ಪ್ರಚಾರಕ್ಕೆ ಮೀಸಲಾದ ಮುಖ್ಯಮಂತ್ರಿಗಳ ಜನತಾ ದರ್ಶನ, ಸಿಗಲಿಲ್ಲ ನ್ಯಾಯ
ಚಿತ್ರದುರ್ಗ, ಆಗಸ್ಟ್ 19: ಬಡ ಕುಟುಂಬಗಳಿಗೆ ಖುದ್ದು ಮುಖ್ಯಮಂತ್ರಿಯೇ ಭರವಸೆ ಕೊಟ್ಟರೂ ನ್ಯಾಯ ಸಿಗುತ್ತಿಲ್ಲ ಎನ್ನುವಂತಾಗಿದ್ದು, ಸಾಲ ಮಂಜೂರು ಮಾಡುವಂತೆ ಬಡ ಕುಟುಂಬಗಳು ಎರಡು ವರ್ಷಗಳಿಂದ ಬ್ಯಾಂಕಿಗೆ ಅಲೆದಲೆದು ಸುಸ್ತಾಗಿ ಕಣ್ಣೀರು ಹಾಕುವ ಪರಿಸ್ಥಿತಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಗಂಗಸಮುದ್ರ ಗ್ರಾಮದ ಬಡ ಕುಟುಂಬದ್ದಾಗಿದೆ.
Recommended Video
ಈ ಹಿಂದೆ ಸಾಲದ ಸುಳಿಗೆ ಸಿಲುಕಿ ಬಡ ಕುಟುಂಬ ಆತ್ಮಹತ್ಯೆಗೆ ಮುಂದಾಗಿತ್ತು. ಇದನ್ನು ಕಂಡ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ ಕುಮಾರಸ್ವಾಮಿ ಅವರು ಈ ಬಡ ಕುಟುಂಬಕ್ಕೆ ನೆರವು ನೀಡುವ ಭರವಸೆ ಕೊಟ್ಟಿದ್ದರು. ಆದರೆ ಇತ್ತ ರಾಜ್ಯದ ಮುಖ್ಯಮಂತ್ರಿಗಳ ಆದೇಶವನ್ನು ಬ್ಯಾಂಕ್ ವ್ಯವಸ್ಥಾಪಕರು ನಿರ್ಲಕ್ಷಿಸಿದ್ದಾರೆ.
ಚಿತ್ರದುರ್ಗದ ಕಾದಂಬರಿಕಾರನ ಮೇಲೆ ಕೋವಿಡ್-19 ಲಸಿಕೆ ಪ್ರಯೋಗ
ಎರಡು ವರ್ಷಗಳ ಹಿಂದೆ ಎಚ್.ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಈ ಬಡ ಕುಟುಂಬಗಳಿಗೆ ಭರವಸೆ ನೀಡಿದ್ದರು. ಆದರೆ ಇದೀಗ ಅವರ ಭರವಸೆ ಠುಸ್ ಆಗಿದೆ. ಇಪ್ಪತ್ತಕ್ಕೂ ಹೆಚ್ಚು ಬಾರಿ ವಿಧಾನಸೌಧ, ಸಿಎಂ ಗೃಹ ಕಚೇರಿಗೆ ರಂಗಸ್ವಾಮಿ ಕುಟುಂಬ ಅಲೆದಾಡಿದೆ.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಸತಾಯಿಸುತ್ತಿದ್ದಾರೆ
ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ, ಇಬ್ಬರು ಡಿಸಿಗಳು, ಲೀಡ್ ಬ್ಯಾಂಕ್ ಮ್ಯಾನೇಜರ್, ದೇವರಾಜ್ ಅರಸ್ ಅಭಿವೃದ್ಧಿ ನಿಗಮದ ಅಧಿಕಾರಿಗಳ ಆದೇಶಕ್ಕೂ ಬ್ಯಾಂಕ್ ಮ್ಯಾನೇಜರ್ ಜಗ್ಗುತ್ತಿಲ್ಲ ಎಂಬುದು ರಂಗಸ್ವಾಮಿ ಕುಟುಂಬ ಆರೋಪವಾಗಿದ್ದು, ಅವರು ಕೇಳಿದ ದಾಖಲೆಗಳನ್ನೆಲ್ಲಾ ಕೊಟ್ಟರೂ ಸಾಲ ಮಂಜೂರು ಮಾಡದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ.
ಬಿಸ್ಕೇಟ್ ತಗೊಳೋಕೂ ನಮ್ ಹತ್ರ ಹತ್ತು ರುಪಾಯಿ ಇಲ್ಲ
""ಜೀವನ ಬಹಳ ಕಷ್ಟ ಆಗ್ತಿದೆ, ಪ್ರತಿದಿನ ಮಕ್ಕಳು ಬಿಸ್ಕೇಟ್ ಕೆಳ್ತಾರೆ, ನಮಗೆ ಬಿಸ್ಕೇಟ್ ತಗೊಳೋಕೂ ನಮ್ ಹತ್ರ ಹತ್ತು ರುಪಾಯಿ ಸಹ ಕಾಸು ಇಲ್ಲ ಸರ್, ಹೊಲಕ್ಕೆ ಮೂರ್ನಾಲ್ಕು ಲಕ್ಷ ಬಂಡವಾಳ ಹಾಕಿದ್ವಿ, ಸರಿಯಾದ ಬೆಲೆ ಸಿಗಲಿಲ್ಲ, ಸಂಘದಲ್ಲಿ ಸಾಲ ಮಾಡಿ ಈರುಳ್ಳಿ ಬೆಳೆ ಬೆಳೆದ್ವಿ, ತುಂಬಾ ನಷ್ಟ ಆಯ್ತು'' ಎಂದು ಅಲವತ್ತುಕೊಂಡರು.
ಸೊಸೈಟಿಯಲ್ಲಿ ಕೊಡುವ ಅಕ್ಕಿಯಿಂದ ಅನ್ನ ತಿನ್ಕೋಂಡು ಜೀವನ
""ನಮ್ ಮನೆಯಲ್ಲಿ ರಾಗಿ ಸಹ ಇಲ್ಲ, ಸೊಸೈಟಿಯಲ್ಲಿ ಕೊಡುವ ಅಕ್ಕಿಯಿಂದ ಅನ್ನ ತಿನ್ಕೋಂಡು ಜೀವನ ಮಾಡ್ತಿದೀವಿ, ಜೀವನ ಬಹಳ ಕಷ್ಟ ಆಗ್ತಿದ್ದು, ನನ್ನ ಗಂಡ ಸಾಯ್ತಿನಿ ಅಂತ ಹೊರಟಿದ್ರು'' ಎಂದು ತಮ್ಮ ನೋವು ತೊಡಿಕೊಂಡರು.
ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಿ
""ನಾವು ಸತ್ತರೆ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ, ನಮಗೆ ಬದುಕಲು ದಾರಿ ತೋರಿಸಿ, ಇಲ್ಲದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಿ ಎನ್ನುತ್ತಿರುವ ಬಡ ಕುಟುಂಬದ ಮಹಿಳೆ ಕಣ್ಣೀರು ಹಾಕುತ್ತಿದ್ದಾರೆ. ನ್ಯಾಯ ಸಿಗಲಿಲ್ಲ ಅಂದ್ರೆ ನಾವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕುಟುಂಬದವರು ಕಣ್ಣೀರು ಸುರಿಸುತ್ತಿದ್ದಾರೆ. ಈ ಬಡ ಕುಟುಂಬಗಳ ಕಣ್ಣೀರಿಗೆ ಬ್ಯಾಂಕ್ ಮ್ಯಾನೇಜರ್ ಬದಲಾಗಿ ಸಾಲ ಸೌಲಭ್ಯ ನೀಡುತ್ತಾರಾ ಕಾದು ನೋಡಬೇಕಿದೆ.