"ಸಿಎಂ ಕುರ್ಚಿ ಬಗ್ಗೆ ಮಾತಾಡುವುದೇ ಅನಾಗರಿಕತನ, ಕುಚೇಷ್ಟೆ''
ಚಿತ್ರದುರ್ಗ, ಜೂನ್ 8: "ಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾವುದೇ ಶಾಸಕ, ಕಾರ್ಯಕರ್ತ ಮಾತನಾಡುವುದು ಅನಾಗರಿಕತನ ಹಾಗೂ ಕುಚೇಷ್ಟೆ'' ಎಂದು ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಕಿಡಿಕಾರಿದರು.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಎ.ನಾರಾಯಣಸ್ವಾಮಿ, ""ಸಿಎಂ ಯಡಿಯೂರಪ್ಪ ಒಬ್ಬ ಸಮರ್ಥ ನಾಯಕ. ಅವರು ಕೋವಿಡ್ ಒಂದು ಮತ್ತು ಎರಡನೇ ಅಲೆಯನ್ನು ಬಹಳಷ್ಟು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಯಾರೂ ಮಾತನಾಡಬಾರದು'' ಎಂದರು.
ಮುಖ್ಯಮಂತ್ರಿಗಳ ಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಹಿ ಸಂಗ್ರಹಣೆಯೂ ತಪ್ಪು, ಹೀಗೆ ಮಾಡುವುದರಿಂದ ಬಿಜೆಪಿಯಲ್ಲಿ ಸಿಎಂ ಬದಲಾವಣೆ ವಿಚಾರ ಬಿಜೆಪಿಯಲ್ಲಿ ಬರುವುದು ಬೇಡ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸ್ವತಃ ಸಿಎಂ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಹೇಳಿದರು.
"ಇನ್ನು ಮಠಾಧೀಶರುಗಳನ್ನು ರಾಜಕಾರಣಕ್ಕೆ ತರುವುದು ಒಳ್ಳೆಯದಲ್ಲ. ಅವರು ಮಾಡುವುದು ಬೇಡ. ಅವರು ಸಮಾಜದ ಕೆಲಸ ಮಾಡಿಕೊಂಡು ಇರಬೇಕು. ಸ್ವಾಮೀಜಿಗಳು ಯಾವಾಗಲೂ ನಮ್ಮ ಪಕ್ಷದಲ್ಲಿ ಕೆಲಸ ಮಾಡಿಲ್ಲ. ಯಡಿಯೂರಪ್ಪ ವೀರಶೈವ ಎಂಬ ಕಾರಣಕ್ಕೆ ಅವರು ಮಠಾಧೀಶರ ಹಿಡಿತದಲ್ಲಿಲ್ಲ. ಅದೇ ರೀತಿ ಮಠಾಧೀಶರುಗಳು ಕೂಡ ಯಡಿಯೂರಪ್ಪ ಅವರ ಹಿಡಿತದಲ್ಲಿಲ್ಲ'' ಎಂದು ಸ್ಪಷ್ಟಪಡಿಸಿದರು.
ರಾಜಕಾರಣ ಮಾಡುವುದಕ್ಕೆ ಸಂಘ ಪರಿವಾರವಿದೆ. ಅದರ ಕೆಳಗೆ ಬಿಜೆಪಿ ಇಂದು ರಾಜ್ಯ ಹಾಗೂ ದೇಶದಲ್ಲಿ ಆಡಳಿತ ನಡೆಸುತ್ತಿದೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಸಿಎಂ ಜವಾಬ್ದಾರಿ ನೀಡಿದ್ದಾರೆ. ಅದನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ, ಮುಂದುವರೆಸುತ್ತಾರೆ ಕೂಡ ಎಂದು ತಿಳಿಸಿದರು.
Recommended Video
ಬಿಜೆಪಿಯಲ್ಲಿ ಸಿಎಂ ಸ್ಥಾನದ ಬದಲಾವಣೆ ಇಲ್ಲ, ಯಾರಾದರೂ ದೆಹಲಿಗೆ ಹೋಗಿ ಬಂದಿದ್ದರೆ ಅದು ಅವರ ಹುಚ್ಚುತನ. ಸಿಎಂ ಸ್ಥಾನ ಪಲ್ಲಟ ಆಗೋದೆ ಇಲ್ಲ ಎಂದು ನೇರವಾಗಿ ಹೇಳುತ್ತೇನೆ ಎಂದ ಸಂಸದ ಎ.ನಾರಾಯಣಸ್ವಾಮಿ, ಈಗಿರುವ ಭಿನ್ನಮತ ತಣ್ಣಗಾಗುತ್ತದೆ. ಶಮನ ಮಾಡುವ ಗಂಡಸುತನ, ಎದೆಗಾರಿಕೆ ಎರಡು ಯಡಿಯೂರಪ್ಪ ಅವರಿಗಿದೆ ಎಂದು ಹೇಳಿದರು.