ಹಿರಿಯೂರು ಜೆ.ಜಿ.ಹಳ್ಳಿ ಕಾಲೇಜು ಸ್ಥಳಾಂತರ ಆದೇಶಕ್ಕೆ ವಿರೋಧ
ಹಿರಿಯೂರು, ಜೂನ್ 6: ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿ ಅತ್ಯಂತ ಹಿಂದುಳಿದ ಹಳ್ಳಿಗಳಿಂದ ಕೂಡಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣಕ್ಕೆ ಅನುಕೂಲವಾಗುವಂತೆ ಸರ್ಕಾರ 2007ರಲ್ಲಿ ಜವನಗೊಂಡನಹಳ್ಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಿತ್ತು. ಅದರಂತೆ ಈ ಭಾಗದ ವಿದ್ಯಾರ್ಥಿಗಳು ಉತ್ಸಾಹದಿಂದ ಕಾಲೇಜಿನ ಕಡೆ ಹೆಜ್ಜೆ ಹಾಕತೊಡಗಿದ್ದರು. ಪಾಠ ಪ್ರವಚನಗಳು ಚೆನ್ನಾಗಿಯೇ ನಡೆಯುತ್ತಿದ್ದವು
ಕಳೆದ ವರ್ಷ 70.68ರಷ್ಟು ಫಲಿತಾಂಶ ಬಂದಿದ್ದು, ಕಾಲೇಜು ಪ್ರತಿ ವರ್ಷ ಉತ್ತಮ ಫಲಿತಾಂಶವನ್ನೇ ಕೊಡುತ್ತಾ ಬಂದಿದೆ. ಆದರೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಕಡಿಮೆ ಇದೆ ಎಂದು ಹೇಳಿರುವ ಸರ್ಕಾರ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರಿಗೆ ಕಾಲೇಜನ್ನು ಸ್ಥಳಾಂತರಿಸಲು ಆದೇಶ ಹೊರಡಿಸಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಕೋರ್ಸ್ ಗಳ ನಿರೀಕ್ಷೆ
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರಿಗೆ ಕಾಲೇಜನ್ನು ಸ್ಥಳಾಂತರಿಸಲು ಆದೇಶ ನೀಡಿರುವುದರಿಂದ ಈ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ನೂರಾರು ಹೆಣ್ಣು ಮಕ್ಕಳು ಉನ್ನತ ಶಿಕ್ಷಣವನ್ನು ಪಡೆದು ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಾಲ್ತಿಯಲ್ಲಿರುವ ಬಿ.ಎ. ಪದವಿ ಜೊತೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ವಾಣಿಜ್ಯ ವಿಭಾಗದ ಕೋರ್ಸ್ ಗಳಿಗೆ ಇಲ್ಲಿನ ಪದವಿ ಪೂರ್ವ ಕಾಲೇಜಿನಿಂದ ಉತ್ತೀರ್ಣರಾಗುವ ವಿದ್ಯಾರ್ಥಿಗಳು ದಾಖಲಾತಿ ಹೊಂದಲಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಈ ಕಾಲೇಜಿಗೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗುವ ಎಲ್ಲ ಲಕ್ಷಣಗಳೂ ಇವೆ. ಆದರೆ ದಾಖಲಾತಿ ಇಲ್ಲದ ನೆಪವೊಡ್ಡಿ ಕಾಲೇಜನ್ನು ಸ್ಥಳಾಂತರಿಸುತ್ತಿರುವುದು ಸೂಕ್ತವಲ್ಲ ಎಂಬುದು ವಿದ್ಯಾರ್ಥಿಗಳ ಅಳಲು.
ಗ್ರಾಮೀಣ ಹೆಣ್ಣು ಮಕ್ಕಳಿಗೆ ತೊಂದರೆ
ಈ ಕಾಲೇಜು ಸ್ವಂತ 9 ಎಕರೆ 36 ಗುಂಟೆ ಜಮೀನು ಹೊಂದಿದ್ದು, ಸ್ವಂತ ಕಟ್ಟಡ ಹೊಂದಿದೆ. ಅಲ್ಲದೆ ಈ ಭಾಗದ ಸುಮಾರು 20 ಕಿ.ಮೀ. ವ್ಯಾಪ್ತಿಯಲ್ಲಿ ಪದವಿ ಕಾಲೇಜುಗಳಾವುವೂ ಇಲ್ಲ. ಅಲ್ಲದೆ ಜೆ.ಜಿ. ಹಳ್ಳಿ ಹೋಬಳಿಯ ಸುತ್ತಮುತ್ತಲಿನ ಪ್ರದೇಶಗಳಿಂದ ದೂರದ ಹಿರಿಯೂರು, ಶಿರಾ ಕಾಲೇಜುಗಳಿಗೆ ಹೋಗಲು ಯಾವುದೇ ಬಸ್ ಸೌಲಭ್ಯ ಇರುವುದಿಲ್ಲ. ಇದರಿಂದ ಈ ಭಾಗದ ಹೆಣ್ಣು ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಪದವಿ ಶಿಕ್ಷಣದಿಂದ ವಂಚಿತರಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಅದರಲ್ಲೂ ಈ ಭಾಗದಲ್ಲಿ ಬುಡಕಟ್ಟು ಕಾಡುಗೊಲ್ಲ ಸಮುದಾಯದ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎನ್ನಬಹುದು. ಆದ್ದರಿಂದ ಸದರಿ ಕಾಲೇಜು ಈ ಭಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾಗಿದ್ದು ಸರ್ಕಾರ ಕೂಡಲೇ ಆದೇಶವನ್ನು ಹಿಂಪಡೆಯಲು ವಿದ್ಯಾರ್ಥಿಗಳು ಮತ್ತು ಜೆ.ಜಿ. ಹಳ್ಳಿ ಹೋಬಳಿಯ ಸುತ್ತಮುತ್ತಲಿನ ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
ಕೋಟೆ ನಾಡು ಚಿತ್ರದುರ್ಗದಲ್ಲಿ ವರುಣನ ಆರ್ಭಟ
ಕಾಲೇಜು ಉಳಿಸಿಕೊಳ್ಳಲು ವಿದ್ಯಾರ್ಥಿಗಳ ಪ್ರಯತ್ನ
ಜವನಗೊಂಡನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಂಡ್ಯ ಜಿಲ್ಲೆಗೆ ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಈ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಕಾಲೇಜು ಪ್ರಾರಂಭಿಸಿದ್ದು, ಈಗ ವಿದ್ಯಾರ್ಥಿಗಳ ದಾಖಲಾತಿ ಇಲ್ಲ ಅಂತ ಹೇಳಿ ಬೇರೆ ಕಡೆಗೆ ಕಾಲೇಜು ಸ್ಥಳಾಂತರಿಸುವುದು ಯಾವ ನ್ಯಾಯ ಎಂದು ವಿದ್ಯಾರ್ಥಿನಿ ನೀಲಮ್ಮ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ನಮ್ಮ ಮನೆಯಲ್ಲಿ ಪದವಿ ಶಿಕ್ಷಣ ಬೇಡ, ಹಿರಿಯೂರು, ಶಿರಾ ಭಾಗಕ್ಕೆ ಹೋಗಲು ದೂರವಾಗುತ್ತದೆ. ಹಾಗಾಗಿ ಕಾಲೇಜಿಗೆ ಹೋಗಬೇಡ ಎಂದು ಪೋಷಕರು ಹೇಳಿದರು. ಆದರೆ ಜೆಜಿ ಹಳ್ಳಿ ಪದವಿ ಕಾಲೇಜಿನಿಂದಾಗಿ ನಾನು ಪದವಿ ಶಿಕ್ಷಣ ಪಡೆಯುತ್ತಿದ್ದೇನೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ನಮ್ಮ ಊರಿನಲ್ಲಿ ಕಾಲೇಜು ಇರಲಿ, ಬೇರೆ ಕಡೆಗೆ ಸ್ಥಳಾಂತರಿಸಬೇಡಿ ಎಂದು ವಿದ್ಯಾರ್ಥಿನಿ ನೀಲಮ್ಮ ಕೇಳಿಕೊಂಡಿದ್ದಾರೆ. ಜೊತೆಗೆ ನಮ್ಮ ಕಾಲೇಜು ಉಳಿಸಿಕೊಳ್ಳಲು ನಮಗೆ ಗೊತ್ತಿರುವ ವಿದ್ಯಾರ್ಥಿಗಳನ್ನು ಕರೆತಂದು ದಾಖಲಾತಿ ಮಾಡುವ ಪ್ರಯತ್ನ ಮಾಡುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿಗಳು. ಮೇಘ, ಮಧು ಗೌಡನಹಳ್ಳಿ, ಹರೀಶ್ ಕುಮಾರ್, ದೀವ್ಯಾ, ವೆಂಕಟೇಶ್, ಕೃಷ್ಣ ಮೂರ್ತಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಶೇ.100 ಬಯೋಮೆಟ್ರಿಕ್ ನತ್ತ ಮೈಸೂರಿನ ಸರ್ಕಾರಿ ಕಚೇರಿಗಳು
ಶಾಸಕಿ ಕೆ. ಪೂರ್ಣಿಮಾ ವಿರೋಧ
ಸರ್ಕಾರ ಕಾಲೇಜನ್ನು ಸ್ಥಳಾಂತರಿಸಲು ಆದೇಶ ಹೊರಡಿಸಿರುವ ಬಗ್ಗೆ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೂಡಲೇ ಆದೇಶವನ್ನು ಹಿಂಪಡೆದು ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು, ಈ ಭಾಗದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಇವರಿಗೆ ಪದವಿ ಶಿಕ್ಷಣಕ್ಕೆ ತೊಂದರೆ ಆಗದಂತೆ ಆದೇಶವನ್ನು ರದ್ದುಪಡಿಸಿ ಸದರಿ ಕಾಲೇಜು ಜೆ.ಜಿ. ಹಳ್ಳಿಯಲ್ಲಿಯೇ ಮುಂದುವರಿಸುಮಂತೆ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೆಗೌಡನವರಿಗೆ ಪತ್ರ ಬರೆಯಲಾಗಿದೆ. ಇನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ಯಶೋಧರ ಕೂಡ ಸರ್ಕಾರ ಆದೇಶ ರದ್ದು ಪಡಿಸುವಂತೆ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ತಾಲ್ಲೂಕಿನಲ್ಲಿ ಇನ್ನಿತರೆ ಕಾಲೇಜು ವಿದ್ಯಾರ್ಥಿಗಳು, ರೈತ ಹೋರಾಟಗಾರರು, ವಿವಿಧ ಸಂಘ ಸಂಸ್ಥೆಗಳು ಸರ್ಕಾರದ ನಡೆಗೆ ಸಾಕಷ್ಟು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಚಿತ್ರದುರ್ಗ; ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ