ವಿವಿ ಸಾಗರ ಡೆಡ್ ಸ್ಟೋರೇಜ್ ನೀರು ಉಳಿಸಲು ಆಗ್ರಹಿಸಿ ಪ್ರತಿಭಟನಾ ಸಮಾವೇಶ
ಹಿರಿಯೂರು, ಜೂನ್ 29: ಹಿರಿಯೂರು ಜನರ ಬದುಕಿನ ಹಿತದೃಷ್ಟಿಯಿಂದ ಮೈಸೂರು ಮಹಾರಾಜರು ವಿವಿ ಸಾಗರದ ಡ್ಯಾಂ ನಿರ್ಮಾಣ ಮಾಡಿದ್ದಾರೆ. ಅದನ್ನು ನಾವು ಉಳಿಸಿಕೊಳ್ಳಬೇಕಿದೆ ಎಂದು ಶಾಸಕಿ ಕೆ. ಪೂರ್ಣಿಮಾ ತಾಕೀತು ಮಾಡಿದರು.
ಭದ್ರಾ ಮೇಲ್ದಂಡೆ ಯೋಜನೆ ಕಾಮಾಗಾರಿಯೂ ವಿಳಂಬವಾಗಿದೆ. ಈಗಾಗಲೇ ಅಧಿಕಾರಿಗಳು ಸುಳ್ಳು ದಿನಾಂಕ ಕೊಟ್ಟು ಕೊಟ್ಟು ಕ್ಯಾಲೆಂಡರ್ ನಲ್ಲಿ ದಿನಗಳೇ ಕಳೆದು ಹೋಗಿವೆ ಎಂದು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತ ಪಡಿಸಿದರು.
ವಿವಿ ಸಾಗರ ಡೆಡ್ ಸ್ಟೋರೇಜ್ ಉಳಿಸಲು ಆಗ್ರಹಿಸಿ ಬಂದ್ ಗೆ ಕರೆ
ಈಗಾಗಲೇ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದೇನೆ ಎಂದ ಅವರು, ಭದ್ರಾ ಕಾಮಗಾರಿಗೆ ತೊಡಕುಂಟಾಗಿರುವ ಸಮಸ್ಯೆ ಬಗೆಹರಿಸಿ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಿ ವಿವಿ ಸಾಗರಕ್ಕೆ ನೀರು ಹರಿಸಲು ಆಗ್ರಹಿಸಿದರು.
ಹಿರಿಯೂರು ಗಾಂಧಿ ವೃತ್ತದ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ತಾಲ್ಲೂಕಿನ ಹಿತ ದೃಷ್ಟಿಯಿಂದ ಪಕ್ಷ ಭೇದ ಮರೆತು ಬಿಜೆಪಿ ಶಾಸಕಿ ಕೆ. ಪೂರ್ಣಿಮಾ, ಜಿ.ಎಚ್.ತಿಪ್ಪಾರೆಡ್ಡಿ, ಕಾಂಗ್ರೆಸ್ ಶಾಸಕ ಟಿ. ರಘುಮೂರ್ತಿ, ಮಾಜಿ ಸಚಿವ ಜಯಚಂದ್ರ, ಡಿ. ಸುಧಾಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ ಸೇರಿದಂತೆ ಎಲ್ಲ ಪಕ್ಷದ ಮುಖಂಡರು ಬೆಂಬಲ ಸೂಚಿಸಿ ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಮುಗಿಸಲು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಾವಿರಾರು ರೈತರು ಪಾಲ್ಗೊಂಡಿದ್ದು, ಚಿತ್ರದುರ್ಗ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ರೈತರು ಪ್ರತಿಭಟನೆ ಮುಂದುವರಿಸಿದ್ದು, ಸೋಮವಾರ ಹಿರಿಯೂರ್ ಬಂದ್ ಗೆ ಕರೆ ನೀಡಿದ್ದಾರೆ.