ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸಾರಿಗೆ ಬಸ್ ಕಾಣದ ಚಿತ್ರದುರ್ಗದ ಹಳ್ಳಿಗಳು!
ಚಿತ್ರದುರ್ಗ, ಆಗಸ್ಟ್ 15: ಇಂದು ನಾವೆಲ್ಲರೂ 75ನೇ ಭಾರತೀಯ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ನಮಗೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಚಿತ್ರದುರ್ಗ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಕಂಡಿಲ್ಲದ ಗ್ರಾಮೀಣ ಪ್ರದೇಶಗಳೇ ಹೆಚ್ಚು. ಹಾಗಾದರೆ ಆ ಹಳ್ಳಿಗಳು ಎಲ್ಲಿ ಅಂತೀರಾ ಮುಂದೆ ಓದಿ...
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಜಿಲ್ಲೆಯಲ್ಲಿ 1063 ಗ್ರಾಮಗಳಿಗೆ. ಈ ಜಿಲ್ಲೆಯಲ್ಲಿ 2018ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗ ಇದೆ. ಚಿತ್ರದುರ್ಗ ಬಸ್ ಡಿಪೋದಲ್ಲಿ 120, ಹೊಸದುರ್ಗ ಡಿಪೋದಲ್ಲಿ 45, ಚಳ್ಳಕೆರೆ ಡಿಪೋದಲ್ಲಿ 40 ಕೆಎಸ್ಆರ್ಟಿಸಿ ಬಸ್ಗಳಿವೆ. ಉಳಿದಂತೆ ರಾಜಹಂಸ, ಐರಾವತ ಸೇರಿದಂತೆ ಸುಮಾರು 270 ಬಸ್ಗಳಿವೆ.
ಬಸ್ ಸೌಲಭ್ಯದಿಂದ ವಂಚಿತರಾಗಿರುವ ಗ್ರಾಮ
ಪಾವಗಡ ಬಸ್ ಘಟಕವೂ ಚಿತ್ರದುರ್ಗ ಜಿಲ್ಲೆಗೆ ಒಳಪಟ್ಟಿರುವುದರಿಂದ ಇಲ್ಲೂ ಕೂಡ ಸ್ವಲ್ಪ ಬಸ್ಗಳಿವೆ. ಇಷ್ಟೆಲ್ಲಾ ಇದ್ದರೂ ಬಸ್ ಸೌಲಭ್ಯದಿಂದ ವಂಚಿತರಾಗಿರುವ ಗ್ರಾಮಗಳ ಸಂಖ್ಯೆ ಜಿಲ್ಲೆಯಲ್ಲಿ ಜಾಸ್ತಿ ಇವೆ. ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳ ಮಧ್ಯೆ ಇರುವ ಚಿತ್ರದುರ್ಗ ಜಿಲ್ಲೆಯ ಬಹುತೇಕ ಬಸ್ಗಳು ಬೆಂಗಳೂರು, ತುಮಕೂರು, ದಾವಣಗೆರೆ, ಚಿಕ್ಕಮಗಳೂರು, ಬಳ್ಳಾರಿ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಹೆಚ್ಚಿನ ಬಸ್ ಸಂಪರ್ಕವಿದೆ.
ಇನ್ನು ಜಿಲ್ಲೆಯಿಂದ ಹಿರಿಯೂರು, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ ತಾಲೂಕುಗಳಿಗೂ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ನಗರದಿಂದ ಹಳ್ಳಿಗಳಿಗೆ ಸಂಪರ್ಕಿಸುವ ಬಸ್ ಮಾರ್ಗಗಳು ತೀರಾ ವಿರಳವಾಗಿವೆ. ಚಿತ್ರದುರ್ಗ ಜಿಲ್ಲೆಯಿಂದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳಿಗೆ ಮಾತ್ರ ಬಸ್ ಸೇವೆ ಸೀಮಿತವಾಗಿದಷ್ಟೇ.
ಆದಾಯ ಜಾಸ್ತಿ ಬರುವ ಮಾರ್ಗಗಳ ಆಯ್ಕೆ
ಕೆಎಸ್ಆರ್ಟಿಸಿ ಘಟಕ ಖರ್ಚು ಕಡಿಮೆ ನೋಡಿಕೊಂಡು, ಆದಾಯ ಜಾಸ್ತಿ ಬರುವ ಮಾರ್ಗಗಳನ್ನು ಆರಿಸಿಕೊಳ್ಳಲಾಗಿರುವುದನ್ನು ಗಮನಿಸಬಹುದು. ಆದಾಯದ ಮೂಲ ನೋಡಿಕೊಂಡು ಸಾರಿಗೆ ಸಂಪರ್ಕ ಕಲ್ಪಿಸಿದ್ದಾರೆ ಹೊರತು, ಹಳ್ಳಿಯ ಜನರ ಮೇಲಿನ ಕಾಳಜಿಯಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಗ್ರಾಮೀಣ ಪ್ರದೇಶದ ಜನರು ಸರಕು ಸಾಗಣೆಗೆ ಆಟೋ, ಕ್ರೂಸರ್, ಬೈಕ್ ಇತರೆ ವಾಹನಗಳ ಮೇಲೆ ಅವಲಂಬಿತವಾಗಿದ್ದಾರೆ.
ಸಾರಿಗೆ ಸಂಪರ್ಕದ ಕೊರತೆಯಿಂದಾಗಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ತೊಂದರೆಯಾಗುತ್ತಿದೆ. ದೂರದ ಊರುಗಳಿಂದ ನಗರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಹಿರಿಯೂರು ತಾಲ್ಲೂಕಿನ ಇಕ್ಕನೂರು, ಕೊಡಿಹಳ್ಳಿ, ಪರಮೇನಹಳ್ಳಿ, ಆದಿರಾಳು, ಹುಲಿತೊಟ್ಲು ಗ್ರಾಮಗಳಿವೆ ಕೆಎಸ್ಆರ್ಟಿಸಿ ಬಸ್ ಸಂಪರ್ಕವೇ ಇಲ್ಲ.
ಹಳೇ ಬಸ್ ಸಂಚಾರ
"ಹಳೇ ಇಂಜಿನ್ ಹೊಸ ಡ್ರೈವರ್' ಎಂಬ ಗಾದೆ ಮಾತಿನಂತೆ ಹಳ್ಳಿಗಳಿಗೆ ಸಂಚರಿಸುವ ಬಹುತೇಕ ಹಳೆಯ ಬಸ್ಗಳಾಗಿವೆ. ಹಳೆಯ ಬಸ್ಗಳು ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿವೆ ಎಂಬುದು ಪ್ರಯಾಣಿಕರ ಆರೋಪ. ಉದಾಹರಣೆಗೆ ಎಷ್ಟೋ ಹಳ್ಳಿಗಳಲ್ಲಿ ಸಂಚರಿಸುವ ಬಸ್ಗಳಿಗೆ ಡೋರ್ ಇರುವುದೇ ಇಲ್ಲ ಎಂಬ ಮಾತುಗಳು ಪ್ರಯಾಣಿಕರಿಂದ ಕೇಳಿಬಂದಿವೆ. ಜಿಲ್ಲೆಯಲ್ಲಿ ಮೂರು ಡಿಪೋಗಳಿವೆ. ಈ ಡಿಪೋ ವ್ಯಾಪ್ತಿಯಲ್ಲಿ ಬಹಳ ವರ್ಷಗಳಿಂದ ಬಸ್ಗಳ ಸಂಖ್ಯೆ ಹೆಚ್ಚಾಗಿಲ್ಲ. ಡಿಪೋಗೆ ಹೊಸ ಬಸ್ಗಳು ಕೂಡ ಸೇರ್ಪಡೆಗೊಂಡಿಲ್ಲ.
ಅದೆಷ್ಟೋ ಬಸ್ಗಳು ನಿಗದಿತ ಸ್ಥಳ ತಲುಪುವ ಮುಂಚೆಯೇ ಕೆಟ್ಟು ನಿಲ್ಲುತ್ತವೆ. ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಪುನಃ ಸಂಚರಿಸಲು ಪ್ರಯಾಣಿಕರು ತಳ್ಳಬೇಕು. ಇಂತಹ ಘಟನೆಗಳು ಸಾಕಷ್ಟು ಕಣ್ಮುಂದೆ ನಡೆದು ಹೋಗಿವೆ. ಇಂಜಿನ್ ಪ್ರಾಬ್ಲಂ, ಬ್ರೇಕ್ ಫೇಲ್ ಇಂತಹ ಸಮಸ್ಯೆಗಳು ಆಗಾಗ ಕೆಎಸ್ಆರ್ಟಿಸಿ ಬಸ್ನಲ್ಲಿ ಕಂಡುಬರುತ್ತವೆ.
ಹಿರಿಯೂರಿನಲ್ಲಿ ಡಿಪೋ
ಹಿರಿಯೂರು ತಾಲ್ಲೂಕಿನ ಪಟ್ರೆಹಳ್ಳಿ ಬಳಿ ಕೆಎಸ್ಆರ್ಟಿಸಿ ಬಸ್ ಘಟಕ ಸ್ಥಾಪಿಸಲು ಸರ್ಕಾರದಿಂದ ಮಂಜೂರಾಗಿದ್ದು, ಮುಂಬರುವ ಒಂದೆರಡು ತಿಂಗಳಲ್ಲಿ ಡಿಪೋ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮ ಶೀಘ್ರದಲ್ಲೇ ನಡೆಯಲಿದೆ. ಬಸ್ ಘಟಕ ನಿರ್ಮಾಣವಾಗುವುದರಿಂದ ಹಿರಿಯೂರು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಭಾಗಗಳಿಗೆ ಬಸ್ಗಳ ಕೊರತೆ ನಿವಾರಣೆಯಾಗುತ್ತದೆ ಎಂಬುದು ಜನರ ನಿರೀಕ್ಷೆಯಾಗಿದೆ.
Recommended Video