ಚಿತ್ರದುರ್ಗ: ಕೊರೊನಾ ಸೋಂಕಿಗೆ ಖಾಸಗಿ ಸುದ್ದಿ ವಾಹಿನಿ ಕ್ಯಾಮರಾಮನ್ ಸಾವು
ಚಿತ್ರದುರ್ಗ, ಮೇ 12: ಮಹಾಮಾರಿ ಕೊರೊನಾ ಸೋಂಕಿಗೆ ಖಾಸಗಿ ಸುದ್ದಿ ವಾಹಿನಿಯ ಚಿತ್ರದುರ್ಗದ ಕ್ಯಾಮರಾಮನ್, ಕೊರೊನಾ ಫ್ರಂಟ್ ಲೈನ್ ವಾರಿಯರ್ ಬಸವರಾಜ್ ಕೋಟಿ (44) ಮೃತಪಟ್ಟಿದ್ದಾರೆ.
ಕಳೆದ ಒಂದು ವಾರದ ಹಿಂದೆ ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸವರಾಜ್ ಅವರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ನಿಧನರಾಗಿದ್ದಾರೆ.
ಕ್ರಿಯಾಶೀಲ ಪತ್ರಕರ್ತರಾಗಿದ್ದ ಧಾರವಾಡ ಮೂಲದ ಬಸವರಾಜ್ ಕೋಟಿ ಅವರು ಚಿತ್ರದುರ್ಗಕ್ಕೆ ವೃತ್ತಿ ಅರಸಿಕೊಂಡು ಬಂದವರು. ಎಲ್ಲರಿಗೂ ಅಪಾರ ಒಡನಾಡಿ, ಮಿತಭಾಷಿ, ಆದರೆ ಒಲವಿನ ಮಿತ್ರರಾಗಿದ್ದರು. ಪತ್ರಕರ್ತರು, ಕ್ಯಾಮರಾಮನ್ ಗಳು ಪ್ರಸ್ತುತ ಜಾಗೃತವಾಗಿರಬೇಕು ಎಂಬುದಕ್ಕೆ ಹತ್ತಾರು ಸಾಕ್ಷಿಗಳು ಕಣ್ಣ ಮುಂದಿವೆ.
ಸರ್ಕಾರ ಕೂಡಲೇ ಪತ್ರಕರ್ತ ಬಸವರಾಜ್ ಕೋಟಿ ಪತ್ನಿ ಮತ್ತು ಎರಡು ಪುಟ್ಟ ಮಕ್ಕಳ ಭವಿಷ್ಯಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರಿಗೆ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾದ ಮಾಲತೇಶ್ ಅರಸ್ ರಾಜ್ಯ ಸಮಿತಿ ಸದಸ್ಯರಾದ ಅರುಣ್ ಕುಮಾರ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಲಕ್ಷ್ಮಣ್, ಉಪಾಧ್ಯಕ್ಷ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಗೌಡಗೆರೆ ದಿನೇಶ್ ಮತ್ತು ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಮೃತರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಚಿತ್ರದುರ್ಗ ಜಿಲ್ಲೆ ಮತ್ತು ತಾಲ್ಲೂಕು ಪತ್ರಕರ್ತರು, ಅಧಿಕಾರಿಗಳು, ಜನಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.
Recommended Video