ವಾಣಿಜ್ಯ ತೆರಿಗೆ ಆಯುಕ್ತನಾಗಿ ಆಯ್ಕೆಯಾಗಿ ತನ್ನ ತಾಯಿ ಋಣ ತೀರಿಸಿದ ಮಗ
ಚಿತ್ರದುರ್ಗ, ಡಿಸೆಂಬರ್ 26: ಕಡು ಬಡತನವನ್ನೇ ಹಾಸು ಹೊದ್ದಿರುವ ಕುಟುಂಬ. ಜಮೀನಿನಲ್ಲಿ ಆ ಮನೆಯ ತಾಯಿ ಕೆಲಸ ಮಾಡಿದರಷ್ಟೇ ಆ ದಿನದ ತುತ್ತು ಮಕ್ಕಳ ಕೈ ಸೇರುತ್ತಿದ್ದುದು. ಹೀಗೆ ಕಷ್ಟಗಳನ್ನು ಉಂಡು, ಕೂಲಿನಾಲಿ ಮಾಡಿ ಆ ತಾಯಿ ಮಕ್ಕಳನ್ನು ಸಾಕಿದ್ದಕ್ಕೆ ಕೊನೆಗೂ ಫಲ ಸಿಕ್ಕಿದೆ. ಈ ತಾಯಿಯ ಮಗ ಇಂದು ವಾಣಿಜ್ಯ ತೆರಿಗೆ ಆಯುಕ್ತರಾಗಿ ಸಾಧನೆ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಂದ್ರೆಹಳ್ಳಿ ಎಂಬ ಕುಗ್ರಾಮದ ದಿ.ಕೆ. ಮುದ್ದಪ್ಪ ಮತ್ತು ಪುಟ್ಟರಂಗಮ್ಮ ಇವರ ಮೂರನೇ ಮಗ ಎಂ. ರಂಗನಾಥ್ ವಾಣಿಜ್ಯ ತೆರಿಗೆ ಆಯುಕ್ತರಾಗಿದ್ದಾರೆ.
ತರಕಾರಿ ಮಾರಾಟಗಾರನ ಮಗಳು ಖಜಾನೆ ಅಧಿಕಾರಿಯಾದ ಸಾಹಸಗಾಥೆ
ಬಾಲ್ಯದಲ್ಲೇ ತಂದೆ ಕಳೆದುಕೊಂಡಿದ್ದ ರಂಗನಾಥ್: ರಂಗನಾಥ್ ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆದರು. ಇದೀಗ ಗುರುವಿನ ಮಾರ್ಗದರ್ಶನದ ಮೂಲಕ ತಾವು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ರಂಗನಾಥ ಅವರಿಗೆ ಇಬ್ಬರು ಅಣ್ಣಂದಿರು ಇದ್ದಾರೆ. ಮಸ್ಕಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿ, ಜಡೆಗೊಂಡನಹಳ್ಳಿ ಪ್ರಾಥಮಿಕ ಶಾಲೆ, ಹೇಮದಳ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಹಿರಿಯೂರಿನ ಜೂನಿಯರ್ ಕಾಲೇಜ್ ನಲ್ಲಿ ಪಿಯುಸಿ ಮುಗಿಸಿ ನಂತರ ಚಿತ್ರದುರ್ಗ ಜಿಲ್ಲೆಯ ಎಂ.ಎಂ ಪ್ರೌಢಶಾಲೆಯಲ್ಲಿ (ಈಗಿನ ವೆಂಕಟೇಶ್ವರ ಕಾಲೇಜ್) ಪದವಿ ಶಿಕ್ಷಣ ಪಡೆದಿದ್ದಾರೆ.
ಡಿಗ್ರಿ ಮಾಡುವಾಗ ದೊರೆತ ಸೈನಿಕ ಹುದ್ದೆ: ದ್ವಿತೀಯ ಬಿಎ ಮಾಡುತ್ತಿರುವಾಗ ಸೈನಿಕ ಹುದ್ದೆಗೆ ಆಯ್ಕೆಯಾದರು. ಆದರೆ ದೇಶ ಸೇವೆ ಮಾಡುವುದರ ಜೊತೆಗೆ ಓದುವ ಅಭ್ಯಾಸವನ್ನು ಕೈಬಿಡಲಿಲ್ಲ. ಹಾಗಾಗಿ ಮೈಸೂರು ವಿಶ್ವವಿದ್ಯಾಲಯದ ದೂರ ಶಿಕ್ಷಣದ ಮೂಲಕ ಅಂತಿಮ ವರ್ಷದ ಪದವಿಯನ್ನು ಮುಗಿಸಿದರು. ಸೈನಿಕ ವೃತ್ತಿಯಲ್ಲಿದ್ದುಕೊಂಡು ಓದಿನ ಹವ್ಯಾಸವನ್ನು ಮುಂದುವರಿಸಿದ ರಂಗನಾಥ್ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ದೂರ ಶಿಕ್ಷಣದ ಮೂಲಕ ಪಡೆದರು.
2017ನೇ ಸಾಲಿನಲ್ಲಿ ಕೆಪಿಎಸ್ ಸಿ ಪರೀಕ್ಷೆ ಬರೆಯುವ ಮೂಲಕ ಮೊದಲ ಹಂತದಲ್ಲೇ ವಾಣಿಜ್ಯ ತೆರಿಗೆ ಆಯುಕ್ತರಾಗಿ ಹೊರಹೊಮ್ಮಿದ್ದಾರೆ. "ಅಂದು ನನ್ನ ತಾಯಿ ಬೇರೆಯವರ ಹೊಲದಲ್ಲಿ ಕೂಲಿ ನಾಲಿ ಮಾಡಿಕೊಂಡು ಬಂದು ನನ್ನನ್ನು ಓದಿಸಿದ ಫಲ ಇಂದು ದೊರೆತಿದೆ. ಡಿವೈಎಸ್ಪಿ ಆಗಬೇಕು ಎಂಬುದು ನನ್ನ ಕನಸು" ಎಂದು ಸಂತಸ ಹಂಚಿಕೊಂಡಿದ್ದಾರೆ ರಂಗನಾಥ್.