ನಿಮ್ಮದು ಬರೀ ಚುನಾವಣಾ ಗಿಮಿಕ್: ಸುಧಾಕರ್ ಹೇಳಿಕೆಗೆ ಶಾಸಕಿ ತಿರುಗೇಟು
ಚಿತ್ರದುರ್ಗ, ನವೆಂಬರ್ 5: ಕ್ಷೇತ್ರದಿಂದ ಯಾವುದೇ ಹಣ ಸರ್ಕಾರಕ್ಕೆ ವಾಪಸ್ ಹೋಗಿಲ್ಲ ಎಂದು ಹಿರಿಯೂರು ಬಿಜೆಪಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ಮಾಜಿ ಸಚಿವ ಡಿ.ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಬುಧವಾರದಂದು ಹಿರಿಯೂರು ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಂತರ ಮಾತನಾಡಿದ ಮಾಜಿ ಸಚಿವ ಡಿ.ಸುಧಾಕರ್ "ನಮ್ಮ ಅಧಿಕಾರದ ಅವಧಿಯಲ್ಲಿ ಸರ್ಕಾರ ಬಿಡುಗಡೆ ಮಾಡಿದ್ದ ಹಣವನ್ನು ಈಗಿನ ಸರ್ಕಾರ ಹಣ ವಾಪಸ್ ಪಡೆದುಕೊಂಡಿದೆ' ಎಂಬ ಹೇಳಿಕೆಯನ್ನು ಖಂಡಿಸಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ನಾನು ತಂದ ಅನುದಾನದ ಹಣ ಎಲ್ಲಿ ಹೋಯ್ತು?; ಮಾಜಿ ಸಚಿವ ಡಿ. ಸುಧಾಕರ್
ಒಬ್ಬ ಮಾಜಿ ಸಚಿವರಾಗಿ ಸಾರ್ವಜನಿಕರಿಗೆ ತಪ್ಪು ಮಾಹಿತಿಯನ್ನು ನೀಡಬಾರದು ಎಂದ ಶಾಸಕಿ, ನಾನಾಗಲಿ ಅಥವಾ ಅವರಾಗಲಿ ಕೈಯಿಂದ ದುಡ್ಡು ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಿಲ್ಲ, ಬದಲಾಗಿ ಜನರ ತೆರಿಗೆ ಹಣದಿಂದ ನಾವು ಅಭಿವೃದ್ಧಿ ಮಾಡುವುದು ಎಂದು ಮಾಜಿ ಸಚಿವರ ಹೇಳಿಕೆಗೆ ಶಾಸಕಿ ಪೂರ್ಣಿಮಾ ಪ್ರತಿಕ್ರಿಯಿಸಿದರು.
2008 ರಿಂದ 2018 ರವರೆಗೆ ಹಿರಿಯೂರು ಕ್ಷೇತ್ರದ ಶಾಸಕರಾಗಿದ್ದು, 2008 ರಿಂದ ಹುಳಿಯಾರು ರಸ್ತೆ ಅಗಲೀಕರಣ ಮತ್ತು ದುರಸ್ತಿ ಬಗ್ಗೆ ಇವರ ಗಮನಕ್ಕೆ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದರು. ಅವರು ಬಹಳ ಚಾಣಾಕ್ಷತೆಯಿಂದ 2018ರ ಚುನಾವಣಾ ಗಿಮಿಕ್ ಗಾಗಿ, ಜನರ ಕಣ್ಣು ಹೊರೆಸುವುದಕ್ಕಾಗಿ ಹಣ ತಂದಿದ್ದರಾ.? ಅವರು ಹಣ ತರುವುದು ಮುಖ್ಯವಲ್ಲ, ಅದನ್ನು ಕಾರ್ಯರೂಪಕ್ಕೆ ತರುವುದು ಮುಖ್ಯವಾಗಿರುತ್ತದೆ ಎಂದರು.
ಹುಳಿಯಾರು ರಸ್ತೆ ಬಗ್ಗೆ ಅವರಿಗೆ ಕಾಳಜಿ ಇದ್ದಿದ್ದರೆ ಮೊದಲೇ ರಸ್ತೆ ಅಗಲೀಕರಣ ಮಾಡುತ್ತಿದ್ದರು. ಯಾವುದೇ ಹಣ ವಾಪಸ್ ಹೋಗಿಲ್ಲ, ಜನರ ತೆರಿಗೆ ಹಣವನ್ನು ಪೋಲು ಮಾಡಬಾರದು ಎಂಬುದು ನಮಗೆ ಗೊತ್ತಿದೆ. ಈಗಾಗಲೇ 4 ಕೋಟಿ ರೂ. ಕಾಮಗಾರಿ ಕೆಲಸ ಮುಗಿದಿದೆ.
ಒಂದು ರಸ್ತೆ ಅಗಲೀಕರಣ ಮಾಡಬೇಕಾದರೆ ಡಿಪಿಆರ್ ನಲ್ಲಿ ಬರುವ ವಿದ್ಯುತ್ ಕಂಬ, ಕುಡಿಯುವ ನೀರಿನ ಪೈಪ್ ಗಳು, ರಸ್ತೆ ಪಕ್ಕದ ಮರಗಳು ಇವೆಲ್ಲವುಗಳ ಇಲಾಖೆಗೆ ಇಂತಿಷ್ಟು ಹಣ ಎಂದು ಡಿಪಿಆರ್ ನಲ್ಲಿ ನಮೂದು ಮಾಡಬೇಕಿತ್ತು. ಆದರೆ ಇದು ಯಾವುದು ಆಗಿಲ್ಲ. ಆದರೆ ಜನರ ಕಣ್ಣು ಹೊರೆಸೋಕ್ಕೆ ಹಣ ತಂದಿದ್ದರು. ಇದನ್ನು ಬದಲಾಯಿಸಿ ಈಗ ಟೆಂಡರ್ ಕರೆದಿದ್ದು ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಹಿರಿಯೂರು ನಗರದ ಅಭಿವೃದ್ಧಿ ಬಗ್ಗೆ ನಮಗೂ ಕಳಕಳಿ ಇರುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ನಮ್ಮ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ, ಅವರು ಶಾಸಕರಾಗಿದ್ದಾಗ ಸಂದರ್ಭದಲ್ಲಿ ಇತ್ತು ಅದಕ್ಕೆ ನೆನಪಿಸಿಕೊಂಡಿದ್ದಾರೆ, ಈಗ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಇದನ್ನು ನಾನು ಹೇಳುತ್ತಿಲ್ಲ, ನಾನು ಹಳ್ಳಿಗಳಿಗೆ ಹೋದಾಗ ಸಾರ್ವಜನಿಕರೇ ಹೇಳುತ್ತಿರುತ್ತಾರೆ ಎಂದು ತಿಳಿಸಿದರು.
ಅವರ ಹತ್ತು ವರ್ಷಗಳ ಕಾಲದಲ್ಲಿ ಬಾಕಿ ಉಳಿಸಿಕೊಂಡಿದ್ದ 650ಕ್ಕೂ ಹೆಚ್ಚು ಹಕ್ಕಪತ್ರಗಳನ್ನು ನಾವು ಕೊಟ್ಟಿದ್ದೇವೆ. ಉತ್ತಮ ಆಡಳಿತ ಕೊಟ್ಟಿದ್ದೇವೆ ಎಂದು ತನ್ನನ್ನು ತಾನು ಹೊಗಳಿಕೊಳ್ಳುವುದಲ್ಲ, ಉತ್ತಮ ಆಡಳಿತ ಕೊಟ್ಟಿದ್ದರೆ ತಮ್ಮ ಮೇಲೆ ಸಿಬಿಐ ಕೇಸ್ ಯಾಕೆ ದಾಖಲಾಗುತ್ತಿತ್ತು ಎಂದು ಮಾಜಿ ಶಾಸಕ ಡಿ.ಸುಧಾಕರ್ ಅವರಿಗೆ ಪ್ರಶ್ನಿಸಿದರು.