ಹೊಳಲ್ಕೆರೆಯಲ್ಲಿ 10 ತಿಂಗಳ ಮಗು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ
ಚಿತ್ರದುರ್ಗ, ಫೆಬ್ರವರಿ 25: ತೀವ್ರ ಹೊಟ್ಟೆ ನೋವು ತಾಳಲಾರದೆ ಮಹಿಳೆಯೊಬ್ಬರು ತನ್ನ ಹತ್ತು ತಿಂಗಳ ಹಸುಗೂಸನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಐನಳ್ಳಿ ಗ್ರಾಮದಲ್ಲಿ ನಡೆದಿದೆ.
ಆಶಾಬಾಯಿ (24) ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ. ಹೆರಿಗೆ ಬಳಿಕ ಆಶಾಬಾಯಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ನೋವು ಹಾಗೂ ತೀವ್ರ ಅನಾರೋಗ್ಯ ತಾಳಲಾರದೆ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾರೆ. ಅನಾರೋಗ್ಯದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ ಎಂದು ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ.
ಡ್ರಮ್ ನಲ್ಲಿ ಮುಳುಗಿಸಿ ಮಗು ಕೊಂದ ತಾಯಿ
ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಕೈಗೊಂಡ ನಂತರ ಮನೆಯಲ್ಲಿ ಯಾರೂ ಇಲ್ಲದ ವೇಳೆಯನ್ನು ನೋಡಿಕೊಂಡು ಮೊದಲು ಮಗುವನ್ನು ಡ್ರಮ್ ನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಂದಿದ್ದಾರೆ. ನಂತರ ತಾವೂ ಡೆತ್ ನೋಟ್ ಬರೆದಿಟ್ಟು, ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಡಿಯೋ; ನದಿಗೆ ಜಿಗಿದ ತಾಯಿ, ಸೇತುವೆ ಮೇಲೆ ಮಗು ಏಕಾಂಗಿ
ಡೆತ್ ನೋಟ್ ನಲ್ಲಿ ಏನಿದೆ?
ಹೆರಿಗೆ ಆದ ನಂತರ ಆಶಾ ಅವರಿಗೆ ತೀವ್ರವಾಗಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು ಎಂದು ತಿಳಿದುಬಂದಿದೆ. ಆ ನೋವಿನಿಂದ ಬಳಲುತ್ತಿದ್ದ ಅವರು ನೋವು, ಅನಾರೋಗ್ಯದ ಕಾರಣದಿಂದಾಗೇ ಸಾಯುತ್ತಿರುವುದಾಗಿ ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ. ತಾನು ಸತ್ತರೆ ಮಗು ಅನಾಥವಾಗುತ್ತದೆ ಎಂಬ ಕಾರಣಕ್ಕೆ ಮಗುವನ್ನೂ ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಆಶಾ
ಆಶಾ ಹಾಗೂ ಹೇಮಂತ್ ಪರಸ್ಪರ ಪ್ರೀತಿಸುತ್ತಿದ್ದರು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಹೇಮಂತ್ ಜೊತೆ ಎರಡು ವರ್ಷಗಳ ಹಿಂದೆಯಷ್ಟೇ ಆಶಾ ಪ್ರೇಮವಿವಾಹ ಆಗಿದ್ದರು. ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರು. ಹತ್ತು ತಿಂಗಳ ಹಿಂದಷ್ಟೇ ಮುದ್ದಾದ ಗಂಡು ಮಗು ಕೂಡ ಜನಿಸಿತ್ತು. ಆದರೆ ಆಶಾ ಅವರ ಈ ಒಂದು ನಿರ್ಧಾರ ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತೆ ಆಗಿದೆ.
ಒಂದು ಕೊಲೆ, ಎರಡು ಆತ್ಮಹತ್ಯೆ; ಡಾಕ್ಟರ್ ಜೀವನದ ದುರಂತ ಕಥೆ!
ಮಾನಸಿಕ ಖಿನ್ನತೆ ಒಳಗಾಗಿದ್ದ ಆಶಾ
ಹೆರಿಗೆ ನಂತರ ಪದೇ ಪದೇ ನೋವು ಕಾಣಿಸಿಕೊಂಡು ನಿರಂತರ ಅನಾರೋಗ್ಯ ಉಂಟಾದ್ದರಿಂದ ಆಶಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಇದರಿಂದಲೇ ಆತ್ಮಹತ್ಯೆಯ ಮಾಡಿಕೊಳ್ಳುವ ನಿರ್ಧಾರವನ್ನೂ ಕೈಗೊಂಡಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ತನಿಖೆ ಮುಂದುವರಿಸಿದ್ದಾರೆ.