ದ್ವೇಷದ ರಾಜಕಾರಣ ಹೇಳಿಕೆ: ಮಾಜಿ ಸಿಎಂ ಎಚ್ಡಿಕೆಗೆ ತಿರುಗೇಟು ಕೊಟ್ಟ ಶ್ರೀರಾಮುಲು
ಚಿತ್ರದುರ್ಗ, ಫೆಬ್ರವರಿ 17: ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಜೆಡಿಎಸ್ ಪಕ್ಷದ ನಾಯಕರಾದ ಎಚ್.ಡಿ.ದೇವೇಗೌಡ, ರೇವಣ್ಣ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿರುಗೇಟು ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು, ಸೇಡಿನ ರಾಜಕಾರಣ ಮಾಡುವ ಮಂದಿ ನಾವಲ್ಲ, ಮೈತ್ರಿ ಸರ್ಕಾರವಿದ್ದಾಗ ಅವರು ಯಾವ ರೀತಿ ನಡೆದುಕೊಂಡಿದ್ದಾರೆಂಬುದು ಜಗಜ್ಜಾಹೀರಾಗಿದೆ ಎಂದು ಹೇಳಿದರು.
ರೌಡಿ ಶೀಟರ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದ ಚಿತ್ರದುರ್ಗ ಮಹಿಳಾ ಎಸ್ಪಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ಬಳಿಕ ದ್ವೇಷ ರಾಜಕಾರಣ ಮಾಡಿದ್ದರೆ, ಕುಮಾರಸ್ವಾಮಿ ಅವರು ಮನೆಯಲ್ಲಿ ಕೂರ್ತಿರಲಿಲ್ಲ, ಎಲ್ಲೋ ಒಂದು ಕಡೆ ಇರಬೇಕಿತ್ತು ಅಂತ ಮಾರ್ಮಿಕವಾಗಿ ಶ್ರೀರಾಮುಲು ಹೇಳಿದರು. ಆದರೆ ಅದು ನಮ್ಮ ಸಂಸ್ಕೃತಿ ಅಲ್ಲ. ನಮಗೆ ಭಗವಂತ ಅವಕಾಶ ಮಾಡಿಕೊಟ್ಟಿದ್ದಾನೆ. ದ್ವೇಷ ರಹಿತ ರಾಜಕಾರಣ ಮಾಡುತ್ತೇವೆ ಎಂದರು.
ಬಿಜೆಪಿಗೆ ಅಧಿಕಾರ ಸಿಕ್ಕಿದೆ ಆದರೆ ನಾವು ಅದನ್ನು ದ್ವೇಷ ರಾಜಕಾರಣ ಮಾಡಲು ಬಳಸಿಕೊಳ್ಳಲ್ಲ, ಬದಲಾಗಿ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಯತ್ತ ಕಾಳಜಿ ವಹಿಸುತ್ತಿದ್ದೇವೆ, ಜನರ ವಿಶ್ವಾಸ ಗಳಿಸುತ್ತಿದ್ದೇವೆ ಎಂದು ತಿಳಿಸಿದರು.
ಚಿತ್ರದುರ್ಗದಲ್ಲಿ ಬ್ರಿಟಿಷರ ಕಾಲದ ಈ ಶಾಲೆಗೆ ಮರುಜೀವ ಬಂತು
ಸದ್ಯ ನಿರುದ್ಯೋಗಿಗಳಾಗಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ನಮಗೆ ಪಾಠ ಮಾಡುವ ಅಗತ್ಯವಿಲ್ಲವೆಂದರು. ಇನ್ನು ವಿಧಾನ ಸಭೆಯೊಳಗೆ ಮಾಧ್ಯಮಗಳಿಗೆ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಅದು ಸ್ಪೀಕರ್ ರವರ ತೀರ್ಮಾನ. ಅವರ ತೀರ್ಮಾನವನ್ನು ಪ್ರಶ್ನಿಸುವ ಅಧಿಕಾರ ನಮಗಿಲ್ಲ, ಸಿಎಂ ಈ ಬಗ್ಗೆ ಸ್ಪೀಕರ್ ಜೊತೆ ಚರ್ಚಿಸಿ ಈ ಸಮಸ್ಯೆ ಇತ್ಯರ್ಥ ಪಡಿಸಲಿದ್ದಾರೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕ ರಾಜಕಾರಣಿ, ಅವರು ಯಾಕೆ ಜಿದ್ದಾಜಿದ್ದಿನ ರಾಜಕಾರಣ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದರು. ಸಿಎಂ ಮನೆ ಬಳಿ ಅವರು ಯಾಕೆ ಪ್ರತಿಭಟನೆಗೆ ಹೋಗಿದ್ದರು ಎಂದು ಪ್ರಶ್ನಿಸಿದರು.