ಚಿತ್ರದುರ್ಗ ಜಿಲ್ಲೆಯಲ್ಲಿ ಗುಡುಗು ಗಾಳಿ ಸಹಿತ ಅಕಾಲಿಕ ಮಳೆ
ಚಿತ್ರದುರ್ಗ, ಫೆಬ್ರವರಿ 19: ಬಿಸಿಲಿನಿಂದ ಕಂಗೆಟ್ಟಿರುವ ಚಿತ್ರದುರ್ಗ ಜಿಲ್ಲೆಯ ಜನತೆಗೆ ಗುರುವಾರ ಸಂಜೆಯಿಂದ ವರುಣ ತಂಪೆರೆದಿದ್ದು, ಗಾಳಿ, ಗುಡುಗು-ಮಿಂಚು ಸಹಿತ ಅಕಾಲಿಕ ಮಳೆ ಸುರಿದಿದೆ.
ಇದರಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದು, ಇತ್ತ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ ಎಂದು ತಿಳಿದು ಬಂದಿದೆ.
ದಾವಣಗೆರೆಯಲ್ಲಿ ತಡರಾತ್ರಿವರೆಗೂ ಅಬ್ಬರಿಸಿದ ಮಳೆ: ಜನಜೀವನ ಅಸ್ತವ್ಯಸ್ತ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸುತ್ತಮುತ್ತ ಗುರುವಾರ ಸಂಜೆಯಿಂದ ಹಾಗೂ ಶುಕ್ರವಾರ ಬೆಳಿಗ್ಗೆಯಿಂದಲೇ ಗುಡುಗು ಸಹಿತ, ಆಲಿಕಲ್ಲು ಮಳೆಯಾಗುತ್ತಿದೆ. ಸುರಿಯುತ್ತಿರುವ ಅಕಾಲಿಕ ಮಳೆಗೆ ಸಣ್ಣ ಪುಟ್ಟ ಗುಂಡಿಗಳಲ್ಲಿ ನೀರು ನಿಂತಿವೆ.
ಇನ್ನು ಹೊಸದುರ್ಗ ತಾಲ್ಲೂಕಿನಲ್ಲಿ ಸಹ ಮಳೆಯಾಗಿದ್ದು, ಗುರುವಾರ ಸಂಜೆ ಸುರಿದ ಗಾಳಿ ಮಳೆಗೆ ತೆಂಗು, ಬಾಳೆ, ಇತರೆ ಮರಗಳು ಧರೆಗುರುಳಿವೆ ಎನ್ನಲಾಗಿದೆ. ಹೊಳಲ್ಕೆರೆ, ಚಳ್ಳಕೆರೆ ಸೇರಿದಂತೆ ಮೊಳಕಾಲ್ಮೂರು ತಾಲೂಕಿನಲ್ಲಿ ಸಹ ಮಳೆರಾಯ ದರ್ಶನವಾಗಿದೆ.
ಶುಕ್ರವಾರ ಬೆಳಿಗ್ಗೆ ಮಳೆಯಾಗುತ್ತಿರುವುದರಿಂದ ವಾಹನ ಸವಾರರು, ವ್ಯಾಪಾರಸ್ಥರು, ಮಳೆಯಿಂದಾಗಿ ಪರದಾಡುವಂತಾಗಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.
ಅಕಾಲಿಕ ಮಳೆಯೊಂದಿಗೆ ಕೆಲವೆಡೆ ಆಲಿಕಲ್ಲು ಬಿದ್ದಿದೆ. ಚಿತ್ರದುರ್ಗ ಜಿಲ್ಲೆಯಾದ್ಯಂತ ದಟ್ಟವಾದ ಮೋಡ ಕವಿದ ವಾತಾವರಣವಿದ್ದು, ಶುಕ್ರವಾರ ಸಂಜೆಯವರೆಗೂ ಮಳೆ ಸುರಿಯುವ ಮುನ್ಸೂಚನೆ ಇದೆ ಎನ್ನಲಾಗಿದೆ.
Recommended Video
ಒಟ್ಟಿನಲ್ಲಿ ಬಿಸಿಲ ಧಗೆಯಿಂದ ಕಂಗಾಲಾಗಿದ್ದ ಚಿತ್ರದುರ್ಗ ಜಿಲ್ಲೆಯ ನಗರ ಪ್ರದೇಶದ ಜನತೆಯ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ಈ ಅಕಾಲಿಕ ಮಳೆಯಿಂದ ಹಿಂಗಾರು ಕೃಷಿ ಬೆಳೆಗಳಾದ ಕಡಲೆ, ಜೋಳ ಹಾಗೂ ಕೆಲವು ಧಾನ್ಯಗಳಿಗೆ ಹಾನಿಯಾಗಿದೆ ಎಂದು ರೈತರು ನೋವು ವ್ಯಕ್ತಪಡಿಸಿದ್ದಾರೆ.