ಸಾಲ ವಾಪಸ್ ಕೇಳಿದ್ದಕ್ಕೆ ಮತ್ತು ಬೆರೆಸಿದ ಜೂಸ್ ಕುಡಿಸಿ ವೀಡಿಯೋ ಮಾಡಿದ ಪೇದೆ
ಚಿತ್ರದುರ್ಗ, ನವೆಂಬರ್ 19: ಕೊಟ್ಟಿದ್ದ ಸಾಲ ವಾಪಸ್ ಕೇಳಿದ್ದಕ್ಕೆ ಆ ಮಹಿಳೆಯನ್ನು ಮನೆಗೆ ಕರೆಸಿಕೊಂಡು ಮತ್ತು ಬೆರೆಸಿದ ಜೂಸ್ ಕುಡಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಚಿತ್ರದುರ್ಗದ ಪೊಲೀಸ್ ಪೇದೆಯೊಬ್ಬರ ಮೇಲೆ ಕೇಳಿಬಂದಿದೆ.
ಚಿತ್ರದುರ್ಗ ಡಿಎಆರ್ ಪೇದೆ ರೇಣುಕಪ್ಪ ಎಂಬುವರ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಸಂಚು ರೂಪಿಸಿ ವಂಚಿಸಿದ್ದು, ಜೂನ್ ನಲ್ಲೇ ಈ ಬಗ್ಗೆ ದೂರು ನೀಡಿದ್ದರೂ ಯಾರೂ ಗಮನ ಹರಿಸುತ್ತಿಲ್ಲ ಎಂದು ಮಹಿಳೆಯು ಆರೋಪ ಮಾಡಿದ್ದಾರೆ.
ಪಾನೀಯಕ್ಕೆ ಮತ್ತು ಬೆರೆಸಿದ ಪೇದೆ ಮತ್ತು ಪತ್ನಿ
ರೇಣುಕಪ್ಪ ಸಾಲದ ಹಣ ಹಿಂತಿರುಗಿಸುವುದಾಗಿ ಮಹಿಳೆಯನ್ನು ಮನೆಗೆ ಕರೆಸಿಕೊಂಡು ಮತ್ತು ಮಿಶ್ರಿತ ಜ್ಯೂಸ್ ಕುಡಿಸಿ ಆಕೆಯ ಅಶ್ಲೀಲ ವೀಡಿಯೋ ಚಿತ್ರೀಕರಿಸಿದ್ದು, ಇದಕ್ಕೆ ಆತನ ಹೆಂಡತಿಯೂ ಸಹಕರಿಸಿರುವುದಾಗಿ ಮಹಿಳೆ ಹೇಳಿಕೆ ನೀಡಿದ್ದಾರೆ. ಈ ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಜೊತೆಗೆ ಈ ಪೇದೆ ತನ್ನ ಪತಿಯ ಸ್ನೇಹಿತನಾಗಿದ್ದು, ವಂಚನೆ ಎಸಗಿದ್ದಾರೆ ಎಂದು ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪದ ಸುಳಿಯಲ್ಲಿ ಮೈಸೂರಿನ ಬಿಷಪ್; ತನಿಖೆಗೆ ಆಗ್ರಹ
ಸಂತ್ರಸ್ತ ಮಹಿಳೆ ಏನಂತಾರೆ?
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳೆ, "ಜ್ಯೂಸ್ ಕುಡಿಸಿದ ನಂತರ ರೇಣುಕಪ್ಪ ಹಾಗೂ ಅವರ ಪತ್ನಿ ನನ್ನ ಅಶ್ಲೀಲ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ವಿಡಿಯೋ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ನನ್ನ ಬಳಿಯಿದ್ದ ಹಣ ಪಡೆದಿದ್ದಾರೆ. ನಾನು ಈ ಬಗ್ಗೆ ಮಹಿಳಾ ಎಸ್ ಪಿ ಕಚೇರಿಗೆ ಹೋಗಿ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದೆ" ಎಂದು ತಿಳಿಸಿದ್ದಾರೆ. ಜೂನ್ 3, 2019ರಂದು ಪೇದೆ ವಿರುದ್ಧ ಪ್ರಕರಣ ದಾಖಲಾಗಿದ್ದು, ಚಿತ್ರದುರ್ಗ ಮಹಿಳಾ ಠಾಣೆ ಸಿಬ್ಬಂದಿ ಈ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ನ್ಯಾಯಕ್ಕೆ ಎಸ್ ಪಿ ಕಚೇರಿ ಮೆಟ್ಟಿಲೇರಿದ ಮಹಿಳೆ
ತನ್ನನ್ನು ಮನೆಗೆ ಕರೆಸಿ ರೂಮಿನ ಒಳಗೆ ಸೇರಿ ನನ್ನ ಗಂಡನಿಗೆ ಫೋನ್ ಮಾಡಿ ನನ್ನ ಸಂಸಾರವನ್ನೂ ಹಾಳು ಮಾಡಿದ್ದಾರೆ. ನನಗೆ ಬೇರೆಯವನ ಜೊತೆ ಸಂಬಂಧ ಇದೆ ಎಂದು ನಂಬಿ ನನ್ನ ಗಂಡ ಮನೆಯಿಂದ ಹೊರಹಾಕಿದ್ದಾರೆ. ನಾನು ಈಗ ಬೀದಿಗೆ ಬಿದ್ದಿದ್ದೇನೆ. ನನಗೆ ನ್ಯಾಯ ಕೊಡಿಸಿ ಎಂದು ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾರೆ ಈ ಮಹಿಳೆ.
ಗೊಗೋಯಿಗೆ ಕಪ್ಪು ಚುಕ್ಕೆಯಾಗಿ ಉಳಿದ ಲೈಂಗಿಕ ಕಿರುಕುಳ ಕೇಸ್
ಮಹಿಳೆಯ ಬೆಂಬಲಕ್ಕೆ ಧರಣಿ ಮಹಿಳಾ ಸಂಸ್ಥೆ
ದೂರು ನೀಡಿದರೂ ನನಗೆ ನ್ಯಾಯ ಸಿಕ್ಕಿಲ್ಲ ಎಂದು ಪೊಲೀಸರ ವಿರುದ್ಧ ಸಂತ್ರಸ್ತೆ ಆರೋಪ ಮಾಡಿದ್ದು, ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ. ಪೊಲೀಸರು ಆರೋಪಿಯಿಂದ ಲಂಚ ಪಡೆದು ತನಗೆ ಮೋಸ ಮಾಡಿದ್ದಾರೆ ಎಂದಿದ್ದಾರೆ. ಧರಣಿ ಮಹಿಳಾ ಸಂಸ್ಥೆ ಅಧ್ಯಕ್ಷೆ ರಮಾ ನಾಗರಾಜ್ ಈ ಮಹಿಳೆ ಬೆಂಬಲಕ್ಕೆ ಬಂದಿದ್ದು, ಆರೋಪಿ ಪೊಲೀಸ್ ಪೇದೆ ರೇಣುಕಪ್ಪ ಅಮಾನತು ಪಡಿಸುವಂತೆ ಒತ್ತಾಯಿಸಲಾಗಿದೆ. ಮರುಹೇಳಿಕೆ ಪಡೆದು ದೋಷಾರೋಪಣೆ ಪಟ್ಟಿ ಸಲ್ಲಿಸುವಂತೆ ಆಗ್ರಹಿಸಲಾಗಿದೆ.