ವಾಣಿವಿಲಾಸ ಸಾಗರ ಡ್ಯಾಂ ಕೋಡಿ ಬಳಿ ಬೈಕ್ ಸವಾರರ ಹುಚ್ಚಾಟ
ಚಿತ್ರದುರ್ಗ, ಆಗಸ್ಟ್, 09: ಬಯಲು ಸೀಮೆಯ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ಭರ್ತಿಗೆ ದಿನಗಣನೆ ಆರಂಭವಾಗಿದೆ. ಕೋಡಿ ಬೀಳಲು ಕೆಲವು ಅಡಿಗಳು ಮಾತ್ರ ಬಾಕಿ ಇದೆ.
ಈ ಹಿನ್ನೆಲೆಯಲ್ಲಿ ಜಲಾಶಯ ನೋಡಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಆದರೆ ಕೋಡಿ ಬೀಳುವ ಕಿರಿದಾದ ಸೇತುವೆ ಮೇಲೆ ಬೈಕ್ನಲ್ಲಿ ಮಕ್ಕಳನ್ನು ಕುರಿಸಿಕೊಂಡು, ಬೈಕ್ ಸವಾರರು ಹುಚ್ಚಾಟ ಮೆರೆಯುತ್ತಿದ್ದಾರೆ.
ಚಿತ್ರದುರ್ಗ: ಭಾರೀ ಮಳೆ, ತುಂಬಿ ಹರಿಯುತ್ತಿರುವ ಕೆರೆಕಟ್ಟೆಗಳು
ಜಲಾಶಯದಲ್ಲಿ ನೀರಿನ ಅಲೆಗಳ ಹೊಡೆತ ರಭಸವಾಗಿದೆ. ಇಂತಹ ಸಂದರ್ಭದಲ್ಲಿ ಇಲ್ಲಿ ಬೋಟಿಂಗ್ಗೆ ಅವಕಾಶ ನೀಡಿದ್ದಾರೆ. ಒಮ್ಮೆ ಐದಾರು ಜನರು ಬೋಟಿಂಗ್ಗೆ ತೆರಳಿ ಸೆಲ್ಫೀ, ಫೋಟೋ, ವಿಡಿಯೋ ಮಾಡುವ ಮೂಲಕ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.
ಇದಲ್ಲದೆ ಡ್ಯಾಂ ನೀರಿನಲ್ಲಿ ವಾಹನಗಳನ್ನು ತೊಳೆಯುವುದು, ಕೋಡಿ ಬೀಳುವ ಜಾಗಕ್ಕೆ ಕಾರು, ಬೈಕ್, ಆಟೋಗಳನ್ನು ಕೊಂಡೊಯ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ. ಡ್ಯಾಂನಲ್ಲಿ ಹೆಚ್ಚು ನೀರು ಸಂಗ್ರಹವಾಗಿರುವುದರಿಂದ ಏನಾದರೂ ಅನಾಹುತ ಸಂಭವಿಸಿದರೆ ಇದಕ್ಕೆ ಹೊಣೆ ಯಾರು?. ಎಂಬ ಪ್ರಶ್ನಗಳು ಹುಟ್ಟಿಕೊಂಡಿವೆ.
ಜಲಾಶಯದಲ್ಲಿ ಸಂಗ್ರಹವಾದ ನೀರು
ಕೋಡಿ ಬೀಳುವ ತಡೆಗೋಡೆಗೆ ಪಿಚ್ಚಿಂಗ್ ಇಲ್ಲದೆ ಇರುವುದರಿಂದ ಅಪಾಯ ಸಂಭವಿಸಬಹುದು ಎಂದು ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಆತಂಕ ವ್ಯಕ್ತಪಡಿಸಿದ್ದಾರೆ. ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸುಮಾರು 88 ವರ್ಷಗಳ ನಂತರ 126 ಅಡಿ ನೀರು ಶೇಖರಣೆಯಾಗಿದ್ದು, ಭರ್ತಿಯಾಗಲು ಕೇವಲ 4 ಅಡಿ ಮಾತ್ರ ಬಾಕಿ ಇದೆ. ಪ್ರತಿದಿನ 2,554 ಕ್ಯೂಸೆಕ್ ಒಳಹರಿವು ಇದೆ. ಕೇವಲ 13-15 ದಿನಗಳಲ್ಲಿ ಈ ನೀರು ಇದೇ ಪ್ರಮಾಣದಲ್ಲಿ ಬಂದರೆ ವಾಣಿವಿಲಾಸ ಸಾಗರ ಭರ್ತಿಯಾಗಿ ಕೋಡಿ ಬೀಳಬಹುದು ಎಂದು ತಿಳಿಸಿದರು.
ಮಳೆ ಆರ್ಭಟದ ಆತಂಕದಲ್ಲಿರುವ ಜನರು
ಕೋಡಿಗೆ ನಿರ್ಮಿಸಿರುವ ತಡೆಗೋಡೆ ಪಿಚ್ಚಿಂಗ್ ಇಲ್ಲದೆ, ಸುಮಾರು 140 ಮೀಟರ್ ಉದ್ದ ಹಾಗೂ 5 ಅಡಿ ಎತ್ತರ ಇದ್ದು, 1.2 ಮೀಟರ್ ಅಗಲ ಇದೆ. ಒಂದು ವೇಳೆ ಮತ್ತೆ ಮಳೆ ಆರ್ಭಟ ಶುರುವಾದರೆ ಇನ್ನು ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗುತ್ತದೆ. ಹಾಗೆಯೇ ಇದರಿಂದ ಒಂದೇ ವಾರದಲ್ಲಿ ವಾಣಿವಿಲಾಸ ಸಾಗರ ಭರ್ತಿಯಾಗುವ ಸಾಧ್ಯತೆ ಇದೆ. ಕೋಡಿಗೆ ನಿರ್ಮಿಸಿರುವ ತಡೆಗೋಡೆಯ ಒಳಭಾಗ ಮತ್ತು ಹೊರಭಾಗದಲ್ಲಿ ಪಿಚ್ಚಿಂಗ್ ಇಲ್ಲದೇ ಇರುವುದರಿಂದ, ಒಳಭಾಗದಲ್ಲಿ 4 ಟಿಎಂಸಿ ನೀರಿನ ಒತ್ತಡ ತಡೆಗೋಡೆ ಮೇಲೆ ಬೀಳುತ್ತದೆ.
ಪಿಚ್ಚಿಂಗ್ ನಿರ್ಮಿಸಲು ಸ್ಥಳೀಯರ ಪಟ್ಟು
ಈ ಸಂದರ್ಭದಲ್ಲಿ 4 ಟಿಎಂಸಿ ಅಥವಾ 45 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ವೇದಾವತಿ ನದಿ, ವಾಣಿವಿಲಾಸ ಸಾಗರದ ಎರಡು ನಾಲೆಗಳು ಭರ್ತಿಯಾಗಿ ಅಕ್ಕಪಕ್ಕದ ಜಮೀನುಗಳು, ರಸ್ತೆಗಳು, ಗ್ರಾಮಗಳು, ಪ್ರಮುಖವಾಗಿ ಹಿರಿಯೂರು ನಗರ, ವೇದಾವತಿ ನದಿ ದಡದಲ್ಲಿರುವ ಹಳ್ಳಿಗಳು ಅಪಾಯಕ್ಕೆ ಸಿಲುಕುವ ಸಂಭವವಿದೆ ಎಂದು ಅಲ್ಲಿನ ಸ್ಥಳೀಯರು ಆತಂಕ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ 140 ಮೀಟರ್ ಉದ್ದದ ತಡೆಗೋಡೆಗೆ ತುರ್ತಾಗಿ ಸುಭದ್ರವಾದ ಪಿಚ್ಚಿಂಗ್ ನಿರ್ಮಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಮೌನ ವಹಿಸಿದ್ರಾ ಇಂಜಿನಿಯರ್ಗಳು?
ಇಲಾಖೆಯಲ್ಲಿರುವ ಅನಾನುಭವಿ ಇಂಜಿನಿಯರ್ಗಳು ಇಂತಹ ಗಂಭೀರವಾದ ತಾಂತ್ರಿಕ ನೈಪುಣ್ಯತೆಯನ್ನು ಪಡೆಯದೆ ಇರುವುದು ವಿಷಾದನೀಯ ಸಂಗತಿಯಾಗಿದೆ. ಬೇರೆ ಬೇರೆ ಕೆರೆಗಳನ್ನು ನೋಡಿ ಅಧ್ಯಯನ ಮಾಡಿ ಇದರ ರಕ್ಷಣೆಗೆ ಮುಂದಾಗಬೇಕಿತ್ತು. ಆದರೆ ಇಲ್ಲಿಯವರೆಗೂ ಈ ಬಗ್ಗೆ ಪ್ರಸ್ತಾಪ ಮಾಡದೆ ಕೇವಲ ನಾವು ಕೊಟ್ಟ ಸಲಹೆ ಮೇರೆಗೆ ಜಂಗಲ್ ತೆಗೆಯುವುದು, ಅಕ್ಕಪಕ್ಕದ ರೈತರಿಗೆ ತಿಳುವಳಿಕೆ ನೀಡುವುದು ಇಷ್ಟನ್ನೇ ಮಾಡುತ್ತಾ ಜಾಣ ಮೌನವಹಿಸಿರುವುದು ವ್ಯವಸ್ಥೆಯ ದುರಂತವೇ ಸರಿ ಎಂದು ಜನರು ಹೇಳುತ್ತಿದ್ದಾರೆ.
ಈ ವೇಳೆಗೆ ಸಂಬಂಧಪಟ್ಟ ಇಂಜಿನಿಯರ್ಗಳು, ನುರಿತ ತಜ್ಞರು, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ನೀರಾವರಿ ಇಲಾಖೆಯ ಸಲಹಾ ಸಮಿತಿ ಸದಸ್ಯರನ್ನು ಕರೆದು ಸಭೆ ನಡೆಸಬೇಕಿತ್ತು. ಇನ್ನಾದರೂ ಎಚ್ಚೆತ್ತುಕೊಂಡು ಶೀಘ್ರದಲ್ಲಿಯೇ ಇದಕ್ಕೆ ಪಿಚ್ಚಿಂಗ್ ನಿರ್ಮಿಸಬೇಕು. ಇಲ್ಲವಾದರೆ ಮುಂದಾಗುವ ಅಪಾಯಕ್ಕೆ ಇಂಜಿನಿಯರ್ಗಳನ್ನು ಹೊಣೆ ಮಾಡಲಾಗುವುದು ಎಂದು ಕಸವನಹಳ್ಳಿ ರಮೇಶ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
Recommended Video
ಜಲಾಶಯದಲ್ಲಿ ದಿನೇದಿನೇ ನೀರು ಹೆಚ್ಚುತ್ತಿದ್ದರೂ ಕೂಡ ವಿಶ್ವೇಶ್ವರಯ್ಯ ಜಲ ಮಂಡಳಿ ನಿಗಮದ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಇದನ್ನೆಲ್ಲ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.