ದಲಿತ, ಮುಸ್ಲಿಮರ ಮೇಲೆ ದೌರ್ಜನ್ಯ ಖಂಡಿಸಿ ಹಿರಿಯೂರಿನಲ್ಲಿ ಪ್ರತಿಭಟನೆ
ಚಿತ್ರದುರ್ಗ, ಜುಲೈ 8: ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ದಲಿತ ಮತ್ತು ಮುಸ್ಲಿಮರ ಮೇಲೆ ಗುಂಪು ಹತ್ಯೆಗಳು ಹೆಚ್ಚಾಗಿ ನಡೆಯುತ್ತಿರುವುದನ್ನು ಖಂಡಿಸಿ ಇಂದು ಹಿರಿಯೂರಿನಲ್ಲಿ ಕನ್ನಡ ಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಮುಸ್ಲಿಂ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಬೃಹತ್ ಸಂಖ್ಯೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ದಲಿತ ಯುವಕನ ಬಟ್ಟೆ ಬಿಚ್ಚಿ ಹಲ್ಲೆ, ವಿಡಿಯೋ ಮಾಡಿದ್ದ ಇಬ್ಬರ ಬಂಧನ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಜೂನ್ 9ರಂದು ದಯಾನತ್ ಖಾನ್ ವಾಟ್ಸಪ್ ನಲ್ಲಿ ಮಿಲಾದಿನ ಹಸಿರು ಧ್ವಜವನ್ನು ಹಾಕಿಕೊಂಡಿದ್ದರಿಂದ ಆತನ ಸ್ನೇಹಿತರಾದ ಹೇಮಂತ, ಸಂಜು, ಲಕ್ಷಣ, ಯೋಗಿ, ಚೇತನ ಮತ್ತಿತರರು ಸೇರಿ ಶಿವಮೊಗ್ಗ ಜಿಲ್ಲೆಯ ಬಲ್ಬ್ ಫ್ಯಾಕ್ಟರಿ ಬಳಿ ಕೊಲೆ ಮಾಡಿದ್ದಾರೆ. ಆದರೆ ಇದು ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ಕೊಲೆ ಎಂಬ ಸುಳ್ಳು ಪ್ರಚಾರ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸತ್ಯಾಂಶ ಬಯಲಿಗೆಳೆಯಬೇಕು ಹಾಗೂ ದಯಾನತ್ ಖಾನ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ದಲಿತ ಯುವಕನ ಮೇಲಿನ ಹಲ್ಲೆ ಹಾಗೂ ಬೆತ್ತಲೆ ಮೆರವಣಿಗೆ ಪ್ರಕರಣ, ಮಂಗಳೂರಿನಲ್ಲಿ ಯುವತಿಗೆ ಗಾಂಜಾ ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿ ವಿಡಿಯೋ ವೈರಲ್ ಮಾಡಿದ ಪ್ರಕರಣವನ್ನೂ ಖಂಡಿಸಲಾಯಿತು.
ಗುಂಡ್ಲುಪೇಟೆಯಲ್ಲಿ ದಲಿತರು ಬೌದ್ಧ ಧರ್ಮ ಸ್ವೀಕರಿಸಿದ್ದೇಕೆ?
ಇಂಥ ದೌರ್ಜನ್ಯ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ಈ ಕೃತ್ಯಗಳ ಹಿಂದೆ ಇರುವ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಇವರ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.