ನಿನ್ನೆ ಅಪಘಾತವಾಗಿ ನಿಂತಿದ್ದ ಲಾರಿಗೆ ಮತ್ತೆ ಕಾರು ಡಿಕ್ಕಿ– ವ್ಯಕ್ತಿ ಸಾವು
ಚಿತ್ರದುರ್ಗ, ಜುಲೈ 18: ಅಪಘಾತವಾಗಿ ದಾರಿ ಬದಿ ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಚಿತ್ರದುರ್ಗದ ಕುಂಚಿಗನಾಳ್ ಬಳಿ ನಡೆದಿದೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುವಾಗ ಈ ದುರ್ಘಟನೆ ನಡೆದಿದೆ.
ಚಿತ್ರದುರ್ಗದಲ್ಲಿ ಕಾರು-ಲಾರಿ ನಡುವೆ ಭೀಕರ ಅಪಘಾತ; ನಾಲ್ವರ ಸಾವು
ಮೃತಪಟ್ಟ ವ್ಯಕ್ತಿಯನ್ನು 25 ವರ್ಷದ ಅರುಣ್ ಎಂದು ಗುರುತಿಸಲಾಗಿದೆ. ಸದಾನಂದ, ಸಿರೀಶ್ ಹಾಗೂ ಕಾರು ಚಾಲಕ ಪವನ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಿನ್ನೆಯಷ್ಟೇ ಇನ್ನೋವಾ ಕಾರೊಂದು ಟೈರ್ ಸಿಡಿದು ಡಿವೈಡರ್ ದಾಟಿ ಲಾರಿಗೆ ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟಿದ್ದರು. ಅಪಘಾತವಾಗಿದ್ದ ಆ ಲಾರಿಯನ್ನು ಸ್ಥಳಾಂತರಿಸದೇ ಅಲ್ಲಿಯೇ ಬಿಟ್ಟಿದ್ದರು. ಇದೇ ಲಾರಿಗೆ ಮತ್ತೆ ಕಾರು ಡಿಕ್ಕಿ ಹೊಡೆದಿದೆ. ಪೊಲೀಸರು ಲಾರಿಯನ್ನು ತಕ್ಷಣವೇ ಸ್ಥಳಾಂತರಿಸಿದ್ದರೆ ಈ ಅಪಘಾತ ನಡೆಯುತ್ತಿರಲಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.