ಡೆಡ್ ಸ್ಟೋರೇಜ್ ಉಳಿಸಿ ಡ್ಯಾಂ ರಕ್ಷಿಸಿ: ಜು.2 ರಂದು ಪ್ರತಿಭಟನೆ
ಹಿರಿಯೂರು, ಜೂನ್ 15: ಚಿತ್ರದುರ್ಗ ಜಿಲ್ಲೆಯ ಏಕೈಕ ಅಣೆಕಟ್ಟು ಎಂದು ಕರೆಸಿಕೊಂಡಿರುವ ಹಿರಿಯೂರಿನ ವಿವಿ ಸಾಗರ (ಮಾರಿಕಣಿವೆ) ಜಲಾಶಯದ ನೀರು ದಿನ ಕಳೆದಂತೆ ಬತ್ತಿ ಹೋಗುತ್ತಿದ್ದು, ಡೆಡ್ ಸ್ಟೋರೇಜ್ ತಲುಪುತ್ತಿದೆ.
ಈಗಾಗಲೇ ತೊಟ್ಟಿ ನಿರ್ಮಿಸಿ ಮೋಟಾರ್ ನಿಂದ ನೀರು ಪಂಪಿಂಗ್ ಮಾಡಿ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆಯ DRDO ಕೇಂದ್ರಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಸದ್ಯದ ಡ್ಯಾಂ ನೀರಿನ ಮಟ್ಟ 61.5 ಅಡಿ ಮಾತ್ರ ಇದ್ದು, ಅಪಾಯದ ಮಟ್ಟಕ್ಕೆ ಬಂದು ನಿಂತಿದೆ. ಜಲಾಶಯದ ಹತ್ತಿರದ ಹೌಸಿಂಗ್ ಚೇಂಬರ್ ಗೆ ಪಂಪ್ ಹೌಸ್ ಮೂಲಕ ನೀರು ಕೊಡಲಾಗುತ್ತಿತ್ತು. ಇದೀಗ ಡ್ಯಾಂನಲ್ಲಿ ಕೆಳತೊಟ್ಟಿ ನಿರ್ಮಿಸಿ ಜಲಾಶಯದಲ್ಲಿ ನಾಲ್ಕು ಮೋಟಾರ್ ಅಳವಡಿಸಿ ಅದಕ್ಕೆ ಏಳು ಸ್ಟಾರ್ಟರ್ ಹಾಗೂ ಕೇಸಿಂಗ್ ಪೈಪ್ ಜೋಡಿಸಿ ತೊಟ್ಟಿಗೆ ನೀರು ಬಿಟ್ಟು ನಂತರ ಪಂಪ್ ಹೌಸ್ ಮೂಲಕ ನಗರಗಳಿಗೆ ಕುಡಿಯಲು ನೀರು ಕೊಡಲಾಗುತ್ತಿದೆ.
ಡೆಡ್ ಸ್ಟೋರೇಜ್ ತಲುಪಿದ ವಾಣಿ ವಿಲಾಸ ಜಲಾಶಯ ನೀರಿನ ಮಟ್ಟ
ಹತ್ತಾರು ವರ್ಷಗಳಿಂದ ತಾಲೂಕಿನಲ್ಲಿ ಮಳೆಯಾಗಿಲ್ಲ. ಡ್ಯಾಂ ಡೆಡ್ ಸ್ಟೋರೇಜ್ ತಲುಪಿದ ಹಿನ್ನೆಲೆ ಹಿರಿಯೂರು ಭಾಗದ ರೈತರಲ್ಲಿ ಆತಂಕ ಶುರುವಾಗಿದೆ. ಆದ್ದರಿಂದ ಜುಲೈ ಒಂದರಂದು ಹಿರಿಯೂರಿನಿಂದ ವಿವಿ ಸಾಗರಕ್ಕೆ ಪಾದಯಾತ್ರೆ ಮಾಡಿ, ಜುಲೈ 2ರಂದು, ವಿವಿ ಸಾಗರದಲ್ಲಿ 60 ಅಡಿ ತಲುಪಿದ ನೀರನ್ನು ಬಳಸಲು ಬಿಡದಂತೆ ಪ್ರತಿಭಟನೆ ನಡೆಸುವುದಾಗಿ ವಿವಿ ಸಾಗರ ಹೋರಾಟ ಸಮಿತಿಯವರು ತಿಳಿಸಿದರು.
ಸಭೆಯಲ್ಲಿ ಮಾತನಾಡಿ, ಒಂದು ವೇಳೆ ಉಳಿದ ಈ ನೀರನ್ನೂ ಬಳಸಿದರೆ ಜಲಾಶಯಕ್ಕೆ ತೊಂದರೆ ಉಂಟಾಗುತ್ತದೆ. ಜಲಚರಗಳು ಸಾಯಬೇಕಾಗುತ್ತದೆ. ಪರಿಸರವೂ ನಾಶವಾಗುತ್ತದೆ. ಹಾಗಾಗಿ ಡೆಡ್ ಸ್ಟೋರೇಜ್ ತಲುಪಿದ ನೀರನ್ನು ಬಳಸಬಾರದು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ರೈತ ಮುಖಂಡರು ಎಚ್ಚರಿಕೆ ನೀಡಿದರು.
ಭದ್ರಾ ಮೇಲ್ದಂಡೆ ಕಾಮಗಾರಿ ವಿಳಂಬವಾಗುತ್ತಿದೆ. ಕಾಮಗಾರಿಗೆ ಹಣವಿದ್ದ ಮೇಲೆ ತಡೆ ಏಕೆ? ನಮ್ಮ ತಾಲ್ಲೂಕಿನಲ್ಲಿ ತೋಟವನ್ನು ಉಳಿಸುವುದಕ್ಕೆ ಆಗಲಿಲ್ಲ, ಈಗ ಜಲಾಶಯವನ್ನಾದರೂ ಉಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡು ತಿಂಗಳಲ್ಲಿ ಭದ್ರಾ ನೀರು ವಿವಿ ಸಾಗರಕ್ಕೆ: ನಾರಾಯಣ ಸ್ವಾಮಿ
ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಡ್ಯಾಂ ಉಳಿಸಿಕೊಡಿ. ಬಹುಶಃ ಇತಿಹಾಸದಲ್ಲೇ ಡ್ಯಾಂಗೆ ಈ ಪರಿಸ್ಥಿತಿ ಬಂದಿರುವುದು ಇದೇ ಮೊದಲು. ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ನಗರಸಭೆಯ ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕು, ಡ್ಯಾಂ ಬಗ್ಗೆ ಚರ್ಚಿಸಬೇಕು ಎಂದು ಆಗ್ರಹಿಸಿದರು. ಸಭೆಯಲ್ಲಿ ವಿವಿ ಸಾಗರ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್, ಹೆಚ್.ಆರ್. ತಿಮ್ಮಯ್ಯ, ಶಿವಕುಮಾರ್, ಶಿವಣ್ಣ ದಿಂಡವಾರ, ಸಿದ್ದರಾಮಣ್ಣ, ಹಾಗೂ ವಿವಿಧ ಮುಖಂಡರು ಸೇರಿದಂತೆ ರೈತರು ಭಾಗವಹಿಸಿದ್ದರು.