ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಕಾರು ಡಿಕ್ಕಿ, ವ್ಯಕ್ತಿಗೆ ಗಾಯ
ಚಿತ್ರದುರ್ಗ, ಫೆಬ್ರವರಿ 21 : ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಕಾರು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಫೆ.19ರಂದು ಬಿಜೆಪಿ ಶಾಸಕ ಸಿ.ಟಿ.ರವಿ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟ ಘಟನೆ ನಡೆದಿತ್ತು.
ಗುರುವಾರ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಕಾರು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ.
ಕಾರು ಅಪಘಾತ ಪ್ರಕರಣ: ಸಿಟಿ ರವಿ ಕಾರಿನ ಚಾಲಕ ಅರೆಸ್ಟ್
ಹಿರಿಯೂರಿನ ಪ್ರವಾಸಿ ಮಂದಿರದ ಬಳಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಹಿರಿಯೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಸಿಟಿ ರವಿ ಅವರಿದ್ದ ಕಾರು ಡಿಕ್ಕಿ ಹೊಡೆದು ಇಬ್ಬರ ದುರ್ಮರಣ
ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಪ್ರವಾಸಿ ಮಂದಿರಕ್ಕೆ ಬಿಟ್ಟು ಕಾರನ್ನು ರಿವರ್ಸ್ ತೆಗೆಯುವಾಗ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸ್ಪಷ್ಟನೆ ನೀಡಿದ ಶಾಸಕಿ : 'ನಮ್ಮ ಕಾರು ವ್ಯಕ್ತಿಗೆ ಡಿಕ್ಕಿ ಆಗಿಲ್ಲ. ನಾನು ಪ್ರವಾಸಿ ಮಂದಿರಕ್ಕೆ ಹೋಗುವಾಗಲೇ ಅಲ್ಲಿ ವ್ಯಕ್ತಿ ಕುಡಿದುಬಿದ್ದಿದ್ದ. ಈ ಬಗ್ಗೆ ಪ್ರವಾಸಿ ಮಂದಿರದ ಸಿಬ್ಬಂದಿಗೂ ತಿಳಿಸಿದೆ. ನಾನು ಒಳ ಹೋದ ಮೇಲೆ ಕೂಗಾಡಲು ಆರಂಭಿಸಿದ. ಆಗ ಹೊರಬಂದು ಆಟೋದಲ್ಲಿ ಆತನನ್ನು ಆಸ್ಪತ್ರೆಗೆ ಕಳುಹಿಸಿ ಕೊಟ್ಟೆ' ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
'ನನ್ನ ಕಾರು ವ್ಯಕ್ತಿಗೆ ಡಿಕ್ಕಿಯಾಗಿಲ್ಲ. ನನ್ನ ವಿರೋಧಿಗಳು ನನ್ನ ಬಗ್ಗೆ ಅಪಪ್ರಚಾರವನ್ನು ಮಾಡಲು ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ' ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಆರೋಪಿಸಿದರು.