ಚಿತ್ರದುರ್ಗ ವಿಶೇಷ; ಲಕ್ಷ ಲಕ್ಷ ಖರ್ಚು ಮಾಡಿ ಕೈ ಸುಟ್ಟುಕೊಂಡ ರೈತರು
ಚಿತ್ರದುರ್ಗ, ಮೇ 18; ಹಿರಿಯೂರು ತಾಲೂಕಿನ ಕರಿಯೊಬನಹಳ್ಳಿ ಗ್ರಾಮದ ರೈತರು ಲಕ್ಷ ಲಕ್ಷ ಖರ್ಚು ಮಾಡಿ ಬದನೆಕಾಯಿ, ಟೊಮೊಟೊ, ಕ್ಯಾರೆಟ್, ಬೂದುಗುಂಬಳಕಾಯಿ, ಗುಲಾಬಿ ಹೂ ಬೆಳೆದಿದ್ದಾರೆ. ಆದರೆ ಲಾಕ್ಡೌನ್ ಪರಿಣಾಮ ಸೂಕ್ತ ಬೆಲೆ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
Recommended Video
ಯಶೋಧಮ್ಮ 2 ಎಕರೆಯಲ್ಲಿ ಬದನೆಕಾಯಿ, ಚಿಕ್ಕಣ್ಣ 3 ಎಕರೆಯಲ್ಲಿ ಗುಲಾಬಿ ಹೂ, ಪೂಜಾರಿ ಚಿಕ್ಕಣ್ಣ 1 ಎಕರೆಯಲ್ಲಿ ಬೂದುಗುಂಬಳಕಾಯಿ ಮತ್ತು ಕ್ಯಾರೆಟ್ ಬೆಳೆದಿದ್ದಾರೆ. ಆದರೆ ಈಗ ಬೆಳೆ ಮಾರಾಟ ಮಾಡಲಾಗದೇ ಕಂಗಾಲಾಗಿದ್ದಾರೆ. ಸರ್ಕಾರ ಲಾಕ್ಡೌನ್ ವಿಸ್ತರಣೆ ಮಾಡುವ ಸಾಧ್ಯತೆ ಇದ್ದು, ರೈತರ ನೆರವು ಬೇಕಾಗಿದೆ.
ಯಶೋಧಮ್ಮ ಹಿರಿಯೂರು ನಗರದ ಚಳ್ಳಕೆರೆ ರಸ್ತೆಯಲ್ಲಿರುವ ನರ್ಸರಿಯೊಂದರಲ್ಲಿ ಒಂದು ಸಸಿಗೆ 60 ಪೈಸೆಯಂತೆ 16 ಸಾವಿರ ರಾಂಪುರ ಬದನೆಕಾಯಿ ಸಸಿಗಳನ್ನು ಖರೀದಿಸಿ ಹೊಲದಲ್ಲಿ ನಾಟಿ ಮಾಡಿದ್ದರು. ಸಸಿಗೆ ನೀರು ಹಾಯಿಸಲು ಡ್ರೀಪ್ ವ್ಯವಸ್ಥೆ ಕೂಡ ಮಾಡಿದ್ದರು. ಬೇಸಾಯ, ಔಷಧಿ, ಕೂಲಿ ಎಲ್ಲವೂ ಸೇರಿದಂತೆ ಸುಮಾರು ಒಂದುವರೆ ಲಕ್ಷ ರೂಪಾಯಿ ಖರ್ಚು ಮಾಡಿ ಬದನೆ ಬೆಳೆಯನ್ನು ಬೆಳೆದಿದ್ದರು.
ಹೂ ಬೆಳೆದ ರೈತರಿಗೆ ಯಾರೂ ಖರೀದಿ ಮಾಡುವವರಿಲ್ಲ ಎಂಬುದು ಚಿಂತೆಯಾಗಿದೆ. ತರಕಾರಿ ಬೆಳೆದವರಿಗೆ ಎಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡಬೇಕು? ಎಂಬುದು ಚಿಂತೆ. ಉತ್ತಮವಾದ ಫಸಲು ಕೈಗೆ ಬಂದು ಬಂಪರ್ ಲಾಭದಲ್ಲಿದ್ದ ರೈತರು ಲಾಕ್ಡೌನ್ ಪರಿಣಾಮ ತತ್ತರಿಸಿ ಹೋಗಿದ್ದಾರೆ.
ಬದನೆಕಾಯಿ ಬೆಳೆಗೆ ಸೂಕ್ತ ಬೆಲೆ ಇಲ್ಲ
ಪ್ರತಿನಿತ್ಯ 10 ಚೀಲ ಬದನೆಕಾಯಿ ಬರುತ್ತಿದ್ದರಿಂದ ಲಾಭದ ನಿರೀಕ್ಷೆಯಲ್ಲಿದ್ದ ರೈತ ಜನಾರ್ಧನಿಗೆ 20 ಕೆಜಿ ಬರುವ ಒಟ್ಟು 50 ಚೀಲ ಬದನೆಕಾಯಿ ಕಟಾವು ಮಾಡಲಾಗಿದೆ. ಇದರಲ್ಲಿ 20ಕ್ಕೂ ಹೆಚ್ಚು ಚೀಲಗಳು ಹುಳು ಹಿಡಿದಿವೆ. ಉಳಿದ ಬದನೆಕಾಯಿ ಒಂದು ಚೀಲಕ್ಕೆ 150-250 ರೂ. ಬೆಲೆಗೆ ಮಾರಾಟವಾಗಿದ್ದು 10-12 ಸಾವಿರ ಆದಾಯ ಬಂದಿದೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ, ಕಡಿಮೆ ಆದಾಯ ಪಡೆದ ರೈತ ಕಂಗಾಲಾಗಿದ್ದಾನೆ.
ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದೆವು
"ನಾವು 2 ಎಕರೆಯಲ್ಲಿ 16 ಸಾವಿರ ಬದನೆಕಾಯಿ ಸಸಿಗಳನ್ನು ತಂದು ನಾಟಿ ಮಾಡಿದೆವು. ಹಗಲು ರಾತ್ರಿ, ಮಳೆ ಗಾಳಿ, ಬಿಸಿಲು ಎನ್ನದೆ ಬೆವರು ಸುರಿಸಿ, ಔಷಧಿ, ಗೊಬ್ಬರ, ಕಳೆ, ಎಂದುಕೊಂಡು ಲಕ್ಷಾಂತರ ಖರ್ಚು ಮಾಡಿದೆವು. ನಮಗೆ ಫಸಲು ಚೆನ್ನಾಗಿ ಬಂದಿತ್ತು. ಈ ಫಸಲು ನೋಡಿ ಉತ್ತಮ ಲಾಭ ಬರುತ್ತದೆಂಬ ನಿರೀಕ್ಷೆಯಲ್ಲಿದ್ದೆವೆ. ಲಾಕ್ಡೌನ್ ಜಾರಿ ಇರುವುದರಿಂದ ಎಲ್ಲಿ ಮಾರಾಟ ಮಾಡಬೇಕು? ಎಂಬುದು ಗೊತ್ತಾಗುತ್ತಿಲ್ಲ" ಎಂದು ರೈತ ಜನಾರ್ಧನ ಹೇಳಿದ್ದಾರೆ.
ಮೂರು ಎಕರೆಯಲ್ಲಿ ಗುಲಾಬಿ
ಮೂರು ಎಕರೆಯಲ್ಲಿ ಗುಲಾಬಿ ಹೂ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದ ಗೋಪಾಲ್ ಲಾಕ್ಡೌನ್ ಹೊಡೆತಕ್ಕೆ ಸಿಲುಕಿದ್ದಾರೆ. ತಮಿಳುನಾಡಿನ ಆಗಲಕೋಟೆ ಎಂಬಲ್ಲಿ ಒಂದು ಗುಲಾಬಿ ಸಸಿಗೆ 24 ರೂಪಾಯಿಂತೆ 6 ಸಾವಿರ ಸಸಿಗಳನ್ನು ತಂದು ಆರೂವರೆ ಲಕ್ಷ ರೂಪಾಯಿ ಬಂಡವಾಳ ಹಾಕಲಾಗಿದೆ. ಈಗ ಪ್ರತಿನಿತ್ಯ 60-70 ಕೆಜಿ ಹೂ ಬರುತ್ತಿದೆ. ಒಂದು ಕವರ್ಗೆ ಎರಡರಿಂದ ಎರಡೂವರೆ ಕೆಜಿ ತೂಕಕ್ಕೆ 300-400 ಬೆಲೆ ಸಿಗುತ್ತಿತ್ತು. ಈಗ ಹೂ ಕೊಳ್ಳುವವರು ಇಲ್ಲ, ಬೇರೆಡೆ ಮಾರಾಟ ಮಾಡಲು ಸಾಧ್ಯವಿಲ್ಲ ಇದರಿಂದ ಗಿಡದಲ್ಲೇ ಬಿಟ್ಟಿದ್ದಾರೆ.
ರೈತನ ಕೈಗೆ ಫಸಲು ಬಂದಿದೆ
ಇದೇ ಗ್ರಾಮದ ಮತ್ತೊಬ್ಬ ರೈತ ಚಿಕ್ಕಣ್ಣ 1 ಎಕರೆಯಲ್ಲಿ ಬೂದುಗುಂಬಳಕಾಯಿ ಮತ್ತು ಕ್ಯಾರೆಟ್ ಬೆಳೆದಿದ್ದಾರೆ. ಬೆಳೆ ಕಟಾವಿಗೆ ಬಂದು ನಿಂತಿದೆ. ಬೂದುಕುಂಬಕಾಯಿಗೆ 75 ಸಾವಿರ ಬಂಡವಾಳ ಹಾಕಲಾಗಿದೆ. ಈಗ ಫಸಲು ಬಂದು ನಿಂತಿದ್ದು, ಅದನ್ನು ಯಾರೂ ಕೇಳುವರಿಲ್ಲಂತಾಗಿದೆ. ಒಂದೆರಡು ದಿನ ಹಾಗೆ ಬಿಟ್ಟರೆ ಬೆಳೆ ಸಂಪೂರ್ಣ ನಾಶವಾಗಲಿದೆ. ಕ್ಯಾರೆಟ್ ಕೂಡ ಕೊಳೆತು ಹೋಗುತ್ತಿದೆ. ಏನು ಮಾಡಬೇಕು ಗೊತ್ತಾಗತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.