Oneindia Impact; ಬೆಳೆಹಾನಿ ಪರಿಶೀಲಿಸಲಿರುವ ಆರ್. ಅಶೋಕ
ಚಿತ್ರದುರ್ಗ, ಜನವರಿ 10: ಜನವರಿ ತಿಂಗಳಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಗೆ ಬೆಳೆಗಳು ನಾಶವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿಯೂ ಜನವರಿ 6ರಂದು ಸುರಿದ ಮಳೆಗೆ ಕಡಲೆ ಬೆಳೆ ನಾಶವಾಗಿತ್ತು. ಹೊಲದಲ್ಲಿ ನೀರು ನಿಂತು ರೈತರ ಸಂಕಟ ಪಡುವಂತಾಗಿತ್ತು.
ಜನವರಿ 7ರಂದು ಒನ್ ಒಂಡಿಯಾ ಕನ್ನಡ 'ಚಿತ್ರದುರ್ಗದಲ್ಲಿ ಅಕಾಲಿಕ ಮಳೆಗೆ ಕಡಲೆ ಬೆಳೆ ಸಂಪೂರ್ಣ ನಾಶ' ಎಂಬ ಶೀರ್ಷಿಕೆಯಡಿ ವರದಿಯನ್ನು ಪ್ರಕಟಿಸಿತ್ತು. ನಮ್ಮ ವರದಿಗೆ ಕಂದಾಯ ಸಚಿವ ಆರ್. ಅಶೋಕ ಅವರು ಸ್ಪಂದಿಸಿದ್ದಾರೆ. ಬೆಳೆ ನಾಶದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ಚಿತ್ರದುರ್ಗದಲ್ಲಿ ಅಕಾಲಿಕ ಮಳೆಗೆ ಕಡಲೆ ಬೆಳೆ ಸಂಪೂರ್ಣ ನಾಶ
ಅಕಾಲಿಕ ಮಳೆಯಿಂದಾಗಿ ಲಕ್ಷಾಂತರ ರೂ. ಮೌಲ್ಯದ ಕಡಲೆ ಬೆಳೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದಲ್ಲಿ ನಾಶವಾಗಿತ್ತು. ಸೋಮವಾರ ಸಚಿವ ಆರ್. ಅಶೋಕ ಚಿತ್ರದುರ್ಗ ಪ್ರವಾಸ ಕೈಗೊಂಡಿದ್ದು, ರೈತರ ಹೊಲಗಳಿಗೆ ಭೇಟಿ ನೀಡಲಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಅಕಾಲಿಕ ಮಳೆ: ತುಂಬಿ ಹರಿದ ಮಲ್ಲಾಪುರ ಕೆರೆ
ಬಬ್ಬೂರು ಗ್ರಾಮದ ರೈತರ ಹೊಲದಲ್ಲಿ ನೀರು ನಿಂತು ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಗ್ರಾಮದ ರೈತ ಕಾಂತರಾಜು ಅವರ 3 ಎಕರೆ ಮತ್ತು ನಿರಂಜನಮೂರ್ತಿ ಅವರ 5 ಎಕರೆ ಸೇರಿದಂತೆ ಹಲವಾರು ರೈತರ ಬೆಳೆ ನಾಶವಾಗಿತ್ತು. ಸಚಿವರು ಸೋಮವಾರ ಖದ್ದು ಪರಿಶೀಲನೆ ನಡೆಸಲಿದ್ದು, ಅಧಿಕಾರಿಗಳಿಂದ ಹಾನಿಯ ಅಂದಾಜು ಕುರಿತು ಮಾಹಿತಿ ಪಡೆಯಲಿದ್ದಾರೆ.
ಅಕಾಲಿಕ ಮಳೆಯಿಂದಾಗಿ ಆದ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸಿದ್ದರು. ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಸಚಿವರು ಪರಿಹಾರ ನೀಡುವ ಕುರಿತು ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಕಾಫಿ ಬೆಳೆಗಾರರಿಗೆ ಸಂಕಟ ತಂದಿಟ್ಟ ಅಕಾಲಿಕ ಮಳೆ
ಸಚಿವರು ಕಾರ್ಯಕ್ರಮ; ಆರ್. ಅಶೋಕ ಅವರು ಬೆಂಗಳೂರಿನಿಂದ ಸೋಮವಾರ ಬೆಳಗ್ಗೆ 9.30ಕ್ಕೆ ಹೊರಡಲಿದ್ದಾರೆ. ರಸ್ತೆ ಮಾರ್ಗದ ಮೂಲಕ ಅವರು 11.30ಕ್ಕೆ ಹಿರಿಯೂರಿಗೆ ಆಗಮಿಸಲಿದ್ದಾರೆ. ಬಬ್ಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಬೆಳೆಗಳ ಪರಿಶೀಲನೆ ನಡೆಸಲಿದ್ದಾರೆ.
ಬಬ್ಬೂರು, ಐಮಂಗಲ, ಕಾಸವರಹಟ್ಟಿ ಗ್ರಾಮಗಳಲ್ಲಿ ಕಡಲೆ ಬೆಳೆ ಹಾನಿಯಾದ ಬಗ್ಗೆ ಸಚಿವರು ಪರಿಶೀಲನೆ ನಡೆಸಲಿದ್ದಾರೆ. ಬಳಿಕ 2.30ಕ್ಕೆ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಳೆ ಹಾನಿ ಮತ್ತು ಇಲಾಖಾ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ.
ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಸಚಿವರ ಜೊತೆ ಇರಲಿದ್ದಾರೆ.