ಹಿರಿಯೂರಿನಲ್ಲಿ ಅಪಘಾತ; ಬರಲಿಲ್ಲ ಆಂಬುಲೆನ್ಸ್, ನರಳುತ್ತಿದ್ದವನ ನೋಡುತ್ತಾ ನಿಂತ ಜನ
ಚಿತ್ರದುರ್ಗ, ಜನವರಿ 22: ಅಪರಿಚಿತ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದು ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೊಬ್ಬ ವ್ಯಕ್ತಿ ಕಾಲು ಮುರಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಉಡುವಳ್ಳಿ ಸಮೀಪದಲ್ಲಿ ನಡೆದಿದೆ.
ಬೀದರ್ ನಿಂದ ಶ್ರೀರಂಗಪಟ್ಟಣ ಮಾರ್ಗದ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ವೆಂಕಟೇಶ (55) ಎಂಬುವರು ಮೃತಪಟ್ಟಿದ್ದಾರೆ. ಗಾಯಾಳು ಕರಿಯಪ್ಪ ಅವರನ್ನು ಹಿರಿಯೂರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಆದರೆ ಅಪಘಾತವಾದಾಗ ರಸ್ತೆಯಲ್ಲೇ ಬಿದ್ದು ನರಳಾಡುತ್ತಿದ್ದರೂ ಜನರು ಸಹಾಯಕ್ಕೆ ಮುಂದಾಗದಿದ್ದದು ಅಮಾನವೀಯತೆ ತೋರಿದ ಸಂಗತಿಯೂ ಆಗಿದೆ. ಅಪಘಾತ ಸಂಭವಿಸಿ ಒಂದು ಗಂಟೆ ಕಳೆದರೂ ಸ್ಥಳಕ್ಕೆ ಆಂಬುಲೆನ್ಸ್ ಬಾರದ ಕಾರಣ ಅವರು ರಸ್ತೆಯಲ್ಲೇ ಒದ್ದಾಡುತ್ತಿದ್ದರು. ಪೋಲಿಸರು ಆ ವ್ಯಕ್ತಿಯನ್ನು ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಆಟೋದಲ್ಲೇ ಆಸ್ಪತ್ರೆಗೆ ಸಾಗಿಸಿದ ಪೊಲೀಸರು
ಬೈಕ್ ನಲ್ಲಿದ್ದ ಇವರಿಬ್ಬರೂ ಹಿರಿಯೂರು ತಾಲೂಕಿನ ವಸಂತನಗರದವರು. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಹಿರಿಯೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಆದರೆ ಅಪಘಾತವಾಗಿ ಒಂದು ಗಂಟೆ ಕಳೆದರೂ ಸ್ಥಳಕ್ಕೆ ಆಂಬುಲೆನ್ಸ್ ಬರಲಿಲ್ಲ. ರಸ್ತೆಯಲ್ಲೇ ನೋವು ತಾಳಲಾರದೇ ಗಾಯಾಳು ಕರಿಯಪ್ಪ ಒದ್ದಾಡುತ್ತಿದ್ದುದರಿಂದ ಪೋಲಿಸರು ಅವರನ್ನು ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆಂದು ತಿಳಿದುಬಂದಿದೆ.
ಬೀದರ್; ಪಂಕ್ಚರ್ ಹಾಕುತ್ತಿದ್ದವರಿಗೆ ಲಾರಿ ಡಿಕ್ಕಿ, ಮೂರು ಸಾವು
ನರಳುತ್ತಿದ್ದವನ ನೋಡುತ್ತಾ ನಿಂತ ಜನ
ಅಪಘಾತದಲ್ಲಿ ಕಾಲು ಮುರಿದು ಗಂಭೀರವಾಗಿ ಸಾವು-ಬದುಕಿನ ನಡುವೆ ನರಳಾಡುತ್ತಿದ್ದ ವ್ಯಕ್ತಿಯನ್ನು ಕಂಡು ಜನರೆಲ್ಲಾ ನೋಡುತ್ತಾ ನಿಂತಿದ್ದರು. ಆದರೆ ಎಲ್ಲರೂ ನೋಡುತ್ತಾ ನಿಂತಿದ್ದರೂ, ಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡಿದ್ದ ವ್ಯಕ್ತಿಯೊಬ್ಬ ಬಂದು, ಮೃತ ವ್ಯಕ್ತಿಯ ತಲೆ, ಮುಖವನ್ನು ಒರೆಸುತ್ತಿದ್ದ ದೃಶ್ಯ ಕಂಡುಬಂದಿತು.
ಅಗಲೀಕರಣ ಕಾಣದ ರಸ್ತೆ
ಬೀದರ್ ನಿಂದ ಶ್ರೀರಂಗಪಟ್ಟಣ ರಸ್ತೆ ಹಿರಿಯೂರು ನಗರದ ಮೂಲಕ ಹುಳಿಯಾರು ಕಡೆ ಹಾದುಹೋಗಿದ್ದು, ಹುಳಿಯಾರು ರಸ್ತೆ ಅಗಲೀಕರಣ ಆಗದಿರುವುದಕ್ಕೆ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ನಗರದ ಹೊರವಲಯದ ಹರಿಶ್ಚಂದ್ರ ಘಾಟ್ ಮುಂಭಾಗದಿಂದ ರಸ್ತೆಯ ತುಂಬೆಲ್ಲ ಗುಂಡಿಗಳು ಬಿದ್ದಿದ್ದು, ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಪ್ರತಿನಿತ್ಯ ಸಾವಿರಾರು ವಾಹನ ಸವಾರರು ಈ ರಸ್ತೆಯಲ್ಲಿ ಓಡಾಡುತ್ತಾರೆ.
ಬೆಂಗಳೂರಲ್ಲಿ ನಮ್ಮ ಮೆಟ್ರೋ ಪಿಲ್ಲರ್ಗೆ ಗುದ್ದಿದ ಕಾರ್!
ರಸ್ತೆ ವಿಸ್ತರಣೆಗೆ ಗ್ರಾಮಸ್ಥರ ಆಗ್ರಹ
"ನಾವು ಪ್ರತಿನಿತ್ಯ ಈ ರಸ್ತೆಯಲ್ಲಿ 15-20 ಕಿ.ಮೀ ಸಂಚರಿಸಬೇಕು. ರಸ್ತೆ ಕಿರಿದಾಗಿರುವುದಕ್ಕೆ ಅಪಘಾತಗಳು ಸಂಭವಿಸುತ್ತವೆ. ಜೊತೆಗೆ ಲಾರಿಗಳು, ಟ್ರಕ್ ಗಳು, ದೊಡ್ಡ ದೊಡ್ಡ ಗಾಡಿಗಳು ಈ ರಸ್ತೆಯಲ್ಲಿ ಸಂಚರಿಸುವುದರಿಂದ ನಾವು ಓಡಾಡಲು ತುಂಬಾ ಹಿಂಸೆಯಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು, ಈ ಕ್ಷೇತ್ರದ ಶಾಸಕರು ಕೂಡಲೇ ಇದರ ಕಡೆ ಗಮನಹರಿಸಿ ರಸ್ತೆ ಅಗಲೀಕರಣ ಮಾಡಿಸಿ" ಎಂದು ಕೇಳಿಕೊಳ್ಳುತ್ತಾರೆ ಹಿಂಡಸಕಟ್ಟೆ ಗ್ರಾಮದ ಯುವಕ ಆರ್. ಮಧುಕುಮಾರ್.