ಬೆಂಗಳೂರು ಲಾಕ್ ಡೌನ್ ಮಾಡದಿರಲು ನಿರ್ಧಾರ: ಸಚಿವ ವಿ.ಸೋಮಣ್ಣ
ಚಿತ್ರದುರ್ಗ, ಜೂನ್ 26: ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡದಿರಲು ನಿರ್ಧಾರ ಮಾಡಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.
ಚಿತ್ರದುರ್ಗದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕೊರೊನಾ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡ ಭಾಗಗಳಲ್ಲಿ ಮಾತ್ರ ಸೀಲ್ ಡೌನ್ ಮಾಡಲಾಗುವುದು. ಎಂಥ ಪರಿಸ್ಥಿತಿ ಬಂದರೂ ಎದುರಿಸಲು ಸರ್ಕಾರದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾಧ್ಯಮಗಳು ಸಹ ಸತ್ಯ ಅರ್ಥ ಮಾಡಿಕೊಳ್ಳಬೇಕು, ಮಾಧ್ಯಮ ನಮ್ಮ ಕಣ್ಣು-ಹೃದಯ ಇದ್ದಂತೆ" ಎಂದರು.
ಮತ್ತೆ ಲಾಕ್ ಡೌನ್ ಗೆ ವಿರೋಧ ವ್ಯಕ್ತಪಡಿಸಿದ ಸಂಸದ
"ಬೆಂಗಳೂರಿನಲ್ಲಿ ಒಂದು ಸಾವಿರ ಬೆಡ್, ನೂರು ಆಂಬುಲೆನ್ಸ್ ಗಳನ್ನು ಸಿದ್ಧತೆ ಮಾಡಿಕೊಂಡಿದ್ದು, ರಾಜ್ಯದಲ್ಲಿ ಕೋವಿಡ್ ಸಮಸ್ಯೆ ಎದುರಿಸಲು ಸಕಲ ಸಿದ್ಧತೆ ಮಾಡಲಾಗಿದೆ. ಕೊರೊನಾ ನಾವು ಮಾಡಿದ್ದಲ್ಲ, ಪ್ರಕೃತಿಯಿಂದ ಆಗಿದ್ದು. ಸಚಿವ ಸುಧಾಕರ್ ಕ್ವಾರಂಟೈನ್ ಆಗಿದ್ದರಿಂದ 3 ದಿನ ಸ್ವಲ್ಪ ತೊಂದರೆ ಆಯ್ತು. ಬೆಂಗಳೂರು ಹೊರತುಪಡಿಸಿ ಬೇರೆಲ್ಲೂ ಆ ರೀತಿಯ ಸಮಸ್ಯೆ ಇಲ್ಲ" ಎಂದು ಹೇಳಿದರು.
ಇದೆ ವೇಳೆ 1 ವರ್ಷದಲ್ಲಿ 5.40 ಲಕ್ಷ ಅರ್ಹ ಕುಟುಂಬಗಳಿಗೆ 10174 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಮನೆ ಮಂಜೂರು ಮಾಡಲು ಮನವಿ: ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ವಿ ಸೋಮಣ್ಣ ಅವರನ್ನು ಭೇಟಿಯಾಗಿ ನಗರಕ್ಕೆ 2000 ಮತ್ತು ಗ್ರಾಮೀಣ ಪ್ರದೇಶಕ್ಕೆ 5000 ವಸತಿ ಮನೆಗಳನ್ನು ಮಂಜೂರು ಮಾಡಲು ಮನವಿ ಮಾಡಿದರು.