ಸಿಎಂ ಯಡಿಯೂರಪ್ಪ ಬದಲಾವಣೆಗೆ ಮುರುಘಾ ಶರಣರ ಆಕ್ಷೇಪ
ಚಿತ್ರದುರ್ಗ, ಜುಲೈ 20: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರಕ್ಕೆ ಚಿತ್ರದುರ್ಗದ ಮುರುಘಾ ಶರಣರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ದೊಡ್ಡ ಶಕ್ತಿಯಾಗಿದ್ದು, ಅವರು ಶಕ್ತಿಯನ್ನೂ ತೋರಿಸಬಲ್ಲರು, ಕೆಲವರಿಗೆ ಸವಾಲು ಆಗಬಲ್ಲರು. ಅಂತಹ ಮುತ್ಸದ್ದಿ, ಮೇಧಾವಿತನ ಯಡಯೂರಪ್ಪರಲ್ಲಿದೆ," ಎಂದು ಮುರುಘಾ ಶ್ರೀಗಳು ತಿಳಿಸಿದರು.
ಜುಲೈ 26ಕ್ಕೆ ಬಿಎಸ್ವೈ ಸರಕಾರಕ್ಕೆ 2ವರ್ಷ: ವಿದಾಯವೋ, ವಿಜೃಂಭಣೆಯೋ
ಚಿತ್ರದುರ್ಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುರುಘಾ ಶ್ರೀ, "ಯಡಿಯೂರಪ್ಪ ಜಾತಿ, ಧರ್ಮದಿಂದ ಲಿಂಗಾಯತಾರಗಿರಬಹುದು. ಆದರೆ ಅವರೊಬ್ಬ ಮಾಸ್ ಲೀಡರ್. ಎಲ್ಲಾ ಜಾತಿ, ಸಮುದಾಯ, ಧರ್ಮಗಳನ್ನು ಪ್ರೀತಿಯಿಂದ ನೋಡಿಕೊಂಡು ಬಂದಿದ್ದಾರೆ. ಅದಕ್ಕೆ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿರುವ ಎಲ್ಲಾ ಮಠಾಧೀಶರೇ ಸಾಕ್ಷಿ,'' ಎಂದು ಹೇಳಿದರು.
"ಸರ್ವ ಜನಾಂಗವನ್ನೂ ಜೊತೆಯಲ್ಲಿ ಕರೆದೊಯ್ಯುವ ಯಡಿಯೂರಪ್ಪಗೆ ತೊಂದರೆ ಆಗಬಾರದು. ಅವರು ಏಕಾಂಗಿಯಾಗಿ ತಳಮಟ್ಟದಿಂದ ಬಂದು 3- 4 ಬಾರಿ ಸಿಎಂ ಆಗಿದ್ದಾರೆ. ಎರಡು ವರ್ಷಗಳ ಕಾಲ ಕೋವಿಡ್ ನಿರ್ವಹಿಸಿರುವ ಅವರನ್ನು ಮುಂದುವರಿಸಬೇಕು. ಇದು ನಾಡಿನ ಎಲ್ಲಾ ಮಠಾಧೀಶರ, ಬೇರೆ ರಾಜಕೀಯ ಪಕ್ಷಗಳ ಮುಖಂಡ ಆಶಯವಾಗಿದೆ,'' ಎಂದರು.
"ಸರ್ಕಾರದಲ್ಲಿ ಆತಂಕ ರಹಿತ ಆಡಳಿತ ಯಾವಾಗ ಸಾಧ್ಯವಿದೆ? ಆಡಳಿತ ಸರ್ಕಾರದಲ್ಲಿ ಆಂತರಿಕ ಬೇಗುದಿ, ಕಚ್ಚಾಟ ಇರಬಾರದು. ಯಡಿಯೂರಪ್ಪ ನಾಡು ಕಂಡ ಶ್ರೇಷ್ಠ ರಾಜಕಾರಣಿ. ಏಕವ್ಯಕ್ತಿ ಮೂಲಕ ಹೋರಾಟ ಆರಂಭಿಸಿ ಸರ್ಕಾರ ರಚಿಸಿದ ಶಕ್ತಿ ಅವರದು. ಕೊವೀಡ್ ಪರಿಸ್ಥಿತಿ ನಿಭಾಯಿಸಿದ್ದನ್ನು ಕೇಂದ್ರ ಸರ್ಕಾರ ಶ್ಲಾಘಿಸಿದೆ."
"ಕೊರೊನಾ ಸಂದಿಗ್ಧ ಸ್ಥಿತಿಯನ್ನು ಮುನ್ನಡೆಸುವುದು ತುಂಬಾ ಕಷ್ಟದ ಕೆಲಸವಾಗಿತ್ತು. ವಯಸ್ಸನ್ನು ಮೀರಿ, ಯುವಕರಂತೆ ಸಭೆ ಸಮಾರಂಭದಲ್ಲಿ ಭಾಗವಹಿಸುತ್ತಿದ್ದು, ಅವರ ಕಾರ್ಯವೈಖರಿ ಯುವಕರನ್ನು ನಾಚಿಸುವಂತಿದೆ. ರಾಜಕೀಯವಾಗಿ ಅವರು ಅನುಭವ ಗಳಿಸಿದ್ದಾರೆ. ಯಡಿಯೂರಪ್ಪರಿಗೆ ತೊಂದೆರೆ ಆಗಬಾರದು ಎಂಬ ಒತ್ತಾಸೆ ನಮ್ಮದು, ಇನ್ನು ಹೈಕಮಾಂಡ್ಗೆ ಬಿಟ್ಟ ವಿಚಾರ,'' ಎಂದು ಶ್ರೀಗಳು ತಿಳಿಸಿದರು.
"ಸಿಎಂ ಬದಲಾವಣೆ ಆದರೆ ನಾಡಿನ ಎಲ್ಲಾ ಮಠಾಧೀಶರು ಸೇರಿ ನಿರ್ಣಯ ಮಾಡುತ್ತೇವೆ. ಸಾಮೂಹಿಕ ಹೋರಾಟದ ವಿಚಾರಗಳು ಕೇಳಿಬರುತ್ತಿವೆ. ಮುಂದೆ ಏನು ಮಾಡಬೇಕು ಎಂಬುದನ್ನು ನಾವೆಲ್ಲರೂ ಸೇರಿ ತೀರ್ಮಾನ ಮಾಡುತ್ತೇವೆ. ಲಿಂಗಾಯತ ಧರ್ಮದ ಪ್ರಮುಖ ನಾಯಕರಿಗೆ ಅನ್ಯಾಯ ಆಗಬಾರದು,'' ಎಂದು ಹೇಳಿದರು.
"ಯಡಿಯೂರಪ್ಪರನ್ನು ತೆಗೆಯುವುದರಿಂದ ಯಡಿಯೂರಪ್ಪರಿಗೆ ನಷ್ಟ ಇಲ್ಲ, ಬದಲಿಸುವವರಿಗೆ ನಷ್ಟವಾಗುತ್ತದೆ ಹಾಗೂ ಬಿಜೆಪಿ ಪಕ್ಷಕ್ಕೂ ನಷ್ಟವಾಗುತ್ತದೆ,'' ಎಂದು ಮುರುಘಾ ಶ್ರೀಗಳು ಕಿವಿಮಾತು ಹೇಳಿದರು.