ವಿಶೇಷ ಸುದ್ದಿ: ಎರಡು ಗ್ರಾ.ಪಂ ನಡುವೆ ಅಡ್ಡ ಕತ್ತರಿಯಲ್ಲಿ ಸಿಲುಕಿದ ಚಿತ್ರದುರ್ಗದ ನತದೃಷ್ಟ ಗ್ರಾಮ!
ಚಿತ್ರದುರ್ಗ, ಫೆಬ್ರವರಿ 16: ಎರಡು ಗ್ರಾಮ ಪಂಚಾಯತಿಗಳ ನಡುವೆ ನಿರ್ಲಕ್ಷ್ಯಕ್ಕೆ ಒಳಪಟ್ಟ ರಾಜ್ಯದ ನತದೃಷ್ಟ ಗ್ರಾಮವೊಂದು ಮೂಲಭೂತ ಸೌಕರ್ಯಗಳಿಲ್ಲದೇ ನರಕಯಾತೆನೆಯಲ್ಲಿರುವ ಕುಗ್ರಾಮವೊಂದು ನಾವು ಪರಿಚಯಿಸುತ್ತಿದ್ದೇವೆ ಮುಂದೆ ಓದಿ....
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಳಿಯಾರು ರಸ್ತೆಯ ಚಳಮಡು ಗ್ರಾಮದ ಮೂಲಕ ಬೂತನಹಟ್ಟಿ ಗ್ರಾಮದಿಂದ ಸುಮಾರು 2 ಕಿ.ಮೀ ದೂರದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಕುಗ್ರಾಮವೇ "ನಜೀರ್ ಸಾಬ್ ಕಾಲೋನಿ' ಈ ಕಾಲೋನಿಯಲ್ಲಿ ಸುಮಾರು 35 ಬಡ ಕುಟುಂಬಗಳಿವೆ. 1978-1980 ರಿಂದ ವಾಸಮಾಡುತ್ತಿರುವ ಈ ಗ್ರಾಮದ ಕುಟುಂಬಗಳ ಜನರು ಮೂಲಭೂತ ಸೌಕರ್ಯಗಳಿಲ್ಲದೇ ನರಕಯಾತೆನೆಯಲ್ಲಿ ತೊಡಗಿದ್ದಾರೆ.
ಮೀಸಲಾತಿ ಹೋರಾಟ; ಚಿತ್ರದುರ್ಗದಲ್ಲಿ ಕಾಡುಗೊಲ್ಲರ ಉರುಳು ಸೇವೆ
ಗೌಡನಹಳ್ಳಿ ಗ್ರಾಮ ಪಂಚಾಯಿತಿ ವಿಳಾಸ
ಈ ಕುಟುಂಬಗಳು 124 ಸರ್ವೇ ನಂಬರ್ ನಲ್ಲಿ ಬರುವ, 404 ಎಕರೆ 36 ಗುಂಟೆ ಅರಣ್ಯ ಪ್ರದೇಶಕ್ಕೆ ವಲಸೆ ಹೋಗಿ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು, ಗುಡಿಸಲು, ಮನೆ ಕಟ್ಟಿಕೊಂಡು ಕಳೆದ 30-40 ವರ್ಷಗಳಿಂದ ವಾಸವಾಗಿದ್ದಾರೆ. ಪ್ರಸ್ತುತ ಇವರ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇತರೆ ದಾಖಲೆಗಳು "ಗೌಡನಹಳ್ಳಿ ಗ್ರಾಮ ಪಂಚಾಯಿತಿ' ವಿಳಾಸಕ್ಕೆ ಸೇರಿವೆ. ಆದರೆ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡುವ ಮತದಾನದ ಹಕ್ಕು ಉಡುವಳ್ಳಿ ಗ್ರಾ.ಪಂ ಬೂತನಹಟ್ಟಿಗೆ ಸೇರಿದೆ.
ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿಸಲಾಗಿದೆ
ನಮಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾನ ಕಾರ್ಡ್, ಎಲ್ಲವೂ ಇದೆ. ಪಡಿತರ ಪದಾರ್ಥಗಳು ಬಿಟ್ಟರೆ ಬೇರೆ ಯಾವುದೇ ಸರ್ಕಾರದಿಂದ ಸೌಲಭ್ಯಗಳು ಸಿಗುತ್ತಿಲ್ಲ. ನಾವು ವಾಸಿಸುವ ಜಾಗಕ್ಕೆ ಮತ್ತು ಜಮೀನಿಗಳಿಗೆ ಕಂದಾಯ ಕಟ್ಟಿಕೊಂಡು ಬಂದಿದ್ದೆವೆ, ಜೊತೆಗೆ ಅಂದಿನಿಂದ ಇಂದಿನವರೆಗೂ ಜಮೀನಿನಲ್ಲಿ ಉಳಿಮೆ ಮಾಡಿಕೊಂಡು ಬರುತ್ತಿದ್ದೆವೆ, ಆದರೂ ಸಾಗುವಳಿ ಚೀಟಿ ಕೊಟ್ಟಿಲ್ಲ, ಜೊತೆಗೆ ಇದುವರಿಗೂ ಯಾವುದೇ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ನಾವು ವಾಸ ಮಾಡುತ್ತಿರುವ ಜಾಗ ಮುಂಚೆ "ಹುಲ್ಬಂಧಿ ಖರಾಬ್' ಆಗಿತ್ತು. ನಂತರ 2001ರಲ್ಲಿ ಈ ಜಾಗವನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿಸಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಮೂಲಭೂತ ಸೌಕರ್ಯಗಳಿಲ್ಲ
ಈ ಕುಟುಂಬಗಳಿಗೆ ಕುಡಿಯುವ ನೀರು ಬಿಟ್ಟರೆ ಬೇರೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ರಸ್ತೆ, ಬೀದಿ ದೀಪ, ಅಂಗನವಾಡಿ, ಶಾಲೆ, ರಸ್ತೆ , ವಾಹನ ಸೌಲಭ್ಯ, ಮನೆ ನಿರ್ಮಾಣ, ಯಾವ ಸೌಲಭ್ಯವೂ ಸಿಕ್ಕಿಲ್ಲ. ಈ ಕುಟುಂಬಗಳ ಜನರು ಬೆಳಕು ಕಾಣದೆ ಕತ್ತಲಲ್ಲಿ ವಾಸಿಸುತ್ತಾರೆ. ಗಿಡಗಂಟೆಗಳಿಂದ ಕೂಡಿದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಈ ಜನತೆಗೆ ಚಿರತೆ ಕಾಟ ಹೆಚ್ಚಾಗಿದೆ ಎನ್ನುತ್ತಾರೆ ಗ್ರಾಮಸ್ಥರು. 1991 ರಲ್ಲಿ ಮಂಡಲ ಪಂಚಾಯತಿ ಕಾರ್ಯಾಲಯ ಆದಿವಾಲ ಇವರಿಂದ "ನಜೀರ್ ಸಾಬ್ ಕಾಲೋನಿ' ಎಂದು ನಾಮಕರಣ ಮಾಡಲಾಗಿದೆ. ಆದರೆ ಇದುವರೆಗೂ ಯಾವುದೇ ಬೋರ್ಡ್ ಗಳಿಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.
ನಾಲ್ಕು ಮನೆಗಳು ಮಂಜೂರು
ನಮಗೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ನಮ್ಮ ಕಾಲೋನಿಗೆ ನಾಲ್ಕು ಮನೆಗಳು ಮಂಜೂರು ಆಗಿದ್ದವು. ನಾವು ಮನೆ ಕಟ್ಟಿಸಿಕೊಳ್ಳಲು ಮುಂದಾದಾಗ ಪಂಚಾಯತಿ ಅಧಿಕಾರಿಗಳು ನಿಮ್ಮ ಹೆಸರಿನಲ್ಲಿ ಮನೆ ಜಾಗದ ಖಾತೆ ಇಲ್ಲ, ಹಾಗಾಗಿ ಮನೆ ಕೊಡಲು ಸಾಧ್ಯವಿಲ್ಲ. ಸೂಕ್ತ ದಾಖಲೆ ತಂದರೆ ಮಾತ್ರ ಮನೆ ಮಂಜೂರು ಮಾಡುತ್ತೆವೆ ಎಂದು ಅಧಿಕಾರಿಗಳು ತಿಳಿಸಿದರು. ಆದರೆ ನಮಗೆ ಇದುವರೆಗೂ ಮನೆ ಕಟ್ಟಲು ಜಾಗವನ್ನು ಖಾತೆ ಮಾಡಿಕೊಟ್ಟಿಲ್ಲ ಎನ್ನುತ್ತಾರೆ ಮನೆಯ ಫಲಾನುಭವಿಯೊಬ್ಬರು.
ಶಿಕ್ಷಣದಿಂದ ವಂಚಿತ
ನಮ್ಮಲ್ಲಿ ಸುಮಾರು 70-80 ಜನಸಂಖ್ಯೆ ಇದೆ. ಯಾರೂ ಕೂಡ ವಿದ್ಯಾವಂತರಲ್ಲ. ನಮಗೆ ಓದಲು, ಬರೆಯಲು ಬರುವುದಿಲ್ಲ. ನಾವು ಕೂಲಿ-ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಅತೀ ಹೆಚ್ಚು ಅಂದರೆ 6-7ನೇ ತರಗತಿ ಮಾತ್ರ ನಮ್ಮಲ್ಲಿ ಓದಿರುವುದು. ಈ ಗ್ರಾಮದಲ್ಲಿ 30 ಮಕ್ಕಳು ಇದ್ದಾರೆ. ಶಾಲೆಗೆ ಹೋಗಬೇಕೆಂದರೆ 2 ಕಿ.ಮೀ ದೂರ ಹೋಗಬೇಕು, ಅದೂ ಸರಿಯಾದ ರಸ್ತೆ ಇಲ್ಲ. ಗಿಡಗಂಟೆಗಳಲ್ಲಿ ನಡೆದುಕೊಂಡು ಬೂತನಹಟ್ಟಿ ಶಾಲೆಗೆ ಹೋಗಬೇಕು, ಚಿರತೆ ಕಾಟ ಮೊನ್ನೆ ಇಲ್ಲಿ ಚಿರತೆ ಸೆರೆಯಿಡಿಲಾಗಿದೆ. ಚಿಕ್ಕ ಮಕ್ಕಳು ನಡೆದುಕೊಂಡು ಹೋಗಲು ಹೇಗೆ ಸಾದ್ಯ ಎಂದು ಪ್ರಶ್ನಿಸುತ್ತಾರೆ.
Recommended Video
ಗಮನ ಹರಿಸದ ರಾಜಕೀಯ ಪ್ರತಿನಿಧಿಗಳು
ಇದುವರೆಗೂ ಯಾವುದೇ ರಾಜಕೀಯ ಪಕ್ಷದ ಜನಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡಿಲ್ಲ. ಚುನಾಯಿತ ಸಂದರ್ಭದಲ್ಲಿ ಮಾತ್ರ ನಮಗೆ ಮತದಾನ ಮಾಡಿ ಅಂತ ಅಕ್ಕಪಕ್ಕದ ಗ್ರಾಮದವರು ಕೇಳುತ್ತಾರೆ. ಶಾಸಕರು, ಸಂಸದರು ಯಾರು ಕೂಡ ನಮ್ಮ ಕಾಲೋನಿಗೆ ಭೇಟಿ ನೀಡಿ ನಮ್ಮ ಪರಿಸ್ಥಿತಿಯನ್ನು ಗಮನಿಸಿಲ್ಲ. ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಬಿ. ಪಾಪಣ್ಣ ಅವರು ಮಾತ್ರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ನಮ್ಮ ಸಮಸ್ಯೆಗೆ ಅವರು ಸ್ಪಂದಿಸಿದ್ದು, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ವ್ಯಕ್ತಿ ಮೊಹಿದ್ದೀನ್ ಆರೋಪಿಸಿದರು. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಜಿಲ್ಲಾಡಳಿತ, ಶಾಸಕರು, ಸಂಸದರು ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಿ, ಇವರಿಗೆ ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸುತ್ತಾರಾ ಹೇಗೆ ಎಂಬುದನ್ನು ಕಾದು ನೋಡಬೇಕಿದೆ.