"ಅಶೋಕ್ ಪುತ್ರ ಕಾರಿನಲ್ಲಿದ್ದಿದ್ದಕ್ಕೆ ಸಿದ್ದರಾಮಯ್ಯ ಸಾಕ್ಷಿ ನೀಡಲಿ'
ಸಚಿವ ಆರ್.ಅಶೋಕ್ ಪುತ್ರ ಅಪಘಾತವಾದ ಕಾರಿನಲ್ಲಿದ್ದರು ಎಂಬುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಸಾಕ್ಷಿ ಇದ್ದರೆ ನೀಡಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸವಾಲ್ ಹಾಕಿದ್ದಾರೆ.
ಚಿತ್ರದುರ್ಗ, ಫೆಬ್ರವರಿ 16: ಸಚಿವ ಆರ್.ಅಶೋಕ್ ಪುತ್ರ ಅಪಘಾತವಾದ ಕಾರಿನಲ್ಲಿದ್ದರು ಎಂಬುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಸಾಕ್ಷಿ ಇದ್ದರೆ ನೀಡಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸವಾಲ್ ಹಾಕಿದ್ದಾರೆ.
ಶಾಸಕ ಎನ್.ಎ.ಹ್ಯಾರೀಸ್ ಪುತ್ರ ಹಾಗೂ ಸಚಿವ ಆರ್.ಅಶೋಕ್ ಪುತ್ರರ ಪ್ರತ್ಯೇಕ ಆಕ್ಸಿಡೆಂಟ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಚಿವ ಸಿ.ಟಿ.ರವಿ, ಹ್ಯಾರಿಸ್ ಪುತ್ರ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಾನೆ. ಅಶೋಕ್ ಪುತ್ರನ ಬಗ್ಗೆ ಸಂಶಯದ ಮಾತು ಹೇಳುತ್ತಿದ್ದಾರೆ ಎಂದರು.
ಅಶೋಕ್ ಪುತ್ರ ಕಾರಲ್ಲಿ ಇದ್ದಿದ್ದಕ್ಕೆ ಎಲ್ಲೂ ಕೂಡಾ ಸಾಕ್ಷಿ ಲಭ್ಯವಾಗಿಲ್ಲ, ಸಾಕ್ಷಿ ಇದ್ದರೆ ಪೊಲೀಸರ ಮುಂದೆ, ನ್ಯಾಯಾಲಯದ ಮುಂದೆ ಒಪ್ಪಿಸಲಿ ಎಂದು ಹೇಳಿದರು.
ನನ್ನ ಮೇಲೆಯೂ ಕುಡಿದು ಕಾರ್ ಓಡಿಸುತ್ತಿದ್ದ ಎಂದರು. ಕಾಫಿ, ಟೀ ಕುಡಿಯದೇ ಇರುವವನಿಗೆ ಡ್ರಿಂಕ್ ಅಂಡ್ ಡ್ರೈವ್ ಮಾಡಿ ಕಾರ್ ಓಡಿಸುತ್ತಿದ್ದ ಎಂದರು. ನಾನು ಇದ್ದೆ ಎಂಬ ಕಾರಣಕ್ಕೆ ಆರೋಪ ಮಾಡಿದ್ದರು, ನಾನು ಅನುಭವಿಸಿದ್ದೇನೆ. ತನಿಖೆಯಲ್ಲಿ ಆರ್.ಅಶೋಕ್ ಮಗ ಇದ್ದಿದ್ದು ಸಾಬೀತಾದರೆ, ಕಾನೂನಿಗೆ ವಿರುದ್ಧವಾಗಿ ನಮ್ಮ ಸರ್ಕಾರ ರಕ್ಷಣೆ ಮಾಡಲ್ಲ ಎಂದರು.
"ಬಾಂಗ್ಲಾ, ಪಾಕಿಸ್ತಾನದಿಂದ ಬಂದವರು ಹೆದರಬೇಕು, ಇಲ್ಲಿರುವವರು ಯಾಕೆ?'
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಾರಿ ಮಾಡಿದ್ದ ಕೆಲಸಗಳಿಗೆ ತಡೆ ಎಂಬ ಎಚ್.ಡಿ.ದೇವೇಗೌಡರ ಹೇಳಿಕೆ ವಿಚಾರವಾಗಿ, ದೇವೇಗೌಡರು ದೊಡ್ಡವರು ಅವರ ಬಗ್ಗೆ ಮಾತನಾಡಲ್ಲ. ಅನುದಾನ ಹಂಚಿಕೆಯಲ್ಲಿ ಒಂದು ಕಡೆ ಸಿಕ್ಕಾಪಟ್ಟೆ ಕೊಟ್ಟರು ಇದರಿಂದ ನಮ್ಮ ಸರ್ಕಾರ ಮರು ಹಂಚಿಕೆ ಮಾಡಿ ಎಲ್ಲಾ ಕಡೆ ನೀಡಿದೆ. ರಾಜ್ಯದ ಮೂರು ಜಿಲ್ಲೆಗಳು ಒಂದು ರಾಜ್ಯ ಆಗಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ಇತ್ತೀಚಿಗೆ ಜನರನ್ನು ದಾರಿ ತಪ್ಪಿಸುವ ಮಾತನಾಡುತ್ತಿದ್ದಾರೆ. ಸಿಎಂ ಆದವರು ಯಾಕೆ ಹೀಗೆ ಮಾತನಾಡುತ್ತಾರೋ ಗೊತ್ತಿಲ್ಲ. CAA ಪೌರತ್ವ ಕೊಡುವ ಕಾಯ್ದೆ, ಕಿತ್ತುಕೊಳ್ಳುವ ಕಾಯ್ದೆಯಲ್ಲ. ಚಳುವಳಿ ಮೇಲೆ ಕೇಸ್ ಹಾಕಿಲ್ಲ, ಚಳುವಳಿಯಲ್ಲಿ ದೇಶ ತುಂಡು ಮಾಡುವ ಮಾತನಾಡಿದವರ ಮೇಲೆ ಕೇಸ್ ಹಾಕಿದ್ದೇವೆ ಎಂದು ಹೇಳಿದರು.
ಫ್ರೀ ಕಾಶ್ಮೀರ್ ಅಂತ ಮಾತನಾಡುವವರ ಬಗ್ಗೆ ಏನು ಹೇಳಬೇಕು, ಹುಬ್ಬಳ್ಳಿಯಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದ ಜನ ಇದ್ದಾರೆ.
ಕಾಂಗ್ರೆಸ್ ಅಂಥವರ ಸಮರ್ಥನೆಗೆ ಇಳಿಯಬಾರದು, ಚಳವಳಿ ಮಾಡಲು ನಮ್ಮ ಅಭ್ಯಂತರ ಇಲ್ಲ, ಕಾನೂನು ಕೈಗೆ ಎತ್ತಿಕೊಂಡವರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ ಐದು ವರ್ಷ ಅಧಿಕಾರದಲ್ಲಿ ಎಷ್ಟು ಸುಳ್ಳು ಪ್ರಕರಣ ದಾಖಲಿಸಿದ್ದೀರಿ ಎಂಬುದು ಗೊತ್ತಿದೆ, ನನ್ನ ಮೇಲೆ ಸುಳ್ಳು ಕೇಸ್ ಬುಕ್ ಮಾಡಿದ್ದರು ಎಂದು ಆರೋಪಿಸಿದರು.