ಸಿಗದ ಸಚಿವ ಸ್ಥಾನ; ಹಿರಿಯೂರು ಬಂದ್ ಎಚ್ಚರಿಕೆ
ಚಿತ್ರದುರ್ಗ, ಆಗಸ್ಟ್ 05; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆಯಾಗಿದೆ. ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ಗೆ ಸಚಿವ ಸ್ಥಾನ ಕೈತಪ್ಪಿದೆ. ಶಾಸಕರ ಬೆಂಬಲಿಗರು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಗೊಲ್ಲ ಸಮುದಾಯದ ಏಕೈಕ ಶಾಸಕಿ ಪೂರ್ಣಿಮಾ ಶ್ರೀನಿವಾಸ್ಗೆ ಸಂಪುಟದಲ್ಲಿ ಸ್ಥಾನ ನೀಡದಿದ್ದರೆ ಹಿರಿಯೂರು ಬಂದ್ ಮಾಡಿ, ನಂತರ ಹಿರಿಯೂರಿನಿಂದ ಬೆಂಗಳೂರು ತನಕ ಲಕ್ಷಾಂತರ ಕಾರ್ಯಕರ್ತರು ಪಾದಯಾತ್ರೆ ಮಾಡಿ ಬೃಹತ್ ಪ್ರತಿಭಟನೆ ಮಾಡುವ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಹಿಂದುಳಿದ ವರ್ಗಗಳ ಮುಖಂಡರು ಸರ್ಕಾರಕ್ಕೆ ಹಾಗೂ ಬಿಜೆಪಿ ವರಿಷ್ಠರಿಗೆ ಖಡಕ್ ಎಚ್ಚರಿಕೆ ನೀಡಿದರು.
ಬಸವರಾಜ ಬೊಮ್ಮಾಯಿ ಸಂಪುಟ; ಚಿಕ್ಕಮಗಳೂರಿಗೆ ತಪ್ಪಿದ ಸಚಿವ ಸ್ಥಾನ
ಹಿರಿಯೂರು ಪಟ್ಟಣದ ಹುಳಿಯಾರು ರಸ್ತೆಯಲ್ಲಿರುವ ಲಕ್ಷ್ಮಮ್ಮ ಕಲ್ಯಾಣ ಮಂಟಪದಲ್ಲಿ ಗುರುವಾರ ಸಭೆ ನಡೆಸಿ ಮಾತಾನಾಡಿದ ನಗರಸಭೆ ಸದಸ್ಯ ಸಣ್ಣಪ್ಪ "ಹಿರಿಯೂರು ಕ್ಷೇತ್ರ ಹಿಂದುಳಿದಿದ್ದು ಅಭಿವೃದ್ಧಿ ದೃಷ್ಟಿಯಿಂದಲಾದರೂ ನಮ್ಮ ಶಾಸಕಿಗೆ ಸಚಿವ ಸ್ಥಾನ ನೀಡಬೇಕಿತ್ತು. ಒಂದು ವಾರದಿಂದ ಮಾಧ್ಯಮಗಳಲ್ಲಿ ಪೂರ್ಣಿಮಾ ಶ್ರೀನಿವಾಸ್ ಹೆಸರು ತೋರಿಸುತ್ತಿದ್ದರು. ಪ್ರಮಾಣ ವಚನ ಸ್ವೀಕಾರ ನೆಡೆಯುವ ಕೆಲವೇ ಕ್ಷಣದಲ್ಲಿ ನಮ್ಮ ನಾಯಕಿಯ ಹೆಸರು ತಿದ್ದಿ, ಕಳಂಕಿತರಿಗೆ, ಅದರಲ್ಲೂ ದೆಹಲಿಯಿಂದ ಬಂದವರಿಗೆ ಝಿರೋ ಟ್ರಾಫಿಕ್ ಮೂಲಕ ಸ್ವಾಗತಿಸಿ ಸ್ಥಾನ ನೀಡಿರುವುದು ಖಂಡನೀಯ" ಎಂದರು.
ಸಂಪುಟ; ಹಿರಿತನ, ಸಾಮಾಜಿಕ ನ್ಯಾಯಕ್ಕೆ ಬೆಲೆ ಇಲ್ಲ ಎಂದ ತಿಪ್ಪಾರೆಡ್ಡಿ
"ವ್ಯವಸ್ಥಿತ ರೀತಿಯಲ್ಲಿ ಎಲ್ಲಾ ಸಮಾಜವನ್ನು ಒಗ್ಗೂಡಿಸಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಶಾಸಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಶಿರಾ ಉಪಚುನಾವಣೆಯ ಗೆಲುವಿಗೆ ಪೂರ್ಣಿಮಾ ಕಾರಣರಾಗಿದ್ದಾರೆ. ಇಂತಹ ಒಂದು ಮಹಿಳೆಗೆ ಅನ್ಯಾಯವಾಗಿದೆ. ಉಳಿದ ನಾಲ್ಕು ಸ್ಥಾನಗಳಲ್ಲಿ ಒಂದು ಸ್ಥಾನ ಇವರಿಗೆ ನೀಡಬೇಕು" ಎಂದು ಆಗ್ರಹಿಸಿದರು.
ಪೂರ್ಣಿಮಾ ಶ್ರೀನಿವಾಸ್ಗೆ ಸಚಿವ ಸ್ಥಾನವಿಲ್ಲ; ಹೆದ್ದಾರಿ ತಡೆದು ಆಕ್ರೋಶ
ನಗರಸಭೆ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್ ಮಾತನಾಡಿ, "ತಮಿಳುನಾಡಿನಲ್ಲಿ ಜಯಲಲಿತಾಗೆ ಅಮ್ಮ ಎಂದು ಕರೆಯುತ್ತಿದ್ದರು. ನಾವು ನಮ್ಮ ತಾಲೂಕಿನಲ್ಲಿ ಅಕ್ಕ ಎಂದು ಕರೆಯುತ್ತೇವೆ. ಶಾಸಕ ಸ್ಥಾನಕ್ಕಿಂತ ಅಕ್ಕ ಎನ್ನುವ ಸ್ಥಾನ ದೊಡ್ಡದಿದೆ. ಪ್ರೀತಿ ವಿಶ್ವಾಸದಿಂದ ಕಾಣುವ ಏಕೈಕ ಶಾಸಕಿ ಎಂದರೆ ಅದು ಪೂರ್ಣಿಮಾ ಶ್ರೀನಿವಾಸ್ ಮಾತ್ರ" ಎಂದರು.
"ಹಿಂದೆ ಪೂರ್ಣಿಮಾರನ್ನು ಗೆಲ್ಲಿಸಿ ಕೊಂಡು ಬಂದರೆ ಸಚಿವ ಸ್ಥಾನ ನೀಡುವುದಾಗಿ ಬಿಜೆಪಿಯ ಅರವಿಂದ ಲಿಂಬಾವಳಿ ಹೇಳಿದ್ದರು. ಇವತ್ತು ನಮಗೆ ತುಂಬಾ ಅನ್ಯಾಯವಾಗಿದೆ. ಇದರ ಜೊತೆಗೆ ಬೋವಿ ಸಮಾಜಕ್ಕೆ ಪದವಿ ತಪ್ಪಿಸಿರುವುದು ಸಹ ತುಂಬಾ ಅನ್ಯಾಯ ಮಾಡಿದಂತಾಗಿದೆ. ನಮ್ಮ ಸಮುದಾಯಕ್ಕೆ ಮೋಸ ಮಾಡಲಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ರಾಜ್ಯದಲ್ಲಿ ಗೊಲ್ಲ ಸಮುದಾಯದ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯದ ಓರ್ವ ಮಹಿಳೆ ಕೋಲಾರದಿಂದ ಬೆಳಗಾವಿಯವರೆಗೆ ತಿರುಗಿ ಪಕ್ಷ ಕಟ್ಟುತ್ತಿದ್ದಾರೆ. ಇಂತಹ ಮಹಿಳೆಗೆ ಸಚಿವ ಸ್ಥಾನ ನೀಡಿದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಮತ್ತಷ್ಟು ಬಲ ಬರುತ್ತದೆ. ಸ್ಥಾನ ನೀಡಲಿಲ್ಲ ಎಂದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗುತ್ತದೆ" ಎಂದು ಎಚ್ಚರಿಸಿದರು.
ಹಿರಿಯೂರು ಬಂದ್ಗೆ ಕರೆ ನೀಡಿ, ನಂತರ ಲಕ್ಷಾಂತರ ಕಾರ್ಯಕರ್ತರು, ಹಿಂದುಳಿದ ವರ್ಗಗಳ ಮುಖಂಡರೊಂದಿಗೆ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡು ಬೃಹತ್ ಪ್ರತಿಭಟನೆ ನಡೆಸಿ ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ. ಧರ್ಮಪುರ, ಜವಗೊಂಡನಹಳ್ಳಿ, ಐಮಂಗಲ ಹಾಗೂ ಕಸಬಾ ಹೋಬಳಿಯಿಂದ ಹಿರಿಯೂರು ನಗರಕ್ಕೆ ಪಾದಯಾತ್ರೆ ಕೈಗೊಳ್ಳಲಾಗಿದೆ.
ಸಭೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್, ಮಾಜಿ. ಜಿ.ಪ. ಸದಸ್ಯೆ ರಾಜೇಶ್ವರಿ, ಮಾಜಿ ನಗರಸಭೆ ಸದಸ್ಯ ತಿಮ್ಮಣ್ಣ, ಜಿಲ್ಲಾ ಬಿಜೆಪಿ ಮುಖಂಡ ಮಂಜುನಾಥ್ ಮುಂತಾದವರಿದ್ದರು.
Recommended Video
ಸಂಪುಟ ಸೇರುವವರ ಪಟ್ಟಿಯಲ್ಲಿ ಕೆ. ಪೂರ್ಣಿಮಾ ಶ್ರೀನಿವಾಸ್ ಹೆಸರು ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಬುಧವಾರ ಕೊನೆಗಳಿಗೆಯಲ್ಲಿ ಇದ್ದಕ್ಕಿದ್ದಂತೆ ಪೂರ್ಣಿಮಾ ಹೆಸರು ಮಾಯವಾಗಿತ್ತು. ಇದನ್ನು ಗಮನಿಸಿದ ಕಾರ್ಯಕರ್ತರು ಚಿತ್ರದುರ್ಗ- ಬೆಂಗಳೂರು, ತುಮಕೂರು- ದಾವಣಗೆರೆ ರಸ್ತೆ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿದ್ದರು.