ಗ್ರಾ.ಪಂ ಚುನಾವಣೆಯಲ್ಲಿ ಗೆದ್ದ ಪಿಎಚ್ಡಿ ಹಾಗೂ ಸ್ನಾತಕೋತ್ತರ ಪದವೀಧರರು
ಚಿತ್ರದುರ್ಗ, ಡಿಸೆಂಬರ್ 31: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಪಿಎಚ್ಡಿ ಹಾಗೂ ಸ್ನಾತಕೋತ್ತರ ಪದವೀಧರರು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದಾರೆ.
ಹಂಪಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿರುವ ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಪಿಎಚ್ಡಿ ಪದವೀಧರ ಪಿ.ಕಾಟಮಲಿಂಗಯ್ಯ ಅವರು 245 ಮತಗಳನ್ನು ಪಡೆಯುವ ಮೂಲಕ ಸಮೀಪ ಸ್ಪರ್ಧಿ ರಾಜಣ್ಣನವರನ್ನು ಸೋಲಿಸಿ 22 ಮತಗಳ ಅಂತರದಿಂದ ವಿಜಯ ಪಾತಕೆ ಹಾರಿಸಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ
ಮತ್ತೊಂದು ಕಡೆ ಇದೇ ತಾಲ್ಲೂಕಿನ ದೇವರಮರಿಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ದ್ಯಾವರನಹಳ್ಳಿ ಗ್ರಾಮದ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು, ನೆಟ್, ಸ್ಲೇಟ್ ಪರೀಕ್ಷೆಗಳನ್ನು ಮುಗಿಸಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಆನಂದ್ ಕುಮಾರ್ 106 ಮತಗಳನ್ನು ಪಡೆದರೆ, ಪ್ರತಿ ಸ್ಪರ್ಧಿ 89 ಮತ ಪಡೆದು ಸೋಲುಂಡಿದ್ದಾರೆ.
ಆನಂದ್ ಕುಮಾರ್ 17 ಮತಗಳ ಅಂತರದಿಂದ ಗೆಲುವು ಪಡೆದು ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಚಿತ್ರದುರ್ಗ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪಿಎಚ್ಡಿ ಪದವೀಧರ ಹಾಗೂ ಸ್ನಾತಕೋತ್ತರ ಪದವೀಧರ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡಿರುವುದು ಹಾಗೂ ಪ್ರತಿಭಾನ್ವಿತ ಯುವಕರನ್ನು ಗ್ರಾಮೀಣ ಜನತೆ ಆಯ್ಕೆ ಮಾಡಿರುವುದು ವಿಶೇಷವಾಗಿದೆ.