ಆಶಾಭಾವನೆ ಇದೆ, ಬಂಡಾಯ ಏಳುವುದಿಲ್ಲ; ಶಾಸಕ ತಿಪ್ಪಾರೆಡ್ಡಿ
ಚಿತ್ರದುರ್ಗ, ಆಗಸ್ಟ್ 23: "ಮಂತ್ರಿ ಆದ ಮಾತ್ರಕ್ಕೆ ಯಾರೂ ದೊಡ್ಡವರಾಗುವುದಿಲ್ಲ. ಆದರೆ ಅಧಿಕಾರವನ್ನು ಬಳಸಿಕೊಂಡು ಜಿಲ್ಲೆಯ ಅಭಿವೃದ್ಧಿ ಮಾಡುವ ಆಸೆಯಿತ್ತು" ಎಂದು ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ.
ಸರ್ಕಾರ ರಚನೆ ಆಗುವ ಮೊದಲೇ ಸಚಿವ ಸ್ಥಾನ ಕೇಳಿದ ಬಿಜೆಪಿ ಶಾಸಕ
ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಂತರ ಅಸಮಾಧಾನಗೊಂಡಿರುವ ಶಾಸಕ ತಿಪ್ಪಾರೆಡ್ಡಿ, "ಸಚಿವ ಸ್ಥಾನ ಪಡೆಯಲು ಹತ್ತಾರು ದಾರಿಗಳಿವೆ. ಮುಂದೆ ಅವಕಾಶ ಸಿಗುವ ಆಶಾಭಾವನೆ ಇದೆ. ಹೀಗಾಗಿ ಬಂಡಾಯ ಏಳುವ ಪ್ರಶ್ನೆಯಿಲ್ಲ, ಸಮ್ಮಿಶ್ರ ಸರ್ಕಾರ ಬೀಳಲು ಕಾರಣರಾದ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕಾಗಿರುವುದರಿಂದ ಸ್ವಲ್ಪ ವ್ಯತ್ಯಾಸ ಆಗಿದೆ, ಬಿಎಸ್ ವೈ ಕೂಡ ಭರವಸೆ ನೀಡಿರೋದ್ರಿಂದ ಮುಂದಿನ ಪಟ್ಟಿಯಲ್ಲಿ ನನ್ನ ಹೆಸರು ಬರುವ ನಿರೀಕ್ಷೆ ಇದೆ" ಎಂದರು.
ಅಸಮಾಧಾನಗೊಂಡಿರುವ ಹಿರಿಯ ಶಾಸಕರ ಸಭೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, "ನಮ್ಮ ಆಂತರಿಕ ವಿಷಯಗಳನ್ನು ಒಂದೆಡೆ ಸೇರಿ ಚರ್ಚೆ ನಡೆಸಿದ್ದೇವೆ, ಈ ಕುರಿತು ಸಿಎಂ ಯಡಿಯೂರಪ್ಪ ಜೊತೆ ಕೂಡ ಮಾತನಾಡಿದ್ದು, ಮುಂದಿನ ದಿನಗಳಲ್ಲಿ ಅವಕಾಶವಿದೆ, ಆತುರ ಪಡಬೇಡಿ, ನಿಮ್ಮ ಪರವಾಗಿ ನಾನಿದ್ದೇನೆ ಎಂದು ಭರವಸೆ ನೀಡಿದ್ದಾರೆ" ಎಂದು ತಿಳಿಸಿದರು.