ಹಿರಿಯೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೊಸ ರೂಪ
ಚಿತ್ರದುರ್ಗ, ಜನವರಿ 26: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಹೃದಯ ಭಾಗದಲ್ಲಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಶಿಥಿಲಗೊಂಡು ಬಹಳ ದಿನ ಕಳೆದಿತ್ತು. ಇದೀಗ ದುರಸ್ಥಿ ಕಾರ್ಯಕ್ಕೆ ಚಿತ್ರದುರ್ಗ ರಸ್ತೆ ಸಾರಿಗೆ ಘಟಕ ಮುಂದಾಗಿದೆ.
ಹಿರಿಯೂರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮೇಲ್ಛಾವಣೆಗೆ ಕೊನೆಗೂ ಕಾಯಕಲ್ಪದ ಭಾಗ್ಯ ಒದಗಿ ಬಂದಿದೆ. ಪ್ರಯಾಣಿಕರ ಸತತ ದೂರುಗಳು ಹಾಗೂ ಮನವಿ ಮೇರೆಗೆ ರಾಜ್ಯ ರಸ್ತೆ ಸಾರಿಗೆ ಚಿತ್ರದುರ್ಗ ವಿಭಾಗದ ಘಟಕದ ವತಿಯಿಂದ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಬಸ್ ನಿಲ್ದಾಣದ ದುರಸ್ತಿ ಕಾರ್ಯ ಪ್ರಾರಂಭವಾಗಿದೆ.
120 ಕೋಟಿ ರೂ. ವೆಚ್ಚದಲ್ಲಿ ದಾವಣಗೆರೆ ಬಸ್ ನಿಲ್ದಾಣ ಪುನರ್ ನಿರ್ಮಾಣ
ಈ ದುರಸ್ತಿ ಕಾರ್ಯದಿಂದ ನಗರದ ಕೇಂದ್ರ ಭಾಗದಲ್ಲಿರುವ ಈ ಬಸ್ ನಿಲ್ದಾಣ ಪ್ರಯಾಣಿಕರಿಗೆ ತುಂಬಾ ಅನುಕೂಲರವಾಗಿದೆ. ರಾಜ್ಯದ ಸುತ್ತಲಿಗೂ ಇಲ್ಲಿಂದ ನೂರಾರು ಬಸ್ಗಳು ಸಂಚರಿಸುತ್ತವೆ. ಸಾವಿರಾರು ಪ್ರಯಾಣಿಕರು ನಿತ್ಯ ಓಡಾಡುತ್ತಾರೆ. ಅದರಲ್ಲೂ ಪ್ರಮುಖವಾಗಿ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಜನರು ಬೆಂಗಳೂರು ತಲುಪಬೇಕೆಂದರೆ ಹಿರಿಯೂರು ನಗರವನ್ನು ಪ್ರವೇಶಿಸಿ ಮುಂದೆ ಸಾಗಬೇಕು.
72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ
ಹಣ ಕೊಟ್ಟು ನೀರು ಕೊಂಡಕೊಳ್ಳಬೇಕಾಗಿತ್ತು
ಬಸ್ ನಿಲ್ದಾಣ ಹಲವು ಸಮಸ್ಯೆಗಳಿಂದ ಕೂಡಿದ್ದು, ನಿಲ್ದಾಣದ ಮೇಲ್ಛಾವಣೆಯ ಶೀಟುಗಳು ಹೊಡೆದು ಮಳೆಗೆ ಸೊರುತ್ತಿದ್ದು, ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಅಲ್ಲದೇ ಕುಡಿಯುವ ನೀರಿನ ವ್ಯವಸ್ಥೆಯು ಹದಗೆಟ್ಟಿತ್ತು. ಪ್ರಯಾಣಿಕರು ಹಣ ಕೊಟ್ಟು ನೀರು ಕೊಂಡಕೊಳ್ಳಬೇಕಾಗಿತ್ತು. ಇತ್ತೀಚೆಗೆ ನಿಲ್ದಾಣದ ಸುತ್ತಲೂ ಕಂಪೌಂಡ್ ನಿರ್ಮಿಸಿ, ಬಸ್ ಒಳಗೆ ಹಾಗೂ ಹೊರಗೆ ಹೋಗಲು ಎಲ್ಲಾ ರೀತಿ ವ್ಯವಸ್ಥೆ ಮಾಡಲಾಗಿತ್ತು. ಹಾಗಾಗಿ ಮೇಲ್ಛಾವಣೆ ದುರಸ್ಥಿ ಕಾರ್ಯ ಮಾಡುವಂತೆ ಆಗ್ರಹ ಕೇಳಿಬಂದಿತ್ತು. ಅಪಾಯ ಎದುರಾಗುವ ಮೊದಲು ಶೀಟುಗಳನ್ನು ತೆರವುಗೊಳಿಸಲು ಒತ್ತಾಯವಿತ್ತು.
10 ದಿನಗಳಲ್ಲಿ ಸಂಪೂರ್ಣ ನವೀಕರಣ
ಆ ನಿಟ್ಟಿನಲ್ಲಿ ಚಿತ್ರದುರ್ಗ ಘಟಕವು ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ದು, ಈಗಾಗಲೇ ಕಾರ್ಯ ಪ್ರಾರಂಭವಾಗಿ, ಇನ್ನೇನು ಕೆಲವೇ ದಿನಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎನ್ನಬಹುದು. ನಿಲ್ದಾಣದ ಮೇಲ್ಛಾವಣೆಗೆ ಬಳಸಲಾದ ಶೀಟ್ ಹಾಗೂ ಕಬ್ಬಿಣದ ಸರಳುಗಳನ್ನು ತೆರವುಗೊಳಿಸಲಾಗುತ್ತಿದ್ದು, ಹೊಸ ಹೊಸ ಶೀಟ್ ಗಳನ್ನು ಜೋಡಿಸಲಾಗುತ್ತಿದೆ. ಸುಮಾರು 10 ದಿನಗಳಲ್ಲಿ ಸಂಪೂರ್ಣ ನವೀಕರಣ ಕಾಮಗಾರಿ ಮುಗಿಯಲಿದೆ. ಶುದ್ಧ ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಹಾಗೂ ಕಳ್ಳತನ ಮತ್ತು ಇತರೆ ಅಪರಾಧ ಚಟುವಟಿಕೆಗಳಿಗೆ ನಿಯಂತ್ರಣಕ್ಕೆ ಈಗಾಗಲೇ ಎರಡು ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಅಗತ್ಯ ಇರುವೆ ಕಡೆ ಇನ್ನೂ ಹೆಚ್ಚಿನ ಸಿಸಿ ಕ್ಯಾಮೆರಾ ಅಳವಡಿಸಲು ಸಿದ್ಧತೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪರ್ಯಾಯ ವ್ಯವಸ್ಥೆ
ಬಸ್ ನಿಲ್ದಾಣದ ದುರಸ್ತಿ ಕಾರ್ಯ ನಡೆಯುವ ಪ್ರಯುಕ್ತ ನಿಲ್ದಾಣಕ್ಕೆ ಆಗಮಿಸುವ ಬಸ್ಗಳನ್ನು ಮುಂಭಾಗದಲ್ಲಿ ನಿಲ್ಲಿಸುವಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಸುರಕ್ಷಿತ ದೃಷ್ಟಿಯಿಂದ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ನಿಲ್ದಾಣದ ಒಳಗೆ ಪ್ರವೇಶ ನಿಷೇಧಿಸಲಾಗಿದೆ. ನಿಲ್ದಾಣದ ಒಳಭಾಗದಲ್ಲಿರುವ ಹೋಟೆಲ್ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದು, ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ನಿಲ್ದಾಣದ ಮುಂಭಾಗದಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದ್ದು, ಬಸ್ ಸಂಚಾರದ ಮಾಹಿತಿಯೂ ನೀಡಲಾಗುತ್ತಿದೆ.
ನೆನಗುದಿಗೆ ಬಿದ್ದಿರುವ ಡಿಪೋ ಬೇಡಿಕೆ
ಹಿರಿಯೂರು ನಗರದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ವಿವಿಧ ಭಾಗಗಳಿಂದ ನಿತ್ಯ ಸಾವಿರಾರು ಬಸ್ಗಳು ಬಂದು ಹೋಗುತ್ತವೆ. ಹಾಗಾಗಿ ಹಿರಿಯೂರು ತಾಲೂಕು ಕೇಂದ್ರದಲ್ಲಿ ಡಿಪೋ ಸ್ಥಾಪಿಸುವ ಅಗತ್ಯವಿದೆ ಎಂಬುದು ಸ್ಥಳೀಯರ ದಶಕಗಳ ಕಾಲದ ಬೇಡಿಕೆಯಾಗಿದ್ದು, ನೆನಗುದಿಗೆ ಬಿದ್ದಿದೆ. ನಗರದ ಹುಳಿಯಾರು ರಸ್ತೆಯಲ್ಲಿ ಸುಮಾರು ೫ ಎಕರೆ ಜಮೀನು ಬಸ್ ಡಿಪೋಗೆ ಕಾಯ್ದಿರಿಸಲಾಗಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಜಾಗದಲ್ಲಿ ಡಿಪೋ ನಿರ್ಮಾಣ ಮಾಡಲು ಆಗುವುದಿಲ್ಲ ಎಂದು ಆದಿವಾಲ ಸಮೀಪದಲ್ಲಿ ಜಾಗ ನಿಗದಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಯಾವುದೇ ನಿರ್ಮಾಣ ಪ್ರಕ್ರಿಯೆ ನಡೆಯದೆ ನೆನಗುದಿಗೆ ಬಿದ್ದಿದೆ.
ಆಟೋ, ಬೈಕ್ ಚಲಿಸಬಾರದೆಂದು ಮನವಿ
ಬಸ್ ನಿಲ್ದಾಣದ ಮೇಲ್ಛಾವಣೆಯಲ್ಲಿರುವ ಶೀಟುಗಳು ಹೊಡೆದು ಮಳೆಗಾಲದಲ್ಲಿ ತುಂಬಾ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಚಿತ್ರದುರ್ಗ ಘಟಕದಿಂದ ದುರಸ್ಥಿ ಕಾರ್ಯ ಪ್ರಾರಂಭಿಸಲಾಗಿದೆ. ಆದ್ದರಿಂದ ಅನಗತ್ಯವಾಗಿ ಬಸ್ ನಿಲ್ದಾಣದ ಒಳಗೆ ಸಾರ್ವಜನಿಕರು ಪ್ರವೇಶಿಸದಂತೆ ಹಾಗೂ ಇತರೆ ಖಾಸಗಿ ಕಾರು, ಆಟೋ, ಬೈಕ್ ಚಲಿಸಬಾರದೆಂದು ಮನವಿ ಮಾಡುತ್ತೇನೆ. ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ ಎಂದು ಸಂಚಾರಿ ನಿಯಂತ್ರಣಾಕಾರಿ ಖಾದರ್ ತಿಳಿಸಿದರು.
ಬಸ್ ಡಿಪೋ ನಿರ್ಮಾಣಕ್ಕೆ ಮುಂದಾಗಬೇಕು
ಬಸ್ ನಿಲ್ದಾಣದ ದುರಸ್ತಿ ಕಾರ್ಯ ಬಹು ದಿನಗಳ ಒತ್ತಾಯವಾಗಿದ್ದು, ಅವಶ್ಯಕವಾಗಿತ್ತು. ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದುರಸ್ಥಿ ಮಾಡುತ್ತಿರುವುದು ಸಂತೋಷದ ವಿಷಯ. ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ಅಪರಾಧ ಪ್ರಕರಣಗಳ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಜತೆಗೆ ಶಾಸಕರು ಕೂಡಲೇ ಹೆಚ್ಚಿನ ಗಮನಹರಿಸಿ ತಾಲೂಕಿನಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಡಾ.ರಾಜ್ ಅಭಿಮಾನಿಗಳ ಸಂಘ ಅಧ್ಯಕ್ಷ ಕೇಶವಮೂರ್ತಿ ತಿಳಿಸಿದರು.
Recommended Video