ಮಗನ ಕನಸಿಗೆ ಹೆಗಲುಕೊಟ್ಟ ಈ ಅಮ್ಮನ ಕಥೆ ಕಟುಕನಿಗೂ ಕಣ್ಣೀರು ತರುತ್ತದೆ
ಚಿತ್ರದುರ್ಗ, ನವೆಂಬರ್ 29: ಹುಟ್ಟುತ್ತಲೇ ಮಗ ಅಂಗವಿಕಲ. ಮೂರು ವರ್ಷದ ಹಿಂದೆ ಗಂಡ ಕೂಡ ಇಲ್ಲವಾದರು. ಬಗಲಿಗೆ ಇರುವ ಮೂರು ಮಕ್ಕಳ ಹೊಟ್ಟೆ ತುಂಬಿಸಲು ಜೊತೆಗಿರುವುದು ಕೂಲಿ ನಾಲಿ ಕೆಲಸ ಮಾತ್ರ. ಆದರೆ ಈ ಎಲ್ಲ "ಇಲ್ಲ"ಗಳ ನಡುವೆಯೂ ಈ ತಾಯಿ ತನ್ನ ಮಗನಿಗಾಗಿ ತುಡಿಯುತ್ತಿರುವ ರೀತಿ ನೋಡಿದರೆ ಎಂಥವರ ಮನಸ್ಸೂ ಕರಗುತ್ತದೆ.
ತನ್ನ ಅಂಗವಿಕಲ ಮಗನಿಗಾಗಿ, ಆತನ ಓದುವ ಕನಸನ್ನು ಸಾಕಾರಗೊಳಿಸುವುದಕ್ಕಾಗಿ ಪ್ರತಿ ದಿನವೂ ಸುಮಾರು ಎಂಟು ಕಿಲೋ ಮೀಟರ್ ಆತನನ್ನು ಹೊತ್ತುಕೊಂಡೇ ಬರುವ ಈ ವಾತ್ಸಲ್ಯಮಯಿ ತಾಯಿಯ ಬಗ್ಗೆ ಹೇಳುವುದಾದರೂ ಏನು?
ಮಗನನ್ನು ಪ್ರತಿನಿತ್ಯ ಎಂಟು ಕಿ.ಮೀ ಹೊತ್ತುಯ್ಯುವ ತಾಯಿ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಡುದರಹಳ್ಳಿಯಲ್ಲಿ ವಾಸವಿರುವ ಜಯಲಕ್ಷ್ಮಿಗೆ ಮೂರು ಜನ ಮಕ್ಕಳು. ಮೊದಲನೇ ಮಗ ರಾಜೇಶ್ ಅಂಗವಿಕಲ, ಎಂಟನೇ ತರಗತಿ ವಿದ್ಯಾರ್ಥಿ. ಆತನಲ್ಲಿ ಓದಿನ ಬಗ್ಗೆ ಇನ್ನಿಲ್ಲದ ಆಸಕ್ತಿ. ಏಳನೇ ತರಗತಿವರೆಗೂ ತನ್ನ ಸ್ವ ಗ್ರಾಮ ಕಡುದರಹಳ್ಳಿಯಲ್ಲೇ ಓದಿದ್ದ ರಾಜೇಶ್ ಬಾಬು. ಅಲ್ಲಿ ಏಳನೇ ತರಗತಿವರೆಗೆ ಮಾತ್ರ ಅವಕಾಶವಿದ್ದು, ಎಂಟನೇ ತರಗತಿಗೆ ಬೇರೆಡೆ ಶಾಲೆಗೆ ಸೇರುವುದು ಅನಿವಾರ್ಯವಾಗಿತ್ತು. ಹಾಗಾಗೇ ಮಿರಾಸಾಬಿಹಳ್ಳಿಯ ರಾಣಿಕೆರೆ ಹೈಸ್ಕೂಲಿನಲ್ಲಿ ಎಂಟನೇ ತರಗತಿಗೆ ದಾಖಲಿಸಲಾಯಿತು. ಆದರೆ ಓಡಾಡಲು ರಾಜೇಶ್ ಗೆ ಸಾಧ್ಯವಿಲ್ಲ. ಹೀಗಾಗೇ ತಾಯಿ ಜಯಲಕ್ಷ್ಮಿ ಈ ಒಂದು ನಿರ್ಧಾರ ಕೈಗೊಂಡರು.
ಮೈಸೂರು ತಾಯಿ-ಮಗನ ಪ್ರೀತಿಗೆ ಫಿದಾ ಆಗಿ ಕಾರು ಕೊಡಲು ಮುಂದಾದ ಆನಂದ್ ಮಹೀಂದ್ರಾ
ವಿಧವೆ ತಾಯಿಯಲ್ಲಿ ತುಂಬಿದ ಛಲ
ಜಯಲಕ್ಷ್ಮಿ ಅವರಿಗೆ ಇಬ್ಬರು ಗಂಡು ಮಕ್ಕಳು, ಇನ್ನೊಂದು ಹೆಣ್ಣು ಮಗುವಿದೆ. ಈ ಕುಟುಂಬಕ್ಕೆ ಜಯಲಕ್ಷ್ಮಿಯೇ ಆಧಾರ. ಗಂಡ ಸತ್ತು ಮೂರು ವರ್ಷಗಳು ಸರಿದವು. ಆದರೆ ಎದೆಗುಂದದೆ ಕೂಲಿ ನಾಲಿ ಮಾಡಿಕೊಂಡು ತನ್ನ ಮೂರು ಮಕ್ಕಳಿಗೂ ಶಿಕ್ಷಣ ಕೊಡುತ್ತಿದ್ದಾರೆ. ಮೊದಲನೇ ಮಗ ರಾಜೇಶ್ ಗೆ ಅಂಗವಿಕಲತೆ. ಹೇಗಾದರೂ ತನ್ನ ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡಲೇಬೇಕೆಂದು ಪಣ ತೊಟ್ಟಿದ್ದಾರೆ ಇವರು. ಎಂಟನೇ ತರಗತಿಗೆ ನಡೆದುಕೊಂಡು ಹೋಗಿ ಬರಲು ತನ್ನ ಮಗನಿಗೆ ಸಾಧ್ಯವಿಲ್ಲದ ಕಾರಣ ಪ್ರತಿನಿತ್ಯ ಆತನನ್ನು ಶಾಲೆಗೆ ಕರೆದುಕೊಂಡು ಹೋಗುವುದು, ಕರೆದುಕೊಂಡು ಬರುವುದು ಮಾಡುತ್ತಾರೆ.
ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯೇ ಇಲ್ಲ
ತಂತ್ರಜ್ಞಾನ ಮುಂದುವರೆದಿರುವ ಈ ಯುಗದಲ್ಲೂ ಈ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯಿಲ್ಲ. ಆಟೋ, ಬಸ್ ಗಳು ವಿರಳವೇ. ಸರ್ಕಾರದಿಂದ ರಾಜೇಶ್ ಬಾಬುಗೆ ನೀಡಿದ್ದ ತ್ರಿಚಕ್ರ ಸೈಕಲ್ ಹಾಳಾಗಿ ಮೂಲೆ ಸೇರಿದೆ. ಆದರೆ ಈ ಒಂದು ನೆಪ ತನ್ನ ಮಗನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು ಎಂಬ ಒಂದೇ ಕಾರಣಕ್ಕೆ ಜಯಲಕ್ಷ್ಮಿ ರಾಜೇಶ್ ಬಾಬುನನ್ನು ನಿತ್ಯ ತನ್ನ ಹೆಗಲ ಮೇಲೆ ಹೊತ್ತುಕೊಂಡು ಓದಿಸುತ್ತಿದ್ದಾರೆ.
ನೊಬೆಲ್ ಗೆದ್ದ ಮಗನ ಮೇಲೆ ಕೋಪ, ಮಾತನಾಡೊಲ್ಲ ಎಂದ ಅಮ್ಮ!
ರಾಜೇಶ್ ಗೆ ಐಎಎಸ್ ಆಗುವ ಕನಸು
ಅಂಗವಿಕಲತೆಯನ್ನು ಮೀರಿ ತಾನು ಸಾಧಿಸಬೇಕು ಎಂದು ಈ ಪುಟ್ಟ ಹುಡುಗನಿಗೆ ಎಲ್ಲಿಲ್ಲದ ಹುಮ್ಮಸ್ಸು. ತಾನು ಐಎಎಸ್ ಓದಿ ದೊಡ್ಡ ಹುದ್ದೆ ಏರಬೇಕು ಎಂಬ ಕನಸು ರಾಜೇಶ್ ನದ್ದು. ಇದನ್ನು ಈಡೇರಿಸಲು ತಾಯಿ ತನ್ನ ಜೀವನವನ್ನೇ ಧಾರೆ ಎರೆಯುತ್ತಿದ್ದಾರೆ. ತನ್ನ ಮಗನ ಕನಸನ್ನು ನನಸು ಮಾಡುವತ್ತ ಅವನಿಗೆ ಹೆಗಲಾಗಿ ನಿಂತಿದ್ದಾರೆ. ನಿತ್ಯವೂ ತನ್ನ ತಾಯಿಯ ಹೆಗಲ ಮೇಲೆ ಶಾಲೆಗೆ ಬರುವ ರಾಜೇಶ್ ಗೆ ಸರ್ಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಶಿಕ್ಷಕರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ತಾಯಿಯನ್ನು, ತಾಯಿ ಹೆಗಲ ಮೇಲೆ ಕುಳಿತು ನನ್ನ ಶಿಕ್ಷಣದ ಕನಸನ್ನು ನನಸು ಮಾಡಿಕೊಳ್ಳಲು ಹೊರಟಿರುವ ಈ ಮಗನನ್ನು ನೋಡಿದರೆ ಎಂಥವರ ಮನಸ್ಸೂ ಮರುಗದೇ ಇರಲು ಸಾಧ್ಯವೇ?