ಬೇಡ ಜಂಗಮ ಹೋರಾಟಗಾರರನ್ನು ಹಿರಿಯೂರು ಬಳಿ ಅರ್ಧದಲ್ಲೇ ತಡೆದ ಪೋಲಿಸರು..!
ಚಿತ್ರದುರ್ಗ, ಜೂ30 : ಬೇಡ ಜಂಗಮ ಸತ್ಯಪ್ರತಿಪ್ರಾದನ ಸತ್ಯಾಗ್ರಹ ನಡೆಸಲು ಬೆಂಗಳೂರಿಗೆ ಹೊರಟಿದ್ದ ಹೋರಾಟಗಾರರನ್ನು ಅರ್ಧದಲ್ಲೇ ಪೋಲಿಸರು ತಡೆದ ಘಟನೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೂಯಿಲಾಳು ಟೋಲ್ ಬಳಿ ಗುರುವಾರ ನಡೆದಿದೆ.
ಸರ್ಕಾರ ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ
ಉತ್ತರ ಕರ್ನಾಟಕದ ಭಾಗದ ಹುಬ್ಬಳ್ಳಿ ಧಾರವಾಡ ವಿಜಯಪುರ ಹೀಗೆ ವಿವಿಧ ಜಿಲ್ಲೆಗಳಿಂದ ಹೋರಾಟ ನಡೆಸಲು 10 ಬಸ್ ಹಾಗೂ 10 ಕ್ಕೂ ಹೆಚ್ಚು ಕ್ರೂಸರ್ ವಾಹನಗಳಲ್ಲಿ ಹೋರಾಟಗಾರರು ತೆರಳುತ್ತಿದ್ದಾಗ ವಾಹನಗಳನ್ನು ಪೋಲಿಸರು ರಸ್ತೆ ಮಧ್ಯದಲ್ಲಿ ತಡೆದು ನಿಲ್ಲಿಸಿದ್ದಾರೆ. ಹೋರಾಟಗಾರರೆಲ್ಲರು ಬೆಂಗಳೂರಿನ ಫ್ರೀಡಂ ಪಾರ್ಕ್ ಗೆ ವಾಹನದಲ್ಲಿ ತೆರಳುತ್ತಿದ್ದರು. ಹೋರಾಟಗಾರನ್ನು ಬೆಂಗಳೂರಿಗೆ ಹೋಗದಂತೆ ಪೊಲೀಸರು ತಡೆದು ನಿಲ್ಲಿಸಿದ್ದು ಸರ್ಕಾರ ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ಮಾಡಿದೆ ಎಂದು ಹೋರಾಟಗಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೀಸಲಾತಿಗಾಗಿ ಹೋರಾಟ
ಬೇಡ ಜಂಗಮ ಸಮುದಾಯದವರು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಹೋರಾಟಗಾರರು ಬೆಂಗಳೂರು ಕಡೆ ಪ್ರಯಾಣಿಸುವಾಗ ಹೋರಾಟಗಾರರ ವಾಹನಗಳನ್ನು ಪೋಲಿಸರು ತಡೆದು ನಿಲ್ಲಿಸಿದ್ದಾರೆ. ವಾಹನಗಳ ತಡೆದಿದ್ದಕ್ಕೆ ಟೋಲ್ ಮುಂಭಾಗ ಫುಲ್ ಟ್ರಾಫಿಕ್ ಜಾಮ್ ಉಂಟಾಗಿ ಇತರೆ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದೆ ಎನ್ನಬಹುದು. ಸದ್ಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸರ್ವೀಸ್ ರೋಡ್ ನಲ್ಲಿ ಧರಣಿ ಕುಳಿತಿರುವ ಹೋರಾಟಗಾರರು. ನೂರಾರು ಮಂದಿ ಹೋರಾಟಗಾರರು ಪ್ರತಿಭಟನಾ ಧರಣಿಯಲ್ಲಿ ಭಾಗಿಯಾಗಿದ್ದರು.ನಾವು ಯಾರ ವಿರುದ್ಧವಾಗಲಿ ಅಥವಾ ಹಕ್ಕು ಕಸಿದುಕೊಳ್ಳುವುದಕ್ಕಾಗಿ ಹೋರಾಡುತ್ತಿಲ್ಲ. ನಮಗೆ ನ್ಯಾಯಸಮ್ಮತವಾಗಿ ದೊರೆಯಬೇಕಾದ ಹಕ್ಕಿಕ್ಕಾಗಿ ದನಿ ಎತ್ತುತ್ತಿದ್ದೇವೆ. ಬೇಡ ಜಂಗಮರ ಮೀಸಲಾತಿ ಕುರಿತು ಸದನದಲ್ಲಿ ಪ್ರಸ್ತುತ ನಡೆಯುತ್ತಿರುವ ಚರ್ಚೆ ನಾಣ್ಯದ ಒಂದು ಮುಖ ಮಾತ್ರ. ವಾಸ್ತವವಾಗಿ, ಬೇಡ ಜಂಗಮರ ಮೀಸಲಾತಿ ಅಪೇಕ್ಷಿತರ ಒಕ್ಕೂಟ ಸಿದ್ದಪಡಿಸಿರುವ ದಾಖಲೆಗಳು ಮತ್ತು ಇತರ ವಾದವನ್ನು ಪರಿಗಣಿಸಿದಾಗ ಮಾತ್ರ ಚರ್ಚೆಗೆ ಒಂದು ಬೆಲೆ ಬರುತ್ತದೆ ಎಂದು ಆಕ್ರೋಶವ್ಯಕ್ತಪಡಿಸಿದರು.
Recommended Video