ಹಿರಿಯೂರಿನಲ್ಲಿನ ಬೀದರ್-ಶ್ರೀರಂಗಪಟ್ಟಣ ರಸ್ತೆ ದುರಸ್ತಿ ಯಾವಾಗ?
ಚಿತ್ರದುರ್ಗ, ಫೆಬ್ರವರಿ 24: ಹಿರಿಯೂರು ಮೂಲಕ ಹಾದುಹೋಗುವ ಬೀದರ್ ಟು ಶ್ರೀರಂಗಪಟ್ಟಣ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಹುಲಗಲಕುಂಟೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಈ ರಸ್ತೆ ಹಿರಿಯೂರು ನಗರದಿಂದ ಹಾದುಹೋಗಿ, ಹುಳಿಯಾರ್ ಮೂಲಕ ಶ್ರೀರಂಗಪಟ್ಟಣ ಸೇರುತ್ತದೆ. ರಸ್ತೆ ಕಿರಿದಾಗಿದ್ದು, ರಸ್ತೆ ತುಂಬೆಲ್ಲ ಗುಂಡಿ ಬಿದ್ದು, ಡಾಂಬರೀಕರಣ ಕಿತ್ತು ಹಾಳಾಗಿ ಹೋಗಿದೆ. ಇಲ್ಲಿ ಪ್ರತಿನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಶಾಲಾ ಮಕ್ಕಳಿಗೆ, ವೃದ್ಧರಿಗೆ ತೊಂದರೆಯಾಗುತ್ತದೆ, ಈಗಾಗಲೇ ಅಪಘಾತಗಳಿಂದ ನೂರಾರು ಜನ ಸಾವನ್ನಪ್ಪಿದ್ದು, ಅನೇಕ ಜನರು ಕೈ ಕಾಲು ಮುರಿದು ಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಚಿತ್ರದುರ್ಗದಲ್ಲಿ ಫೆ.26 ರಂದು ಉದ್ಯೋಗ ಮೇಳ ನೀವು ಭಾಗವಹಿಸಿ
ರಸ್ತೆ ಗುಂಡಿಗಳನ್ನು ಮುಚ್ಚವಂತಹ ಕೆಲಸ ಕೂಡ ಮಾಡಿಲ್ಲ, ನಾವು ಹೇಗೆ ಪ್ರತಿನಿತ್ಯ ಅಡ್ಡಾಡಬೇಕು ಎಂದು ಪ್ರಶ್ನಿಸಿದರು.
ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತಿ ಸದಸ್ಯ ನಾಗೇಂದ್ರ ನಾಯ್ಕ ""ಸುಮಾರು ದಶಕಗಳಿಂದ ರಸ್ತೆ ಹಾಳಾಗಿದೆ, ದುರಸ್ತಿ ಕಾರ್ಯ ನಡೆದಿಲ್ಲ, ರಸ್ತೆ ಹಾಳಾಗಿರುವುದರಿಂದ ಅನೇಕ ಸಾವು-ನೋವುಗಳು ಸಂಭವಿಸಿವೆ. ಪ್ರಯಾಣಿಕರು ಜೀವವನ್ನು ಕೈಯಲ್ಲಿ ಹಿಡಿದು ಹೋಗಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಹಿರಿಯೂರಿನಲ್ಲಿ ಅಪಘಾತ; ಬರಲಿಲ್ಲ ಆಂಬುಲೆನ್ಸ್, ನರಳುತ್ತಿದ್ದವನ ನೋಡುತ್ತಾ ನಿಂತ ಜನ
ಅಧಿಕಾರಿಗಳು ಬಂದು ಬರಿ ಮಾಹಿತಿ ಪಡೆದುಕೊಂಡು ಹೋಗ್ತಾರೆ, ಪೋಲಿಸ್ ಇಲಾಖೆಯಲ್ಲಿ ಸಾವು-ನೋವಿನ ಬಗ್ಗೆ ದಾಖಲೆಗಳು ಇವೆ. ಅಧಿಕಾರಿಗಳ ಗಮನಕ್ಕೆ ತಂದರು ಏನು ಪ್ರಯೋಜನ ಇಲ್ಲ, ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಾರೆಂದು ಬೇಸರ ವ್ಯಕ್ತಪಡಿಸಿದ್ದು, ಸರ್ಕಾರ ಕೂಡಲೇ ಇದರ ಕಡೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ""ಪ್ರತಿನಿತ್ಯ ವ್ಯಾಪಾರ ವಹಿವಾಟು ನಡೆಸುವ ಮಂದಿ ಸಾಕಷ್ಟು ಸಂಖ್ಯೆಯಲ್ಲಿ ಬೆಳಿಗ್ಗೆ ಹಣ್ಣು, ಹಾಲು, ತರಕಾರಿ ಮಾರಾಟ ಮಾಡುವವರು ಬಿದ್ದು ಸಾವು-ನೋವು ಅನುಭವಿಸಿದ್ದಾರೆ. ಈ ಭಾಗದಲ್ಲಿ ಅನೇಕ ಜನರ ಅಪಘಾತದಲ್ಲಿ ಸಾವನ್ನಪ್ಪಿದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೇ ಕಾರಣ ಎಂದರು.
ರಸ್ತೆ ಪ್ರಾಧಿಕಾರ ಯಾವುದೇ ಸಬೂಬು ಹೇಳದೆ ನಾಳೆಯಿಂದ ರಸ್ತೆ ಕಾಮಗಾರಿ ಪ್ರಾರಂಭ ಮಾಡಬೇಕು.ಇಲ್ಲವಾದರೆ NH- 4 ರಸ್ತೆ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಶೀಲ್ದಾರ್ ಚಂದ್ರಕುಮಾರ್ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಿಂದ ಕೆಲಕಾಲ ಬಸ್, ಲಾರಿ ರಸ್ತೆಯಲ್ಲಿ ನಿಲ್ಲಬೇಕಾಯಿತು. ಪ್ರತಿಭಟನಾ ಸ್ಥಳದಲ್ಲಿ ಡಿವೈಎಸ್ಪಿ ರಮೇಶ್, ಸಿಪಿಐ ಚನ್ನೇಗೌಡ, ರೈತ ಮುಖಂಡ ಕೆ.ಸಿ.ಹೋರಕೆರಪ್ಪ, ಸುರೇಶ್ ಬಾಬು, ಸೇರಿದಂತೆ ವಿವಿಧ ಸಂಘಟನೆಗಳು, ಆಟೋ ಚಾಲಕರು ಮತ್ತಿತರರು ಭಾಗವಹಿಸಿದ್ದರು.