ಆಧುನಿಕ ಜೀವನದಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯತೆ ಹೆಚ್ಚಿದೆ: ಬಿ. ಸಿ. ಪಾಟೀಲ್
ಚಿತ್ರದುರ್ಗ, ಸೆಪ್ಟೆಂಬರ್ 12; "ಬಡವರ ಆಹಾರ ಇಂದಿನ ದಿನಗಳಲ್ಲಿ ಶ್ರೀಮಂತರ ಆಹಾರವಾಗಿದೆ. ಸಿರಿಧಾನ್ಯಗಳ ಸೇವನೆಯಿಂದ ಉತ್ತಮ ಆರೋಗ್ಯ ವೃದ್ಧಿಸುತ್ತದೆ. ಆಧುನಿಕ ಜೀವನದಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯತೆ ಹೆಚ್ಚಿದ್ದು, ಇವು ವಿವಿಧ ಪೋಷಕಾಂಶಗಳ ಅಗರವಾಗಿರುತ್ತವೆ" ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಬಬ್ಬೂರು ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಶನಿವಾರ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಿರಿಧಾನ್ಯಗಳ ಉತ್ಕಷ್ಠತಾ ಕೇಂದ್ರ ಕಟ್ಟಡ ಉದ್ಘಾಟನೆ ನೆರವೇರಿಸಿ ಸಚಿವರು ಮಾತನಾಡಿದರು.
ಸಿರಿಧಾನ್ಯ ಮೇಳದಲ್ಲಿ ಅದಮ್ಯ ಚೇತನದಿಂದ ಶೂನ್ಯ ತ್ಯಾಜ್ಯ ಭೋಜನ ವ್ಯವಸ್ಥೆ
"ಸಿರಿಧಾನ್ಯಗಳನ್ನು ಚಿತ್ರದುರ್ಗ ಜಿಲ್ಲೆಯ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಪ್ರಮುಖವಾಗಿ ಹೊಸದುರ್ಗ ತಾಲ್ಲೂಕಿನಲ್ಲಿ ಹೆಚ್ಚಿನ ವಿಸ್ತೀರ್ಣ ಬರುತ್ತಿದ್ದು, ಸಾವೆ, ನವಣೆ, ರಾಗಿ, ಊದಲು, ಹಾರಕ, ಕೊರಲೆ ಬೆಳೆಗಳನ್ನು ಬೆಳೆಯಲಾಗುತ್ತಿದೆ" ಎಂದು ಹೇಳಿದರು.
ಸರ್ಕಾರಿ ಶಾಲೆ, ಇಂದಿರಾ ಕ್ಯಾಂಟೀನ್ನಲ್ಲಿ ಸಿರಿಧಾನ್ಯ ನೀಡಲು ಚಿಂತನೆ: ಪರಮೇಶ್ವರ
"ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ರೂಢಿಸಿಕೊಂಡು, ಆರೋಗ್ಯ ಸುಧಾರಣೆ ಕ್ರಮಕೈಗೊಳ್ಳಲು ಹಾಗೂ ಬೇಡಿಕೆಯನ್ನು ಹೆಚ್ಚಿಸಿದಲ್ಲಿ ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯಲು ಪ್ರೊತ್ಸಾಹ ನೀಡಲು ಸಹಕಾರಿಯಾಗಲಿದೆ. ಸಿರಿಧಾನ್ಯ ಬೆಳೆಯುವ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ 2018-19ನೇ ಸಾಲಿನಲ್ಲಿ ರಾಷ್ಟ್ರೀಯ ವಿಕಾಸ ಯೋಜನೆಯಡಿ ಸಿರಿಧಾನ್ಯಗಳ ಉತ್ಕಷ್ಟತಾ ಕೇಂದ್ರದ ಅಗತ್ಯತೆಯ ಪ್ರಸ್ತಾವನೆಯನ್ನು ಕೃಷಿ ಇಲಾಖೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಯಿತು" ಎಂದರು.
ಬೆಂಗಳೂರು ಶಾಲಾ ಮಕ್ಕಳ ಬಿಸಿಯೂಟದಲ್ಲಿ ಸಿರಿಧಾನ್ಯ!
ಸಿರಿಧಾನ್ಯಗಳ ಪ್ರಾಮುಖ್ಯತೆ
"ಸಿರಿಧಾನ್ಯಗಳ ಉತ್ಕಷ್ಟತಾ ಕೇಂದ್ರದ ಮೂಲ ಉದ್ದೇಶ ತರಬೇತಿ ನೀಡಿ ರೈತರಲ್ಲಿ ಸಿರಿಧಾನ್ಯಗಳ ಪ್ರಾಮುಖ್ಯತೆ, ವಿಶಿಷ್ಟ ಗುಣಗಳ ಬಗ್ಗೆ ಅರಿವು ಮೂಡಿಸಿ ಹೆಚ್ಚಿನ ಪ್ರದೇಶದಲ್ಲಿ ಸಿರಿಧಾನ್ಯಗಳಗಳನ್ನು ಬೆಳೆಸಿ ರೈತರನ್ನು ಅರ್ಥಿಕವಾಗಿ ಸಬಲರನ್ನಾಗಿ ಮಾಡುವುದಾಗಿದೆ. 2023ನೇ ವರ್ಷವನ್ನು ಅಂತರ ರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿ ಆಚರಣೆ ಮಾಡಲಾಗುತ್ತದೆ ಹಾಗೂ ಅಂತರ ರಾಷ್ಟ್ರೀಯ ಸಿರಿಧಾನ್ಯ ಮೇಳವನ್ನೂ ಸಹ ರಾಜ್ಯದಲ್ಲಿ ಆಚರಿಸಲಾಗುವುದು" ಎಂದು ಸಚಿವ ಬಿ. ಸಿ. ಪಾಟೀಲ್ ಹೇಳಿದರು.
ಸಿರಿಧಾನ್ಯ ಉತ್ಕಷ್ಟತಾ ಕೇಂದ್ರ
"2019-20ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಅನುಮತಿ ನೀಡಿ ಜಿಲ್ಲೆಯ ರೈತರಿಗೆ ತರಬೇತಿ ನೀಡುವ ಸಲುವಾಗಿ ಸಿರಿಧಾನ್ಯಗಳ ಉತ್ಕಷ್ಟತಾ ಕೇಂದ್ರದ ಕಟ್ಟಡ ಪ್ರಾರಂಭವಾಗಿ ಉದ್ಘಾಟನೆಗೊಳ್ಳುತ್ತಿದೆ. ಸಿರಿಧಾನ್ಯಗಳನ್ನು ಹೆಚ್ಚು ಬೆಳೆಯುವುದರ ಮೂಲಕ ಆರೋಗ್ಯದ ಆಹಾರವನ್ನು ಒದಗಿಸುವ ಕೆಲಸ ರೈತರಿಂದ ಆಗಬೇಕಿದೆ" ಎಂದು ಸಚಿವರು ಹೇಳಿದರು.
ಇದಕ್ಕೂ ಹಿರಿಯೂರು ತಾಲ್ಲೂಕಿನ ದೇವರಕೊಟ್ಟ ಗ್ರಾಮದ ರೈತರಾದ ನಾಗಪ್ಪ ಬಿನ್ ವೀರಣ್ಣ ಜಮೀನಿನಲ್ಲಿ ಕೃಷಿ ಸಚಿವರಾದ ಬಿ. ಸಿ. ಪಾಟೀಲ್ ಶೇಂಗಾ ಬೆಳೆಯ ವಿವಿಧ ತಳಿಗಳ ವೀಕ್ಷಣೆ ಮಾಡಿದರು. ಟಿಎಂವಿ-2, ಕದರಿ ಲೇಪಾಕ್ಷಿ-1812, ಜಿ-2-52, ಡಿ.ಹೆಚ್-256, ಕೆ-9 ಸೇರಿದಂತೆ ಶೇಂಗಾ ಬೆಳೆಯ ವಿವಿಧ ತಳಿಗಳ ವೀಕ್ಷಣೆ ಮಾಡಿ, ಶೇಂಗಾ ತಳಿಯ ವೈಶಿಷ್ಠ್ಯತೆಗಳ ಕುರಿತು ಮಾಹಿತಿ ಪಡೆದರು.
ರಾಗಿ ಬೆಳೆಯಲ್ಲಿ ನಾಟಿ ಪದ್ಧತಿ
"ನಾಟಿ ಪದ್ಧತಿ ಮೂಲಕ ರಾಗಿ ಬೆಳೆದರೆ ಅಧಿಕ ಇಳುವರಿ ಪಡೆಯಲು ಸಾಧ್ಯವಿದೆ. ಕೂರಿಗೆ ಪದ್ಧತಿಗಿಂತ ನಾಟಿ ಪದ್ಧತಿ ರಾಗಿಯಿಂದ ಅಧಿಕ ಇಳುವರಿ ಪಡೆಯಬಹುದು. ರೋಗ, ಕೀಟ ಬಾಧೆ ಕಡಿಮೆ ಇರುತ್ತದೆ ತೆಂಡೆಗಳ ಸಂಖ್ಯೆ ಕೂರಿಗೆ ಪದ್ದತಿಯಲ್ಲಿ 4 ರಿಂದ 6 ಇದ್ದರೆ ನಾಟಿ ಪದ್ಧತಿಯಲ್ಲಿ ತೆಂಡೆಗಳ ಸಂಖ್ಯೆ 15 ರಿಂದ 20 ಇರುತ್ತವೆ" ಎಂದು ಸಚಿವರು ಹೇಳಿದರು. ಇದೇ ಸಂದರ್ಭದಲ್ಲಿ ನಡಕಟ್ಟಿನ ಕೂರಿಗೆಯಿಂದ ನವಣೆ ಬಿತ್ತನೆ ಮಾಡಲಾಯಿತು.
ಡ್ರೋನ್ನಿಂದ ಕೀಟನಾಶಕ ಸಿಂಪರಣೆ
ಹತ್ತಿ ಬೆಳೆಗೆ ಡ್ರೋನ್ ಮೂಲಕ ಇಮಿಡಾಕ್ಲೊಪ್ರಿಡ್ ಸಿಂಪರಣೆಗೆ ಕೃಷಿ ಸಚಿವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಕೆ. ಶ್ರೀನಿವಾಸ್, ಶಾಸಕರಾದ ಟಿ. ರಘುಮೂರ್ತಿ, ರಾಜ್ಯ ಖನಿಜ ನಿಗಮದ ಅಧ್ಯಕ್ಷರಾದ ಎಸ್. ಲಿಂಗಮೂರ್ತಿ, ಬಯಲುಸೀಮೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎನ್. ಇ. ಜೀವನ್ಮೂರ್ತಿ, ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಜಿ. ಎಂ. ತಿಮ್ಮಪ್ಪ, ಕೃಷಿ ನಿರ್ದೇಶಕರಾದ ಡಾ.ಬಿ.ವೈ.ಶ್ರೀನಿವಾಸ್, ಜಂಟಿ ಕೃಷಿ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಡಾ.ಎನ್.ಎ.ಪ್ರವೀಣ್ ಚೌಧರಿ, ಉಪ ಕೃಷಿ ನಿರ್ದೇಶಕರಾದ ಡಾ.ಬಿ.ಎನ್.ಪ್ರಭಾಕರ್, ಡಾ.ಹುಲಿರಾಜ್ ಸೇರಿದಂತೆ ಮತ್ತಿತರರು ಇದ್ದರು.