ವಿವಿ ಸಾಗರದಿಂದ ಹೆಚ್ಚುವರಿ ನೀರು; ಸಿಎಂಗೆ ಪತ್ರ ಬರೆದ ಹಿರಿಯೂರು ಶಾಸಕಿ
ಚಿತ್ರದುರ್ಗ, ಮೇ 01: ಜಿಲ್ಲೆಯ ವಾಣಿವಿಲಾಸ ಜಲಾಶಯದಿಂದ ವೇದಾವತಿ ನದಿಗೆ ಹೆಚ್ಚುವರಿ ನೀರು ಹರಿಸಿದ್ದಕ್ಕೆ ಆಕ್ಷೇಪಿಸಿ ಸಿಎಂಗೆ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಪತ್ರ ಬರೆದಿದ್ದು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಏಕಪಕ್ಷೀಯ ನಿರ್ಧಾರವೆಂದು ಆರೋಪಿಸಿದ್ದಾರೆ.
"ಜಿಲ್ಲೆಯಲ್ಲಿ ಐದು ಜನ ಬಿಜೆಪಿ ಶಾಸಕರಿದ್ದೇವೆ. ಒಬ್ಬ "ಕೈ" ಶಾಸಕರ ಒತ್ತಡಕ್ಕೆ ಮಣಿದಿದ್ದಾರೆ. ಕ್ಷೇತ್ರದಲ್ಲಿ ರೈತರ ಮತ್ತು ಜನರ ಹಿತ ಕಾಪಾಡುವಲ್ಲಿ ವಿಫಲವಾಗಿದ್ದೇವೆ" ಎಂದು ಸಿಎಂ ಬಿಎಸ್ ವೈಗೆ ದೂರಿದ್ದಾರೆ.
ಏಪ್ರಿಲ್ 28ರಂದು ಜಲಾಶಯದ ಮೇಲ್ಭಾಗದಲ್ಲಿ ರೈತ ಮುಖಂಡರೊಂದಿಗೆ ಪ್ರತಿಭಟನೆ ನಡೆಸಿ, ಪೂರ್ಣಿಮಾ ಅವರು ವಿವಿ ಸಾಗರದಿಂದ ವೇದಾವತಿ ನದಿಗೆ ಹರಿಯಬೇಕಿದ್ದ ನೀರನ್ನು ಬಂದ್ ಮಾಡಿದ್ದರು. ಪ್ರತಿಭಟನೆಯ ನಂತರದ ದಿನ ಮತ್ತೆ ನದಿಗೆ ನೀರು ಹರಿಸಲಾಯಿತು. ಇದನ್ನು ಖಂಡಿಸಿದ ಶಾಸಕರು, ವಾಣಿವಿಲಾಸ ಜಲಾಶಯದಿಂದ ವೇದಾವತಿ ನದಿ ಪಾತ್ರದ ಮುಖೇನ 0.25 ಟಿಎಂಸಿ ನೀರನ್ನು ಚಳ್ಳಕೆರೆಗೆ ಹರಿಸಿರುವುದಕ್ಕೆ ನನ್ನ ಮತ ಕ್ಷೇತ್ರದ ರೈತರ ಹಾಗೂ ನನ್ನ ಅಭ್ಯಂತರ ಇಲ್ಲ. ಆದರೆ ಯಾವುದೇ ಸರ್ಕಾರಿ ಆದೇಶವಿಲ್ಲದೇ ಹೆಚ್ಚುವರಿ ನೀರನ್ನು ಹರಿಸಿರುವುದರಿಂದ ರೈತರು, ನಾನು ಸೇರಿ ವಿವಿ ಸಾಗರ ಬಳಿ ಸೇರಿ ಧರಣಿ ನಡೆಸಿದೆವು ಎಂದು ತಿಳಿಸಿದ್ದಾರೆ.
"ನಾನು ರೈತರ ಸಮ್ಮುಖದಲ್ಲಿ ಸಂಬಂಧಪಟ್ಟ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಇಂಜಿನಿಯರ್, ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಸಚಿವರು, ಉಸ್ತುವಾರಿ ಸಚಿವರು, ಮುಖ್ಯ ಮಂತ್ರಿಗಳ ಕಚೇರಿ ಇಷ್ಟು ಕಡೆಗೂ ದೂರವಾಣಿ ಮೂಲಕ ವಿಚಾರಿಸಿದೆ. ಯಾವುದೇ ಸರ್ಕಾರಿ ಆದೇಶವಿಲ್ಲದೆ ನೀರನ್ನು ಹರಿಸುವುದನ್ನು ನಿಲ್ಲಿಸಬೇಕೆಂದು ತಿಳಿಸಿದರೂ ಪ್ರತಿಕ್ರಿಯಿಸಲಿಲ್ಲ.
ಹಿರಿಯೂರು ನದಿ ಪಾತ್ರದ ರೈತರ ಸಮಸ್ಯೆ, ಚಳ್ಳಕೆರೆ ನದಿ ಪಾತ್ರದ ಸಮಸ್ಯೆ, ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ಕುಡಿಯುವ ನೀರು ಸಮಸ್ಯೆ ಮತ್ತು ಭದ್ರಾ ಹಾಲಿ ಯೋಜನೆಯ ಮೈಕ್ರೋ ಇರಿಗೇಷನ್ ಬಗ್ಗೆ ತುರ್ತು ಸಭೆ ಕರೆದು ಈ ವಿಚಾರಗಳನ್ನು ಕೂಲಂಕಷವಾಗಿ ಪರಿಶೀಲಿಸದೇ ಏಕ ಪಕ್ಷೀಯವಾಗಿ ಚಳ್ಳಕೆರೆಗೆ ನೀರು ಹರಿಸಿರುವುದು ನನಗೆ ಆಘಾತ ಉಂಟಾಗಿದೆ" ಎಂದು ಬೇಸರ ವ್ಯಕ್ತಪಡಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.