ಕೋಟೆನಾಡು ಚಿತ್ರದುರ್ಗಕ್ಕೆ ಒಲಿದ ಮಂತ್ರಿಗಿರಿ; ಶ್ರೀರಾಮುಲು ಪ್ರಮಾಣ ವಚನ ಸ್ವೀಕಾರ
Recommended Video
ಚಿತ್ರದುರ್ಗ, ಆಗಸ್ಟ್ 20: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ಸಂಪುಟ ವಿಸ್ತರಣೆ ಮಾಡಿದ್ದು, 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚಿತ್ರದುರ್ಗದಿಂದ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲುಗೆ ಸಚಿವ ಸ್ಥಾನ ದೊರೆತಿದ್ದು, ಸಂಪುಟ ದರ್ಜೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯಾರು ಯಾರಿದ್ದಾರೆ? ಸಂಪೂರ್ಣ ಪಟ್ಟಿ
ಈ ನಿಟ್ಟಿನಲ್ಲಿ, ಶ್ರೀರಾಮುಲು ಅವರ ರಾಜಕೀಯ ಜೀವನದ ಮೇಲೊಂದು ಇಣುಕು ನೋಟ ಇಲ್ಲಿದೆ...
ಒಂದೇ ವರ್ಷದಲ್ಲಿ ರಾಜೀನಾಮೆ
1996ರಲ್ಲಿ ರಾಜಕೀಯ ಪ್ರವೇಶ ಮಾಡಿದ ಶ್ರೀರಾಮುಲು ಕಾಂಗ್ರೆಸ್ ನಿಂದ ಬಳ್ಳಾರಿ ನಗರಸಭೆ ಸದಸ್ಯರಾಗಿದ್ದರು. ಒಂದೇ ವರ್ಷದಲ್ಲಿ, ಅಂದರೆ 1997ರಲ್ಲಿ ಮಾಜಿ ಸಚಿವ ದಿವಾಕರ ಬಾಬು ಜೊತೆ ವೈಮನಸ್ಸಿನಿಂದ ಕಾಂಗ್ರೆಸ್ ಮತ್ತು ನಗರಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮತ್ತೆ 1997-98 ಜನಾರ್ದನ ರೆಡ್ಡಿ ಜೊತೆಗಿನ ಆತ್ಮೀಯ ಗೆಳೆತನ ಬಿಜೆಪಿ ಜೊತೆಗೆ ಶ್ರೀರಾಮುಲು ಗುರುತಿಸಿಕೊಳ್ಳಲು ಕಾರಣವಾಯಿತು.
1999ರಲ್ಲಿ ಸುಷ್ಮಾ ಸ್ವರಾಜ್ - ಸೋನಿಯಾ ಗಾಂಧಿ ಮಧ್ಯೆ ನಡೆದ ಲೋಕಸಭಾ ಚುನಾವಣೆ ವೇಳೆ ಶ್ರೀರಾಮುಲು ಬಳ್ಳಾರಿ ನಗರದಿಂದ ವಿಧಾನ ಸಭೆಗೆ ಸ್ಪರ್ಧಿಸಿ ಸೋಲನ್ನು ಅನುಭವಿಸಿದರು. ಆದರೂ ಪಟ್ಟು ಬಿಡದೆ ಪಕ್ಷ ಸಂಘಟನೆ ಮಾಡಿದ ಕಾರಣ 2004ರಲ್ಲಿ ಮೊದಲ ಬಾರಿ ಚುನಾವಣೆ ಗೆದ್ದು ವಿಧಾನ ಸಭೆ ಪ್ರವೇಶಿಸಿದರು.
ಪಕ್ಷೇತರ ಶಾಸಕ ಎಚ್.ನಾಗೇಶ್ಗೆ ಮತ್ತೆ ಮಂತ್ರಿಗಿರಿ ಭಾಗ್ಯ!
ಆರೋಗ್ಯ ಮಂತ್ರಿಯಾಗಿ ಸೇವೆ
2006ರಲ್ಲಿ ಜೆಡಿಎಸ್ - ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಪ್ರವಾಸೋದ್ಯಮ ಇಲಾಖೆ ಮಂತ್ರಿ ಪಟ್ಟ ಶ್ರೀರಾಮುಲುಗೆ ಒಲಿದುಬಂದಿತ್ತು. 2008ರಲ್ಲಿ ಕ್ಷೇತ್ರ ಮರು ವಿಂಗಡನೆ ಬಳಿಕ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಗೆಲುವು ಪಡೆದು ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಮಂತ್ರಿಯಾಗಿ ಸೇವೆ ಸಲ್ಲಿಸಿದರು.
2011ರಲ್ಲಿ ಜನಾರ್ದನ ರೆಡ್ಡಿ ಬಂಧನದ ಒಂದು ದಿನ ಮುಂಚೆ ಸ್ವಾಭಿಮಾನಕ್ಕೆ ಧಕ್ಕೆಯಾಯ್ತೆಂದು ಬಿಜೆಪಿ, ಶಾಸಕ ಮತ್ತು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇವೆಲ್ಲದರಿಂದ ದೂರವಾಗಿ 2011ರಲ್ಲಿ ಮತ್ತೊಮ್ಮೆ ಪಕ್ಷೇತರರಾಗಿ (ಬಿಎಸ್ ಆರ್ ಪಕ್ಷ) ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಗೆಲುವು ಪಡೆದರು.
ಯಡಿಯೂರಪ್ಪ ಸಂಪುಟದಲ್ಲಿ ಏಕೈಕ ಮಹಿಳೆ, ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ
ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದ ಶ್ರೀರಾಮುಲು
2012ರಲ್ಲಿ ಬೀದರ್ ನಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ಮಾಡುವ ಮೂಲಕ ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದರು. 2013ರ ಚುನಾವಣೆ ವೇಳೆ ಬಿಎಸ್ ಆರ್ ಪಕ್ಷದಿಂದ ಭಾರಿ ನಿರೀಕ್ಷೆಯೊಂದಿಗೆ ಸ್ಪರ್ಧಿಸಿದ ಶ್ರೀರಾಮುಲು ತಮ್ಮ ಜೊತೆ ರಾಜ್ಯದಲ್ಲಿ ನಾಲ್ವರನ್ನು ಗೆಲ್ಲಿಸಿಕೊಳ್ಳಲು ಮಾತ್ರ ಶಕ್ತರಾಗಿ ಮುಗ್ಗರಿಸಿದರು.
ನಂತರ ನಡೆದ ರಾಜಕೀಯ ಬೆಳವಣಿಗೆ ಮಧ್ಯೆ ಬಿಎಸ್ ಆರ್ ಪಕ್ಷ ವಿಸರ್ಜಿಸಿ ಬಿಜೆಪಿ ಸೇರ್ಪಡೆಯಾದರು. 2014ರಲ್ಲಿ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ಮೋದಿ ಕೈ ಬಲಪಡಿಸಿದರು. ಆದರೆ ಕೇಂದ್ರದಲ್ಲಿ ಮಂತ್ರಿಯಾಗುವ ಕನಸು ಕಂಡಿದ್ದ ಶ್ರೀ ರಾಮುಲುಗೆ ಯಾವುದೇ ಪದವಿ ಸಿಗಲಿಲ್ಲ. 2018ರ ಚುನಾವಣೆಯಲ್ಲಿ ತಮ್ಮ ಸ್ವಂತ ಕ್ಷೇತ್ರ ಮತ್ತು ಬಳ್ಳಾರಿ ಜಿಲ್ಲೆ ಎರಡನ್ನೂ ಬಿಟ್ಟು ಮೊಳಕಾಲ್ಮೂರು ಮತ್ತು ಬಾದಾಮಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದರು.
ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು
ಚಿತ್ರದುರ್ಗಕ್ಕೆ ಒಲಿಯಿತು ಮಂತ್ರಿಗಿರಿ
ಮೊಳಕಾಲ್ಮೂರಿನಲ್ಲಿ ಭಾರಿ ಅಂತರದಲ್ಲಿ ಗೆದ್ದು, ಬಾದಾಮಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುಕ ಹುಟ್ಟಿಸುವ ಮೂಲಕ ಕೇವಲ 1400 ಮತಗಳ ಅಂತರದಲ್ಲಿ ಸೋಲು ಅನುಭವಿಸಿದರು.
ಪಕ್ಷ ನಿಷ್ಠೆ ಮತ್ತು ಜಾತಿಯ ಪ್ರಭಾವ ಹಿನ್ನೆಲೆ ಶ್ರೀ ರಾಮುಲು ಅವರನ್ನು ಬಿಜೆಪಿ ಪಕ್ಷ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರಾದ ಹಿನ್ನೆಲೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಪ್ರಾತಿನಿಧ್ಯ ಕೋಟಾದಲ್ಲಿ ಇದೀಗ ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ಒಲಿದುಬಂದಿದೆ.