ಹರಿಯಬ್ಬೆ ಪಾಳ್ಯ ಗ್ರಾಮದಲ್ಲಿ ಬಗೆಹರಿದ ಕುಡಿಯುವ ನೀರಿನ ಸಮಸ್ಯೆ
ಚಿತ್ರದುರ್ಗ, ಜೂನ್ 5: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರಿಯಬ್ಬೆ ಪಾಳ್ಯದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಬೋರ್ವೆಲ್ ಕೊರೆಸಿದ್ದು, ಗ್ರಾಮಸ್ಥರಲ್ಲಿ ಸಂತಸ ತಂದಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಸತತ ಮೂರು ದಿನಗಳಿಂದ ವರುಣ ಅಬ್ಬರಿಸುತ್ತಿದ್ದರೆ ಕೆಲವು ಆಯ್ದ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಹಿರಿಯೂರು ತಾಲ್ಲೂಕಿನ ಹರಿಯಬ್ಬೆ ಪಾಳ್ಯ ಗ್ರಾಮದಲ್ಲಿ ನೀರಿನ ಸಮಸ್ಯೆಯನ್ನು ಅರಿತ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ತಮ್ಮ ಅನುದಾನದಲ್ಲಿ ಬೋರ್ವೆಲ್ ಕೊರೆಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದಾರೆ.
ಬೆಳಿಗ್ಗೆ ಗ್ರಾಮಕ್ಕೆ ಬೋರ್ವೆಲ್ ಲಾರಿ ಬಂದು ಭೂಮಿ ಕೊರೆದಾಗ ಎಷ್ಟು ಹೊತ್ತಾದರೂ ನೀರು ಕಾಣಿಸಿಕೊಳ್ಳಲಿಲ್ಲ. ಗ್ರಾಮದ ಜನರು ನೀರು ಸಿಗಲ್ಲ ಎನ್ನುವಷ್ಟರಲ್ಲಿ ಇನ್ನೊಂದು 50 ಅಡಿ ಕೊರೆಯಿರಿ ಎಂದಾಗ 750 ಅಡಿಗೆ ನೀರು ಕಾಣಿಸಿಕೊಂಡು, 800 ಅಡಿಗೆ ಮೂರು ಇಂಚು ನೀರು ಸಿಗುವ ಮೂಲಕ ಮುಗಿಲೆತ್ತರಕ್ಕೆ ನೀರು ಚಿಮ್ಮಿದ್ದು ಗ್ರಾಮಸ್ಥರಲ್ಲಿ ಸಂತಸ ಉಂಟುಮಾಡಿದೆ.
ಹಲವು ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದ ಗ್ರಾಮದಲ್ಲಿ ಶಾಸಕರು ಬೋರ್ವೆಲ್ ಕೊರೆಸುವ ಮೂಲಕ ಆಧುನಿಕ ಭಾಗೀರಥಿ ಎನಿಸಿಕೊಂಡಿದ್ದಾರೆ. ನೀರಿನ ದಾಹ ತೀರಿಸಿದಕ್ಕೆ ಗ್ರಾಮಸ್ಥರು ಶಾಸಕಿಗೆ ಅಭಿನಂದನೆ ಸಲ್ಲಿಸಿದರು.
ವರದಿಗೆ ಶಾಸಕಿಯ ಸ್ಪಂದನೆ
ಕುಡಿಯುವ ನೀರಿನ ಸಮಸ್ಯೆಯನ್ನು ವರದಿ ಮಾಡಿದ ಕೆಲವೇ ಗಂಟೆಗಳಲ್ಲಿ ಶಾಸಕರು ಪೊಲೀಸ್ ಇಲಾಖೆಯ ಮೂಲಕ ಸಮಸ್ಯೆಯನ್ನು ಬಗರೆಹರಿಸಿದ ಘಟನೆ ಶುಕ್ರವಾರ ನಡೆದಿದೆ. ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ, ಗೊಲ್ಲರಹಟ್ಟಿ, ಲಂಬಾಣಿ ತಾಂಡಾ, ಜೆಜೆ ಕಾಲೋನಿಯ ನಿವಾಸಿಗಳು ಊರಿನ ಹೊರವಲಯದಲ್ಲಿರುವ ಬಾವಿಯಿಂದ ನೀರು ತರುತ್ತಿರುವ ವಿಡಿಯೋ ಒನ್ಇಂಡಿಯಾ ಕನ್ನಡದಲ್ಲಿ ಸುದ್ದಿ ಸಮೇತ ಪ್ರಕಟಗೊಂಡಿತ್ತು.
ಗ್ರಾಮದಲ್ಲಿ ಹಾಲಿ ಮತ್ತು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರ ನಡುವಿನ ತಿಕ್ಕಾಟದಲ್ಲಿ ಗ್ರಾಮದಲ್ಲಿ ಕುಡಿಯುವ ನೀರು ಇಲ್ಲದಂತಾಗಿದೆ ಎಂದು ವರದಿ ಮಾಡಲಾಗಿತ್ತು. ವರದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಶಾಸಕರ ಸೂಚನೆಯ ಮೇರೆಗೆ ಅಬ್ಬಿನಹೊಳೆ ಪೊಲೀಸ್ ಠಾಣೆಯ ಪಿಎಸ್ಐ ಪರುಶುರಾಮ ಎನ್ ಲಮಾಣಿ ಅವರು ಗೊಲ್ಲರಹಟ್ಟಿ, ಲಂಬಾಣಿ ತಾಂಡಾ, ಜೆಜೆ ಕಾಲೋನಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಶಾಸಕರಿಗೆ, ಪೊಲೀಸ್ ಅಧಿಕಾರಿಯ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Recommended Video
ಹಿರಿಯೂರು ತಾಲ್ಲೂಕಿನ ಬೀರೆನಹಳ್ಳಿಯ ಎವಿ ಕೊಟ್ಟಿಗೆ ಗ್ರಾಮದಲ್ಲಿ ಸಹ ಇದೇ ತಿಂಗಳ 1 ರಂದು ಕೊರೆಸಿದ ಬೋರ್ವೆಲ್ನಲ್ಲಿ 4 ಇಂಚು ನೀರು ಸಿಕ್ಕಿದ್ದು, ಆ ಗ್ರಾಮದಲ್ಲೂ ನೀರಿನ ಸಮಸ್ಯೆಯನ್ನು ಸರಿದೂಗಿಸಿದರು. ಒಟ್ಟಾರೆಯಾಗಿ ತಾಲ್ಲೂಕಿನಲ್ಲಿ ಹಂತಹಂತವಾಗಿ ಕುಡಿಯುವ ನೀರಿಗೆ ಆದ್ಯತೆ ಕೊಟ್ಟು ಸಮಸ್ಯೆಯನ್ನು ಬಗೆಹರಿಸಲು ಶಾಸಕರು ಮುಂದಾಗಿರುವುದು ಸಾರ್ವಜನಿಕರಲ್ಲಿ ಸಂತಸ ತಂದಿದೆ.