ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ : ಎಸ್.ತಿಪ್ಪೇಸ್ವಾಮಿ
ಚಿತ್ರದುರ್ಗ, ಏಪ್ರಿಲ್ 15 : ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎಸ್.ತಿಪ್ಪೇಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಬಿಜೆಪಿ ಟಿಕೆಟ್ ಅವರ ಕೈ ತಪ್ಪಿದೆ.
ಚಳ್ಳಕೆರೆ ತಾಲೂಕಿನ ನೇರಲಕುಂಟೆ ಗ್ರಾಮದಲ್ಲಿ ಎಸ್.ತಿಪ್ಪೇಸ್ವಾಮಿ ಅವರು ಶನಿವಾರ ಕಾರ್ಯಕರ್ತರ, ಅಭಿಮಾನಿಗಳ ಸಭೆ ನಡೆಸಿದರು. ಸಭೆಯಲ್ಲಿ 2018ರ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಅವರು ಘೋಷಣೆ ಮಾಡಿದರು.
'ಬಿ.ಶ್ರೀರಾಮುಲು ಅವರನ್ನು ಸೋಲಿಸುವುದು ಖಚಿತ'
'ಶ್ರೀರಾಮುಲು ಅವರನ್ನು ಸೋಲಿಸುವುದೇ ನನ್ನ ಗುರಿ. ಬೇರೆ ಯಾವುದೇ ಪಕ್ಷದಿಂದ ಟಿಕೆಟ್ ನೀಡಿದರೂ ಸ್ಪರ್ಧೆ ಮಾಡುವುದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ' ಎಂದು ಎಸ್.ತಿಪ್ಪೇಸ್ವಾಮಿ ಅವರು ಸ್ಪಷ್ಟಪಡಿಸಿದರು.
'ಶ್ರೀರಾಮುಲು ಅವರು ನೀಡಿದ ಭರವಸೆಗಳನ್ನು ಈಡೇರಿಸುವುದಿಲ್ಲ ಎಂಬುದು ಬಳ್ಳಾರಿಯ ಜನರಿಗೆ ಅರಿವಾಗಿದೆ. ಆದ್ದರಿಂದ ಅವರು ಶ್ರೀರಾಮುಲು ಅವರನ್ನು ತಿರಸ್ಕರಿಸಿದ್ದಾರೆ. ಅದಕ್ಕಾಗಿ ಅವರು ಮೊಳಕಾಲ್ಮೂರು ಕ್ಷೇತ್ರಕ್ಕೆ ಆಗಮಿಸಿದ್ದಾರೆ' ಎಂದು ವ್ಯಂಗ್ಯವಾಡಿದರು.
ಮೊಳಕಾಲ್ಮೂರು : ಶ್ರೀರಾಮುಲುಗೆ ಪೊರಕೆ, ಚಪ್ಪಲಿ ಸ್ವಾಗತ!
'ಶ್ರೀರಾಮುಲು ಸುಳ್ಳು ನಾಯಕ ಎಂಬುದು ಈಗ ಗೊತ್ತಾಗಿದೆ. ತಟ್ಟೆಗೆ ಬಡಿಸಿದ ಊಟವನ್ನು ಕಿತ್ತುಕೊಂಡರೆ ಅವರು ಉದ್ಧಾರವಾಗುವುದಿಲ್ಲ. ಬಳ್ಳಾರಿಯಲ್ಲಿ ಸೋಲಿನ ಭಯದಿಂದಾಗಿ ಅವರು ಮೊಳಕಾಲ್ಮೂರು ಕ್ಷೇತ್ರಕ್ಕೆ ಬಂದಿದ್ದಾರೆ' ಎಂದು ತಿಪ್ಪೇಸ್ವಾಮಿ ಅವರು ಶ್ರೀರಾಮುಲು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ 72 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಪಟ್ಟಿಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರಿಗೆ ಟಿಕೆಟ್ ನೀಡಲಾಗಿತ್ತು.
ಟಿಕೆಟ್ ಕೈ ತಪ್ಪಿದ್ದರಿಂದ ಕ್ಷೇತ್ರದ ಹಾಲಿ ಶಾಸಕ ಎಸ್.ತಿಪ್ಪೇಸ್ವಾಮಿ ಅಸಮಾಧಾನಗೊಂಡಿದ್ದಾರೆ. ಟಿಕೆಟ್ ಕೈ ತಪ್ಪಿದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.