ಮೊಳಕಾಲ್ಮೂರಿನ ಶಾಲೆಗೆ ಭೇಟಿಯಿತ್ತು ಭರವಸೆ ನೀಡಿದ ಶ್ರೀರಾಮುಲು
ಚಿತ್ರದುರ್ಗ, ಜನವರಿ 7: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಯರ್ರೇನಹಳ್ಳಿ ಸರ್ಕಾರಿ ಶಾಲೆಗೆ ಇಂದು ಆರೋಗ್ಯ ಸಚಿವ ಶ್ರೀರಾಮುಲು ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದರು. ಮೂರು ದಿನಗಳ ಹಿಂದೆ ಯರ್ರೇನಹಳ್ಳಿ ಶಾಲೆಯ ಸ್ಥಿತಿಗತಿ ಬಗ್ಗೆ "ಒನ್ ಇಂಡಿಯಾ" ವರದಿ ಮಾಡಿದ್ದು, ನಿನ್ನೆ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಪ್ಪ ಭೇಟಿ ನೀಡಿದ್ದರು.
ಈ ಬೆನ್ನಲ್ಲೇ ಯರ್ರೇನಹಳ್ಳಿ ಸಮೀಪವೇ ನಿರ್ಮಾಣವಾಗಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಉದ್ಘಾಟಿಸಿದ ನಂತರ ಆರೋಗ್ಯ ಸಚಿವ ಹಾಗೂ ಚಿತ್ರದುರ್ಗ ಜಿಲ್ಲೆ ಉಸ್ತುವಾರಿ ಸಚಿವರೂ ಆದ ಶ್ರೀರಾಮುಲು ಈ ಶಾಲೆಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಶಾಲಾ ಆಡಳಿತ ಮಂಡಳಿ ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷರಿಂದ ಮನವಿ ಸ್ವೀಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ಹಲವು ವಿಷಯಗಳನ್ನೂ ಅವರು ಹಂಚಿಕೊಂಡಿದ್ದಾರೆ.
ಪಿಯುಸಿವರೆಗೂ ವಸತಿ ಶಾಲೆ ವಿಸ್ತರಣೆಯ ಭರವಸೆ
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಶ್ರೀರಾಮುಲು ಅವರು ಮಾತನಾಡಿ, "ರಾಜ್ಯದಲ್ಲಿ 824 ವಸತಿ ಶಾಲೆಗಳಿವೆ. ಇವುಗಳಲ್ಲಿ 1.60 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿವರೆಗೆ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲೇ ಪಿಯುಸಿ ವರೆಗೂ ವಸತಿ ಶಾಲೆ ಮಾಡಲು ಬೇಡಿಕೆ ಇದೆ. ಅದನ್ನು ನಾನು ಪೂರೈಸುವ ಕೆಲಸ ಮಾಡುತ್ತೇನೆ'' ಎಂದು ಭರವಸೆ ನೀಡಿದರು.
ಒನ್ ಇಂಡಿಯಾ ವರದಿಗೆ ಸ್ಪಂದಿಸಿದ ಶಿಕ್ಷಣ ಸಚಿವರು, ಶಾಲೆಗೆ ಅಧಿಕಾರಿಗಳ ಭೇಟಿ
ಇದರ ಜೊತೆಗೆ ವಾಲ್ಮೀಕಿ ವಸತಿ ಶಾಲೆಗಳನ್ನೂ ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಯರ್ರೇನಹಳ್ಳಿಯ ಈ ವಸತಿ ಶಾಲೆಗಳಲ್ಲಿ ಮಕ್ಕಳ ಆರೋಗ್ಯ ಪರಿಶೀಲನೆ ಮಾಡಲು ಒಬ್ಬ ವೈದ್ಯರು ಹಾಗೂ ನರ್ಸ್ ಅನ್ನು ನಿಯೋಜನೆ ಮಾಡಲಾಗುವುದು ಎಂದರು.
ವಾಲ್ಮೀಕಿ ಜಾತ್ರೆಗೆ ಆಹ್ವಾನಿಸಲು ಸಿಎಂ ಭೇಟಿ
ನೆರೆ ಪರಿಹಾರ ನೀಡಿಲ್ಲ ಎಂದು ಕಾಂಗ್ರೆಸ್ ಪಕ್ಷದವರು ಈವರೆಗೆ ಬೊಬ್ಬೆ ಹಾಕುತ್ತಿದ್ದರು. ನೆರೆ ಹಾವಳಿ ಪರಿಹಾರವಾಗಿ ನಿನ್ನೆ ಪ್ರಧಾನಿ ಮೋದಿ ಅವರು ಹೆಚ್ಚಿನ ಅನುದಾನ ನೀಡಿದ್ದಾರೆ. ಅನುದಾನ ನೀಡಿದ್ದಕ್ಕಾಗಿ ನರೇಂದ್ರ ಮೋದಿ ಅವರಿಗೆ ನಾನು ಅಭಿನಂದನೆ ಸಲ್ಲಿಸುವೆ ಎಂದು ಯರ್ರೇನಹಳ್ಳಿ ಗ್ರಾಮದಲ್ಲಿ ಶ್ರೀರಾಮುಲು ಹೇಳಿದರು.
ವಾಲ್ಮೀಕಿ ಜಾತ್ರೆಗೆ ಆಹ್ವಾನಿಸಲು ನಿನ್ನೆ ಸಿಎಂ ಭೇಟಿ ಆಗಿದ್ದೆವು. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ ಬಗ್ಗೆ ಮನವಿ ಮಾಡಿದ್ದೇವೆ. ಡಿಸಿಎಂ ಸ್ಥಾನದ ಬಗ್ಗೆ ನಿನ್ನೆ ಭೇಟಿ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚಿಸಿಲ್ಲ ಎಂದು ತಿಳಿಸಿದರು.
ಸಂಕ್ರಾಂತಿ ಬಳಿಕ ಸಚಿವ ಸಂಪುಟ ವಿಸ್ತರಣೆ
"ಜನರ ಬೇಡಿಕೆಯಂತೆ ಬಿಜೆಪಿ ಪಕ್ಷ ನನ್ನನ್ನು ಗುರುತಿಸಲಿದೆ, ಮುಂದೆ ಸೂಕ್ತ ಸ್ಥಾನಮಾನ ನೀಡುವ ಭರವಸೆ ಇದೆ" ಎಂದರು. ಸಂಕ್ರಾಂತಿ ಬಳಿಕವೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂಬ ಮಾಹಿತಿ ನೀಡಿದರು.
ಮರದ ನೆರಳೇ ಈ ಮಕ್ಕಳಿಗೆ ಕ್ಲಾಸ್ ರೂಂ; ಯರ್ರೇನಹಳ್ಳಿ ಸರ್ಕಾರಿ ಶಾಲೆ ಕಥೆಯಿದು
"ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿಪಕ್ಷದವರು ಮೊದಲು ಓದಿಕೊಳ್ಳಲಿ, ಕಾಂಗ್ರೆಸ್ ನಾಯಕರಿಗೆ ಬೇರೆ ಯಾವುದೇ ಕೆಲಸ ಇಲ್ಲದೆ ಈಗ ಚುಚ್ಚುವ ಕೆಲಸ ಮಾಡುತ್ತಿದ್ದಾರೆ" ಎಂದರು. ಸೋಮಶೇಖರ್ ರೆಡ್ಡಿ ಅವರ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯೆಗೆ ನೀಡಲು ನಿರಾಕರಿಸಿದರು.
ಪಾಕ್, ಬಾಂಗ್ಲಾ ಅಕ್ರಮ ವಲಸಿಗರ ತಡೆಯಲು ಸಿಎಎ ಜಾರಿ
ಎಲ್ಲ ಕಡೆ ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದರಿಂದ ಹಲವು ಕಡೆ ಗಲಭೆಗಳು ಆಗುತ್ತಿವೆ. ಪೌರತ್ವ ಕಾಯ್ದೆಯ ಬಗ್ಗೆ ಎಲ್ಲ ನಾಗರಿಕರು ಮೊದಲು ಓದಿಕೊಳ್ಳಬೇಕು. ಮಕ್ಕಳು ಕೂಡ ಪೌರತ್ವ ಕಾಯ್ದೆ ಬಗ್ಗೆ ತಿಳಿದುಕೊಳ್ಳಬೇಕು. ಇದು ಈ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದು ಹೇಳಿದರು.
1977 ರಂದು ಜಾರಿಗೆ ತಂದ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಹಿಂದೆ ಆದ ಅನ್ಯಾಯ ಸರಿಪಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಇತ್ತೀಚಿಗೆ ಪಾಕ್, ಬಾಂಗ್ಲಾದೇಶ ಮತ್ತಿತರ ಕಡೆಯಿಂದ ಭಯೋತ್ಪಾದಕರು ಅಕ್ರಮವಾಗಿ ಬಂದು ನೆಲೆಸುತ್ತಿದ್ದಾರೆ.
ಏನಾದ್ರೂ ಅನಾಹುತಗಳಾದ್ರೆ ಯಾರು ಹೊಣೆ? ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಈ ಕಾಯ್ದೆ ಜಾರಿಗೆ ತರಲಾಗಿದೆ. ಹೀಗಾಗಿ ಎಲ್ಲರೂ ಈ ಕಾಯ್ದೆಯ ಒಳಿತಿನ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದರು.