ಬಂಗಾರ ಮಾರಿ ಹಿರಿಯೂರು ಜಲಾಶಯ ಕಟ್ಟಿದರು; ಅವರ ನೆನಪಿಗಾದರೂ ಹೆಸರಿಲ್ಲ
ಚಿತ್ರದುರ್ಗ, ಜನವರಿ 14: ಚಿತ್ರದುರ್ಗ ಜಿಲ್ಲೆಯ ಏಕೈಕ ಜಲಾಶಯವಾದ ಹಿರಿಯೂರಿನ ವಾಣಿ ವಿಲಾಸವನ್ನು ಕಟ್ಟಲಾಗಿದ್ದು ಮೈಸೂರು ಅರಸರ ಕಾಲದಲ್ಲಿ. ನಾಲ್ವಡಿ ಕೃಷ್ಣರಾಜ ಒಡೆಯರ ಅವಧಿಯಲ್ಲಿ, ಅವರ ಜನಪರ ಕಾಳಜಿಯಿಂದ ನಿರ್ಮಾಣಗೊಂಡ ಈ ಜಲಾಶಯ ಇಲ್ಲಿನ ರೈತರ ಜೀವನಾಡಿ ಕೂಡ.
ಆದರೆ ಇಂಥ ಮಹತ್ತರ ಕಾರ್ಯ ಮಾಡಿದ್ದರೂ, ಅವರ ನೆನಪನ್ನು ಸ್ಮರಿಸುವಂಥ ಯಾವುದೇ ಕೆಲಸಗಳು ಇಲ್ಲಿ ನಡೆದಿಲ್ಲ. ಹಿರಿಯೂರಿನಲ್ಲಿ ವಿವಿ ಸಾಗರದ ಅಣೆಕಟ್ಟನ್ನು ಕಟ್ಟಿದ ನೆನಪಿಗೆ ಹಿರಿಯೂರು ತಾಲೂಕು ಅಥವಾ ಚಿತ್ರದುರ್ಗ ಜಿಲ್ಲೆಯಲ್ಲಿ ಅವರ ಸವಿ ನೆನಪಿಗೊಂದು ಪ್ರತಿಮೆಯಾಗಲಿ, ಅವರ ಹೆಸರಲ್ಲಿ ವೃತ್ತವಾಗಲಿ, ರಸ್ತೆಯಾಗಲಿ ಇದುವರೆಗೂ ನಿರ್ಮಾಣವಾಗಿಲ್ಲ. ಡ್ಯಾಂ ಮುಂಭಾಗದಲ್ಲೂ ಅವರ ಹೆಸರೇ ಇಲ್ಲ.
ಬಂಗಾರ ಮಾರಿ ಕಟ್ಟಿದ ಅಣೆಕಟ್ಟು
ಚಿತ್ರದುರ್ಗ ಜಿಲ್ಲೆ ಒಂದು ಬರಪೀಡಿತ ಪ್ರದೇಶ. ಹೀಗಾಗಿ ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಮನಸ್ಸು ಮಾಡಿದ ಮೈಸೂರು ಅರಸರು ಜನಪರ ಕಾಳಜಿಯಿಂದ ಇಲ್ಲಿನ ಪ್ರದೇಶಗಳಿಗೆ ಅನುಕೂಲವಾಗಲೆಂದು ವಿವಿ ಸಾಗರದ ನಿರ್ಮಾಣಕ್ಕೆ ಮುಂದಾದರು. ಆಗ ಮೈಸೂರು ಅರಸರ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಅನುಕೂಲದಾಯಕವಾಗಿಲ್ಲ. ಹೀಗಿದ್ದರೂ ಈ ಭಾಗದ ರೈತರಿಗಾಗಿ ಅರಸರ ತಾಯಿ ಕೆಂಪನಂಜಮ್ಮಣ್ಣಿ ಅವರ ಬಂಗಾರವನ್ನು ಮಾರಿ 45 ಲಕ್ಷ ವೆಚ್ಚದಲ್ಲಿ 1898ರಲ್ಲಿ ಕಾಮಗಾರಿ ಪ್ರಾರಂಭಿಸಿದರು. ಕೇವಲ 9 ವರ್ಷಗಳಲ್ಲಿ ಅಣೆಕಟ್ಟನ್ನು ನಿರ್ಮಿಸಿ ಚಿತ್ರದುರ್ಗ ಭಾಗದ ಜನರಿಗೆ ಕುಡಿಯುವ ನೀರು ಮತ್ತು ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಯಿತು.
9 ವರ್ಷಗಳ ನಂತರ 100 ಅಡಿ ಮುಟ್ಟಿತು ವಿವಿ ಸಾಗರ ಜಲಾಶಯ
1898ರಿಂದ 1907ರಲ್ಲಿ ವಿವಿ ಸಾಗರದ ಹೆಜ್ಜೆ
ಈ ಜಲಾಶಯದ ಒಟ್ಟು ಎತ್ತರ 43.28 ಮೀಟರ್ (142 ಅಡಿ), ಉದ್ದ 405.50 ಮೀಟರ್. ಜಲಾವೃತ ಪ್ರದೇಶ 5374 ಚದರ ಕಿ.ಮೀ. ಡ್ಯಾ ನೀರಿನ ಸಾಮರ್ಥ್ಯ 850.30 (30 ಟಿಎಂಸಿ). ಅಂದು ಅವರು ನಿರ್ಮಿಸಿದ ಜಲಾಶಯದ ನೀರನ್ನು ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ಹಾಗೂ ಕುದಾಪುರದ ಡಿಆರ್ ಡಿಒಗೂ ಈ ಜಲಾಶಯದ ನೀರೇ ಬಳಕೆಯಾಗುತ್ತಿದೆ. 1898ರಿಂದ 1907ರಲ್ಲಿ ಹಿರಿಯೂರು ತಾಲೂಕಿನ ಹಳ್ಳಿಯ ಬಳಿ ಕೃಷ್ಣ ನದಿಯ ಉಪನದಿ ವೇದಾವತಿಗೆ ಅಡ್ಡಲಾಗಿ ವಿವಿ ಸಾಗರವನ್ನು ಕಟ್ಟಲಾಯಿತು.
ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರು ಎಲ್ಲೂ ಇಲ್ಲ
ಹಿರಿಯೂರಿನಲ್ಲಿ ವಿವಿ ಸಾಗರ ಮತ್ತು ಜವನಗೊಂಡನಹಳ್ಳಿ ಬಳಿ ಇರುವ ಗಾಯಿತ್ರಿ ಜಲಾಶಯ ಕಟ್ಟುವಲ್ಲಿ ಮೈಸೂರು ಅರಸರು ಪ್ರಮುಖವಾದವರು. ಹಿರಿಯೂರು ಏಳಿಗೆಯಲ್ಲಿ ಅವರ ಕೊಡುಗೆ ಅಪಾರ. ಧರ್ಮಪುರ ಕೆರೆಯನ್ನು ಕಟ್ಟಲೂ ಇವರು ಸಹಾಯಹಸ್ತ ಚಾಚಿದ್ದರು. ಆದರೆ ಈ ಸಹಾಯಕ್ಕೆ ಸ್ಮರಣಾರ್ಥವಾಗಿ ಹಿರಿಯೂರಿನ ಯಾವ ಸ್ಥಳದಲ್ಲೂ ಅವರ ಪ್ರತಿಮೆಯಾಗಲೀ, ಹೆಸರಾಗಲೀ ಇಲ್ಲ. ಹಾಗಾಗಿ ಹಿರಿಯೂರಿನಿಂದ ಹೊಸದುರ್ಗಕ್ಕೆ ಹೋಗುವ ರಸ್ತೆಗೆ ವಿವಿ ಸಾಗರ ಜಲಾಶಯ ಹೊಂದಿಕೊಂಡಿರುವುದರಿಂದ ಹೊಸದುರ್ಗ ರಸ್ತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರನ್ನು ನಾಮಕರಣ ಮಾಡಿ, ಜಲಾಶಯದ ಬಳಿ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಿದರೆ ಸೂಕ್ತ ಎಂದು ಪ್ರಾಂಶುಪಾಲ ಚಂದ್ರಯ್ಯ ಬೆಳವಾಡಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಸತತ ಹೋರಾಟದ ನಂತರ ಕೊನೆಗೂ ವಿವಿ ಸಾಗರಕ್ಕೆ ಹರಿದುಬಂದಳು ಭದ್ರೆ; ನಿರಾಳವಾದ ರೈತರು
ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆ
ಜಿಲ್ಲೆಯಲ್ಲಿ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆ ನಿರ್ಮಾಣದ ಬಗ್ಗೆ, ರಸ್ತೆಯೊಂದಕ್ಕೆ ಅವರ ಹೆಸರು ಇಡುವ ಬಗ್ಗೆ ರಾಜಕೀಯ ನಾಯಕರು ಆಸಕ್ತಿ ತೋರುತ್ತಿಲ್ಲ. ಸ್ಥಳೀಯ ರಾಜಕೀಯ ನಾಯಕರು ಇದರ ಕಡೆ ಗಮನ ಹರಿಸುತ್ತಿಲ್ಲ. ಜಿಲ್ಲೆಯ ಯಾವೊಬ್ಬ ಶಾಸಕರಿಗೂ, ಸಂಸದರಿಗೂ ಪ್ರತಿಮೆ ನಿರ್ಮಾಣದ ಬಗ್ಗೆ ಕಾಳಜಿ ಇಲ್ಲ. ಜನಪರ ಸಂಘಟನೆಗಳು ಕೂಡ ಗಟ್ಟಿ ಧ್ವನಿ ಎತ್ತಿಲ್ಲ. ಮಠಾಧೀಶರು ಮುಂದೆ ಬಂದಿಲ್ಲ. ವಿವಿ ಸಾಗರದ ನೀರನ್ನು ಬಳಸಿಕೊಳ್ಳುವ ಡಿಆರ್ ಡಿಒ ಸಂಸ್ಥೆಯೂ ಇದರ ಕಡೆ ತಿರುಗಿ ನೋಡುವುದಿಲ್ಲ. ಇನ್ನಾದರೂ ಜಿಲ್ಲೆಯ ಸಚಿವರು, ಸಂಸದರು ಸೇರಿದಂತೆ ಹಿರಿಯೂರು ಕ್ಷೇತ್ರದ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಒಡೆಯರ ಪ್ರತಿಮೆಗೆ ಮುಂದಾಗುತ್ತಾರಾ ಎಂದು ಕಾದು ನೋಡಬೇಕಿದೆ.