ಚಿತ್ರದುರ್ಗ ತಹಶೀಲ್ದಾರ್ ಮಾಡಿದ ಕಾರ್ಯಕ್ಕೆ ಜನತೆಯಿಂದ ಮೆಚ್ಚುಗೆ
ಚಿತ್ರದುರ್ಗ, ಏಪ್ರಿಲ್ 10: ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಲಾಕ್ ಡೌನ್ ಆದ ಪರಿಣಾಮವಾಗಿ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಮುಗಿಬಿಳುತ್ತಿದ್ದಾರೆ.
ಸರ್ಕಾರದಿಂದ ನ್ಯಾಯಬೆಲೆ ಅಂಗಡಿಯಲ್ಲಿ ಉಚಿತವಾಗಿ ಕೊಡುವ ಅಕ್ಕಿ, ಗೋಧಿ ಪಡೆಯಲು ಆ ಊರಿನ ಗ್ರಾಮಸ್ಥರು ಓಡೋಡಿ ಬಂದು ಮುಗಿಬಿದ್ದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಅವರ ಅವಶ್ಯಕತೆ ಪೂರೈಸಿಕೊಳ್ಳುವುದೆ ಜನರ ಉದ್ದೇಶವಾಗಿದೆ ಅನ್ನಿಸುತ್ತದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಲಾಕ್ ಡೌನ್ ಆಗಿ 15 ದಿನ ಕಳೆಯುತ್ತಾ ಬಂದಿದೆ. ಜನರು ವಸ್ತುಗಳನ್ನು ಪಡೆದುಕೊಳ್ಳಲು ಮುಗಿಬಿಳುತ್ತಾರೆ. ಇಂಥದೊಂದು ಘಟನೆ ಸಹ ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ನ್ಯಾಯ ಬೆಲೆ ಅಂಗಡಿಯಲ್ಲಿ ಓಟಿಪಿ ನಂಬರ್ ನೀಡಿ ಅಕ್ಕಿ, ಗೋಧಿ ಪಡೆಯಲು ಬಿಸಿಲನ್ನೂ ಲೆಕ್ಕಿಸದೆ ಜನರು ಓಡೋಡಿ ಬಂದು ಮುಗಿಬಿದ್ದಿರುವ ವಿಷಯ ತಿಳಿದ ಹಿರಿಯೂರು ತಹಶೀಲ್ದಾರ್ ಜಿ.ಹೆಚ್. ಸತ್ಯನಾರಾಯಣ ಅವರು ಸ್ಥಳಕ್ಕೆ ಭೇಟಿ ನೀಡಿ ಜನರಿಗೆ ಜಾಗೃತಿ ಮೂಡಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿ ಹೇಳಿದ್ದಾರೆ.
ನಂತರ ಶಿಸ್ತು ಪಾಲಿಸಿದ ಗ್ರಾಮಸ್ಥರು ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತು ಪಡಿತರ ಪಡೆದುಕೊಂಡರು. ಪ್ರತಿಯೊಬ್ಬರೂ ಮಾಸ್ಕ್ ಧರಿಸಿಕೊಂಡು ಇತರರಿಗೆ ಮಾದರಿಯಾಗಿ ಎಂದು ಕರೆ ನೀಡಿದ್ದಾರೆ.
ಬಿಸಿಲಲ್ಲಿ ನಿಂತಿದ್ದ ಜನರನ್ನು ನೋಡಿದ ತಹಶೀಲ್ದಾರ್ ಜಿ.ಹೆಚ್ ಸತ್ಯನಾರಾಯಣ ಓಟಿಪಿ ಪಡೆದುಕೊಳ್ಳುವ ಜಾಗದಲ್ಲಿ ಕುಡಿಯುವ ನೀರು ಮತ್ತು ಶಾಮಿಯಾನ ವ್ಯವಸ್ಥೆ ಕಲ್ಪಿಸಿದ್ದಾರೆ. ತಹಶೀಲ್ದಾರ್ ನವರ ಸಾಮಾಜಿಕ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.