ಕುರಿ/ಮೇಕೆ ಆಕಸ್ಮಿಕ ಸಾವಿಗೆ ನೀಡುತ್ತಿದ್ದ ಪರಿಹಾರ ವಾಪಸ್; ಭಾರೀ ಟೀಕೆ
ಚಿತ್ರದುರ್ಗ, ಏಪ್ರಿಲ್ 18: ಮಧ್ಯಕರ್ನಾಟಕದಲ್ಲಿ ಕುರಿ ಸಾಕಾಣಿಕೆ ಮುಖ್ಯ ಕಾಯಕ. ಹೀಗಿದ್ದಾಗ ಕುರಿ/ಮೇಕೆಗಳು ಆಕಸ್ಮಿಕವಾಗಿ ಸಾವನ್ನಪ್ಪಿದರೆ ಹಾಗೂ ದೃಢೀಕೃತ ಸಾಂಕ್ರಾಮಿಕ ರೋಗಗಳಿಂದ ಸಾವನ್ನಪ್ಪಿದರೆ ವಿಮೆಗೆ ಒಳಪಡದ 6 ತಿಂಗಳ ಮೇಲ್ಪಟ್ಟ ಪ್ರತಿ ಕುರಿ/ ಮೇಕೆಗೆ ರೂ 5000 ಮತ್ತು 3 ರಿಂದ 6 ತಿಂಗಳ ಪ್ರತಿ ಕುರಿ/ಮೇಕೆ ಮರಿಗೆ 2500 ರೂ ಗಳಂತೆ ಸರ್ಕಾರ ಪರಿಹಾರ ಧನವನ್ನು ಕುರಿ/ಮೇಕೆಗಳ ಮಾಲೀಕರಿಗೆ ವಿತರಿಸಲಾಗುತ್ತಿತ್ತು.
ಈ ಪರಿಹಾರ ನೀಡುವ ಸುತ್ತೋಲೆಯನ್ನು ಸಂಬಂಧಿಸಿದ ಇಲಾಖೆ ರದ್ದುಪಡಿಸಿರುವುದಕ್ಕೆ ಕಾಡುಗೊಲ್ಲ ಸಮಾಜದ ಮುಖಂಡರು ಭಾರಿ ವಿರೋಧ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಟೀಕೆ ವ್ಯಕ್ತಗೊಂಡಿದೆ. ಕುರಿಗಾರರಿಂದ ಅರ್ಜಿಗಳನ್ನು ಸ್ವೀಕರಿಸದೇ ಇರುವ ಬಗ್ಗೆ ಸುತ್ತೋಲೆ ಹೊರಡಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.
ಕೃಷಿ ಜೊತೆ ಕೋಳಿ ಸಾಕಣೆ; ಇದು ಕೋಲಾರ ರೈತನ ಯಶೋಗಾಥೆ
ಸುತ್ತೋಲೆಗೆ ವಿರೋಧ
ಕರ್ನಾಟಕ ಸರ್ಕಾರದ 2020-21ನೇ ಸಾಲಿನ ಆಯವ್ಯಯದ ಸಂಪುಟ -3 ಅಡಿಯಲ್ಲಿ ಅನುದಾನ ನಿಗದಿಯಾಗಿರುವ ಪ್ರಯುಕ್ತ ಕುರಿ/ಮೇಕೆಗಳ ಆಕಸ್ಮಿಕ ಸಾವಿಗೆ ಕುರಿಗಾರರಿಂದ ಅರ್ಜಿಗಳನ್ನು ಸ್ವೀಕರಿಸದೇ ಇರುವುದು ಸೂಕ್ತವೆಂದು ಉಲ್ಲೇಖ ಪತ್ರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ 2020-21 ಸಾಲಿಗೆ ಕುರಿ/ಮೇಕೆಗಳ ಆಕಸ್ಮಿಕ ಸಾವಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಮುಂದಿನ ಆದೇಶದವರಿಗೆ ಸ್ವೀಕರಿಸದಿರಲು ಸೂಚಿಸಿರುವ ಪಶುಪಾಲನೆ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಪರಿಹಾರ ಧನ ವಾಪಸ್ ಪಡೆದ ಸರ್ಕಾರ
ಹಿರಿಯೂರು, ಚಿತ್ರದುರ್ಗ, ಹೊಸದುರ್ಗ, ಚಳ್ಳಕೆರೆ, ಚಿಕ್ಕನಾಯಕನಹಳ್ಳಿ, ಶಿರಾ, ತುಮಕೂರು, ಮಧುಗಿರಿ, ಪಾವಗಡ, ಬಳ್ಳಾರಿ ಇನ್ನಿತರ ಭಾಗಗಳಲ್ಲಿ ಅತಿ ಹೆಚ್ಚು ಜನ ಕುರಿ ಸಾಕಾಣಿಕೆಯನ್ನು ತಮ್ಮ ಜೀವನದ ಕಸುಬುನ್ನಾಗಿ ಕಟ್ಟಿಕೊಂಡಿದ್ದಾರೆ. ಅನೇಕ ಕುರಿ/ ಮೇಕೆಗಳು ರೋಗಗಳಿಗೆ, ಸಿಡಿಲಿಗೆ, ಅಪಘಾತಗಳಿಗೆ ಬಲಿಯಾಗುವುದು ಸಹಜ. ಕಳೆದ ವರ್ಷ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ಕುರಿಗಳು "ನೀಲಿ ನಾಲಿಗೆ" ರೋಗಕ್ಕೆ ಬಲಿಯಾಗಿದ್ದವು. ಇಂತಹ ಸಂದರ್ಭದಲ್ಲಿ ಸಾವನ್ನಪ್ಪುವ ಕುರಿ/ಮೇಕೆಗಳಿಗೆ 5000 ಪರಿಹಾರ ಧನ ನೀಡುತ್ತಿದ್ದರು. ಇದೀಗ ಸರ್ಕಾರ ಇದನ್ನು ವಾಪಸ್ ಪಡೆದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಗೊಂಡಿದೆ.
ಕಾಡುಗೊಲ್ಲರ ಕಥೆ ಏನು?
ಕಾಡುಗೊಲ್ಲರು ಅಲೆಮಾರಿಗಳಾಗಿ ಜೀವನ ನಡೆಸುತ್ತಿದ್ದು, ಕುರಿ ಕಾಯುವುದೇ ಅವರ ಕಾಯಕವಾಗಿದೆ. ಆದರೆ ಈ ರೀತಿಯ ಸುತ್ತೋಲೆಯಿಂದ ಮೊದಲೇ ಅಭದ್ರತೆಯಲ್ಲಿರುವ ಅವರ ಜೀವನ ಇನ್ನಷ್ಟು ಸಂಕಷ್ಟಕ್ಕೆ ಈಡಾಗುವ ಸಾಧ್ಯತೆ ಇದೆ. ಅವರ ಗಳಿಕೆ ಮೇಲೆ ಇದು ಭಾರೀ ಪರಿಣಾಮ ಬೀರಲಿದೆ. ಮೊದಲೇ ಕಾಡುಗೊಲ್ಲರು ವಲಸೆ ಹೋಗುತ್ತಿದ್ದಾರೆ. ಜೀವನ ಸುಭದ್ರತೆಯಿಲ್ಲದಿದ್ದರೂ ಗಾಳಿ, ಮಳೆ, ಬಿಸಿಲನ್ನು ಲೆಕ್ಕಿಸದೆ ಜೀವನ ನಡೆಸುತ್ತಿದ್ದಾರೆ. ಇಂಥವರ ಮೇಲೆ ಈ ಒಂದು ನಡೆ ಕ್ರೂರವೆನಿಸಲಿದೆ.
ಸುತ್ತೋಲೆ ಹಿಂಪಡೆಯಲು ಸಾಸಲು ಸತೀಶ್ ಆಗ್ರಹ
ಹಿರಿಯೂರು ಭಾಗದಿಂದ ಕಾಡುಗೊಲ್ಲರು ವಲಸೆ ಹೋಗಿರುವ ಪ್ರದೇಶದಲ್ಲಿ, ಅಂದರೆ ಹಾಸನ ಮತ್ತು ಚಿಕ್ಕಮಗಳೂರು ಭಾಗದ ಸ್ಥಳೀಯರು ಹಿರಿಯೂರಿನ ಕುರಿಗಾಹಿಗಳ ಮೇಲೆ ಹಲ್ಲೆ ನಡೆಸಿದ ಘಟನೆಯೂ ನಡೆದಿದೆ. ಸರ್ಕಾರ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳದೆ, ಅಲೆಮಾರಿಗಳಾಗಿ ಕುರಿ ಸಾಕಾಣಿಕೆಯೊಂದಿಗೆ ಜೀವನ ನಡೆಸುತ್ತಿರುವ ಕುರಿಗಾರರ ಜೀವನದ ಮೇಲೆ ಈ ಹೊಡತ ನೀಡುವುದು ಸರಿಯಲ್ಲ, ಕೂಡಲೇ ಈ ಸುತ್ತೋಲೆಯನ್ನು ವಾಪಸ್ ಪಡೆಯಬೇಕು. ಇಲ್ಲವಾದರೆ ಕುರಿಗಾಹಿಗಳೊಂದಿಗೆ ಉಗ್ರ ಹೋರಾಟ ಮಾಡುವುದಾಗಿ ಕಾಡುಗೊಲ್ಲ ಸಮಾಜದ ಮುಖಂಡ ಡಾ. ಸಾಸಲು ಸತೀಶ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.