ಚಿತ್ರದುರ್ಗದಲ್ಲೂ ಕಂಡುಬಂದ ಮಿಡತೆಗಳು; ರೈತರಲ್ಲಿ ಆತಂಕ
ಚಿತ್ರದುರ್ಗ, ಮೇ 30: ರೈತರು ಬೆಳೆದ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿರುವ ಮರುಭೂಮಿ ಮಿಡತೆಗಳು ಈಗ ಚಿತ್ರದುರ್ಗ ಜಿಲ್ಲೆಯಲ್ಲೂ ಕಂಡುಬರುತ್ತಿವೆ.
ದೇಶದ ಕೃಷಿ ವಲಯದಲ್ಲಿ ಆತಂಕ ತಂದಿರುವ ಈ ಮರುಭೂಮಿ ಮಿಡತೆಗಳು ಕೋಟೆ ನಾಡು ಚಿತ್ರದುರ್ಗಕ್ಕೂ ಲಗ್ಗೆ ಇಟ್ಟಿರುವುದು ಇಲ್ಲಿನ ರೈತರಲ್ಲೂ ಭಯದ ವಾತಾವರಣ ಮೂಡಿಸಿವೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಹರಿಶ್ಚಂದ್ರ ಘಾಟ್ ಬಳಿ ಹಸಿರು ಎಕ್ಕೆ ಗಿಡಗಳಲ್ಲಿ ಬಣ್ಣ ಬಣ್ಣದ ಮಿಡತೆಗಳು ಎಲೆಗಳನ್ನು ತಿನ್ನುವ ದೃಶ್ಯ ಕಂಡುಬಂದಿದೆ.
ಕೋಲಾರಕ್ಕೂ ಬಂದ ಮಿಡತೆ ಸೈನ್ಯ: ರೈತರಲ್ಲಿ ಆತಂಕ
ಈಗಾಗಲೇ ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಮತ್ತಿತರ ರಾಜ್ಯಗಳಲ್ಲಿ ಮಿಡತೆಗಳು ದಾಳಿ ನಡೆಸಿ ಬೆಳೆ ನಾಶಕ್ಕೆ ಕಾರಣವಾಗಿವೆ. ನಿನ್ನೆಯಷ್ಟೇ ರಾಜ್ಯದ ಕೋಲಾರದಲ್ಲೂ ಮಿಡತೆಗಳು ಕಂಡುಬಂದಿವೆ. ಈ ನಡುವೆ ಮಿಡತೆ ದಂಡು ಬೀದರ್ ಜಿಲ್ಲೆಗೂ ಲಗ್ಗೆಯಿಡುವ ಸಾಧ್ಯತೆ ಇದೆ ಎಂದು ಬೀದರ್ ಜಿಲ್ಲಾಧಿಕಾರಿ ಎಚ್.ಆರ್ ಮಹದೇವ್ ಮಾಹಿತಿ ನೀಡಿರುವುದು ಸಹಜವಾಗಿಯೇ ಆತಂಕ ಮೂಡಿಸಿದೆ.
ಈ ನಡುವೆ ಜಿಲ್ಲೆಯಲ್ಲಿ ಮಿಡತೆಗಳು ಕಾಣಿಸಿಕೊಂಡಿವೆ. ಈಗಾಗಲೇ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆ ನಡೆಸಲು ಸಿದ್ಧವಾಗಿದ್ದಾರೆ. ಆದರೆ ಈ ಹೊತ್ತಿನಲ್ಲಿ ಇವು ಕಾಣಿಸಿಕೊಂಡಿರುವುದು ರೈತರಿಗೆ ಗೊಂದಲ ಮೂಡಿಸಿವೆ.
ಈ ಕುರಿತು ಮಾತನಾಡಿದ ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, "ನಮ್ಮ ಜಿಲ್ಲೆಯಲ್ಲಿ ಇದುವರೆಗೂ ಮಿಡತೆಗಳು ಕಂಡುಬಂದಿಲ್ಲ. ಈಗ ಸ್ವಲ್ಪ ಮಳೆಯಾಗಿರುವುದರಿಂದ ಹೊಲದಲ್ಲಿ ಮೊಳಕೆ ಚಿಗುರೊಡೆದಾಗ ಅದನ್ನು ತಿನ್ನಲು ಮಿಡತೆಗಳು ಬರುವುದು ಸಾಮಾನ್ಯ. ಇದನ್ನು ಹಾವಳಿ ಎನ್ನುವಂತಿಲ್ಲ, ಇವು ವಿದೇಶಿ ಮಿಡತೆಗಳಲ್ಲ" ಎಂದಿದ್ದಾರೆ.