Oneindia Impact; ಕಡಲೆ ಬೆಳೆ ಹಾನಿ ಪರಿಶೀಲನೆ ನಡೆಸಿದ ಆರ್. ಅಶೋಕ
ಚಿತ್ರದುರ್ಗ, ಜನವರಿ 11: ಚಿತ್ರದುರ್ಗ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಕಡಲೆ ಬೆಲೆ ನಾಶವಾಗಿದೆ. ಬೆಳೆ ಹಾನಿಗೊಳಗಾದ ರೈತರ ಹೊಲಗಳಿಗೆ ಕಂದಾಯ ಸಚಿವ ಆರ್. ಅಶೋಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದು Oneindia Kannada impact ವರದಿ. ಸೋಮವಾರ ಸಚಿವ ಆರ್. ಅಶೋಕ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದ ರೈತರ ಹೊಲದಲ್ಲಿ ಮಳೆಯಿಂದ ಹಾನಿಗೊಳಗಾದ ಕಡಲೆ ಬೆಳೆ ವೀಕ್ಷಣೆ ಮಾಡಿದರು. ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು.
Oneindia Impact; ಬೆಳೆಹಾನಿ ಪರಿಶೀಲಿಸಲಿರುವ ಆರ್. ಅಶೋಕ
ಜನವರಿ 7ರಂದು ಒನ್ ಒಂಡಿಯಾ ಕನ್ನಡ 'ಚಿತ್ರದುರ್ಗದಲ್ಲಿ ಅಕಾಲಿಕ ಮಳೆಗೆ ಕಡಲೆ ಬೆಳೆ ಸಂಪೂರ್ಣ ನಾಶ' ಎಂಬ ಶೀರ್ಷಿಕೆಯಡಿ ವಿವರವಾದ ವರದಿಯನ್ನು ಪ್ರಕಟಿಸಿತ್ತು. ವರದಿಗೆ ಕಂದಾಯ ಸಚಿವ ಆರ್. ಅಶೋಕ ಅವರು ಸ್ಪಂದಿಸಿದ್ದು, ಬೆಳೆ ನಾಶದ ಬಗ್ಗೆ ಪರಿಶೀಲನೆ ಮಾಡಿದರು.
ಚಿತ್ರದುರ್ಗದಲ್ಲಿ ಅಕಾಲಿಕ ಮಳೆಗೆ ಕಡಲೆ ಬೆಳೆ ಸಂಪೂರ್ಣ ನಾಶ
ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಹೊಲದಲ್ಲಿ ನೀರು ನಿಂತು ಕಡಲೆ ಬೆಳೆ ಜಲಾವೃತಗೊಂಡಿತ್ತು. ಹೊಲದಲ್ಲಿ ಸಂಪೂರ್ಣವಾಗಿ ನೀರು ತುಂಬಿ ಬೆಳೆ ನಾಶವಾಗಿತ್ತು. ಬೆಳೆ ಹಾನಿಯನ್ನು ಪರಿಶೀಲನೆ ಮಾಡಿದ ಸಚಿವರು, ಹಾನಿಗೊಳಗಾದ ರೈತರ ಕಡಲೆ ಬೆಳೆಗೆ ಪರಿಹಾರ ಕೊಡಲು ಒಪ್ಪಿಗೆಯನ್ನು ನೀಡಿದ್ದಾರೆ.
ಕಾಫಿ ಬೆಳೆಗಾರರಿಗೆ ಸಂಕಟ ತಂದಿಟ್ಟ ಅಕಾಲಿಕ ಮಳೆ
ಸಚಿವರ ಹೇಳಿಕೆ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಬ್ಬೂರು, ತಾಳವಟ್ಟಿ ಗ್ರಾಮಗಳಲ್ಲಿ ಬೆಳೆನಾಶವಾದ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು ಮಾಧ್ಯಮಗಳ ಜೊತೆ ಮಾತನಾಡಿದರು.
"ಚಿತ್ರದುರ್ಗ ಜಿಲ್ಲೆಯಲ್ಲಿ 350 ಹೆಕ್ಟೇರ್ ಜಮೀನಿನಲ್ಲಿ ಕಡಲೆ ಮತ್ತು ಈರುಳ್ಳಿ ಬೆಳೆ ನಾಶವಾಗಿದೆ. ಬೆಳೆ ನಾಶವಾದ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಂತರ ಪರಿಹಾರದ ಕುರಿತು ಪರಿಶೀಲನಾ ಸಭೆ ನಡೆಸಿ ಸರ್ಕಾರಕ್ಕೆ ವರದಿ ನೀಡುತ್ತೇನೆ" ಎಂದು ಸಚಿವರು ಹೇಳಿದರು.
"ರಾಜ್ಯದಲ್ಲಿನ ಈರುಳ್ಳಿ ಬೇರೆ ರಾಜ್ಯ ಮತ್ತು ದೇಶಕ್ಕೆ ರಫ್ತು ಆಗುತ್ತಿತ್ತು. ಅಕಾಲಿಕ ಮಳೆಯಿಂದ ಸಾಕಷ್ಟು ರೈತರಿಗೆ ತೊಂದರೆಯಾಗಿದೆ. ಬೇರೆ ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಯಾದ ದ್ರಾಕ್ಷಿ ನಷ್ಟವಾಗಿದೆ. ಇದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ" ತಿಳಿಸಿದರು.