂದ್ರವು ರಾಜ್ಯದ ಜೊತೆಗೆ ಹೇಗೆ ನಡೆದುಕೊಂಡಿದೆ ಎಂಬುದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಜನರ ಮುಂದೆ ಅನುಷ್ಠಾನಗೊಳಿಸಿ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಕುಮಾರಸ್ವಾಮಿ ಮನವಿ ಮಾಡಿಕೊಂಡರು.