ನವೆಂಬರ್ 02ರಿಂದ ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವ
ಹೊಸದುರ್ಗ, ಅಕ್ಟೋಬರ್ 29: ಸಾಣೇಹಳ್ಳಿಯಲ್ಲಿ ನಡೆಯುವ ರಾಷ್ಟ್ರೀಯ ನಾಟಕೋತ್ಸವವನ್ನು ನವೆಂಬರ್ 02 ರಿಂದ 07ರ ತನಕ 6 ದಿನಗಳ ಕಾಲ ಅಯೋಜಿಸಲಾಗಿದೆ ಎಂದು ಡಾ. ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದ್ದಾರೆ.
ಶ್ರೀಬಸವ ಗುರು ಮಹಾಮನೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ 2019ರ ರಾಷ್ಟ್ರೀಯ ನಾಟಕೋತ್ಸವ ಪೂರ್ವ ಸಿದ್ಧತೆ ಕುರಿತಂತೆ ನಡೆದ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಪಂಡಿತಾರಾಧ್ಯ ಸ್ವಾಮೀಜಿ ಅವರು ಮಾತನಾಡಿದರು. ನಾಟಕೋತ್ಸವ ಆಯೋಜನೆ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆದರೆ ನಾಟಕೋತ್ಸವ ನಿಲ್ಲಿಸುವ ಕುರಿತ ಯೋಚಿಸಲೇ ಬಾರದೆಂಬ ಎಚ್ಚರಿಕೆ ನೀಡಿದಂತೆ ಭಾಸವಾಗಿದೆ. ಈ ನಾಟಕೋತ್ಸವ ನಮಗಾಗಿ ಅಲ್ಲ, ಸಮಾಜಕ್ಕಾಗಿ, ಹೀಗಾಗಿ ನಾವು ಹಿಂದೆ ಸರಿಯುವುದರಲ್ಲಿ ಅರ್ಥವಿಲ್ಲ. ನವೆಂಬರ್ 02ರಿಂದ 6 ದಿನಗಳ ಕಾಲ ನಾಟಕೋತ್ಸವ ನಡೆಯಲಿದೆ ಎಂದರು.
ನಾಟಕೋತ್ಸವದ ಜೊತೆಗೆ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಕೆಲ ಚಲನಚಿತ್ರಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗುವುದು ಎಂದರು. ನಾಟಕದ ಜೊತೆ ಪ್ರತಿದಿನ ಸಾಮೂಹಿಕ ಪ್ರಾರ್ಥನೆ, ಚಿಂತನ, ವಚನ ಗೀತೆ, ಉಪನ್ಯಾಸ ಕಾರ್ಯಕ್ರಮಗಳಿದ್ದು ಅವುಗಳನ್ನು ವೀಕ್ಷಿಸಬಹುದಾಗಿದೆ.
ಸಭೆಯಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಮಾಜಿ ಶಾಸಕ ಇಲ್ಕಲ್ ವಿಜಯಕುಮಾರ್, ಕಡೂರು ಶಾಸಕ ಕೆ.ಬಿ ಮಲ್ಲಿಕಾರ್ಜುನ, ಚಿತ್ರದುರ್ಗ ಮಂಜುನಾಥ್, ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಶಾಸಕ ಸುರೇಶ್, ಹೊಳೆಲ್ಕೆರೆ ಮಾಜಿ ಶಾಸಕ ರಮೇಶ್, ನಿವೃತ್ತ ಡಿವೈಎಸ್ಪಿ ಪಿ ಅಜ್ಜಪ್ಪ, ಸಿ.ಕೆ ಸ್ವಾಮಿ, ಜಿ. ಪಂ ಸದಸ್ಯ ಅಜ್ಜಪ್ಪ, ಅಜ್ಜಂಪುರದ ಎಸಿ ಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.