ಲಾಕ್ ಡೌನ್ ನಿರ್ಲಕ್ಷ್ಯ: ಚಿತ್ರದುರ್ಗದಲ್ಲಿ ಲಘು ಲಾಠಿ ಪ್ರಹಾರ
ಚಿತ್ರದುರ್ಗ, ಮಾರ್ಚ್ 25: ಮಹಾಮಾರಿ ಕೊರೊನಾ ಸೋಂಕು ದೇಶಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರ ಬರದಂತೆ ಕಟ್ಟು ನಿಟ್ಟಿನ ಆದೇಶವನ್ನು ಮಧ್ಯರಾತ್ರಿಯಿಂದ ಇಡೀ ಭಾರತ ದೇಶವೇ ಲಾಕ್ ಡೌನ್ ಆಗಿದೆ. ಆದರೂ ಇದ್ಯಾವುದನ್ನೂ ಲೆಕ್ಕಿಸದೆ ಚಿತ್ರೆದುರ್ಗ ಜನರು ಬೆಳ್ಳಂ ಬೆಳಿಗ್ಗೆ ಬೀದಿಗಿಳಿದಿದ್ದಾರೆ.
ಯಾರೊಬ್ಬರು ಮನೆಯಿಂದ ಹೊರ ಬರದಂತೆ ಆದೇಶ ನೀಡಿದ್ದರೂ ಆಟೋ, ದ್ವಿಚಕ್ರ ವಾಹನ ಸವಾರರು ಬೀದಿಗಿಳಿದ್ದರು. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ರುಚಿಯನ್ನು ತೋರಿಸಿದ್ದಾರೆ. ಚಿತ್ರದುರ್ಗ ಮತ್ತು ಹಿರಿಯೂರು ನಗರದಲ್ಲಿ ಜನರು ಯುಗಾದಿ ಹಬ್ಬಕ್ಕೆ ವಸ್ತುಗಳನ್ನು ಖರೀದಿಸಲು ಹಾಗೂ ಮಾರಾಟ ಮಾಡಲು ಬಂದವರಿಗೆ ಪೊಲೀಸರು ಬಿಸಿ ಬಿಸಿ ಕಜ್ಜಾಯ ಕೊಟ್ಟಿದ್ದಾರೆ.
Live Updates : ಕರ್ನಾಟಕದಲ್ಲಿ ಕೊರೊನಾ ಶಂಕಿತ ವೃದ್ಧೆ ಸಾವು
ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಅವರು ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತರಕಾರಿ ವರ್ತಕರ ಸಮಸ್ಯೆಯನ್ನು ಆಲಿಸಿ ನಂತರ ಮಾತನಾಡಿದ ಎಸ್ಪಿ, ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಗೆ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿದರು. ಮೊದಲು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಿ, ಕೊರೊನಾ ಸೋಂಕು ಹರಡದಂತೆ ಇರಲು ಸಹಕರಿಸಿ ಎಂದು ಹೇಳಿದರು.
ವ್ಯಾಪಾರ ಮಾಡಿಕೊಳ್ಳಿ ಆದರೆ ಅಂತರ ಕಾಯಬೇಕು. ತಳ್ಳುವ ಗಾಡಿಯಲ್ಲಿ ಎಲ್ಲ ಕಡೆ ತರಕಾರಿ ಮಾರಲು ಎಸ್ಪಿಯವರು ಸಲಹೆ ನೀಡಿದರು. ನಗರದ ಹೊರವಲಯದಲ್ಲಿ ನಾಕಾಬಂದಿ ಹಾಕಲಾಗುತ್ತಿದೆ, ದಿನನಿತ್ಯದ ವಸ್ತುಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಜಿಲ್ಲಾಡಳಿತ ಕಠಿಣ ಕ್ರಮ ಜರುಗಿಸಲಾಗುವುದು ಎಂದು ವ್ಯಾಪಾರಸ್ಥರಿಗೆ ಎಸ್ಪಿ ಜಿ. ರಾಧಿಕಾ ಎಚ್ಚರಿಕೆ ನೀಡಿದರು.
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಇಡೀ ದೇಶ ಲಾಕ್ ಡೌನ್ ಆಗಿದ್ದು, ದೇವಸ್ಥಾನಕ್ಕೂ ಸಹ ನಿರ್ಬಂಧ ಹೇರಲಾಗಿದೆ. ಇದೇ ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲವು ದೇವಾಲಯಗಳಿಗೆ ಬೀಗ ಹಾಕಲಾಗಿದ್ದು, ಭಕ್ತರಿಗೆ ಪ್ರವೇಶ ಇಲ್ಲದಂತಾಗಿದೆ. ಇಂದು ನಾಡಿನಾದ್ಯಂತ ಯುಗಾದಿ ಹಬ್ಬವಿದ್ದು ಜನಜಂಗುಳಿಯಿಂದ ತುಂಬುತ್ತಿದ್ದ ದೇವಾಲಯಗಳು ನಿಶ್ಶಬ್ಧ ರೀತಿಯಲ್ಲಿ ಹಲವು ದೇವಾಲಯಗಳು ಕಂಡುಬಂದವು.