ಲಾಕ್ ಡೌನ್: ಮಧ್ಯಪ್ರದೇಶದಲ್ಲಿ ಸಿಲುಕಿಕೊಂಡ ಚಿತ್ರದುರ್ಗ ವಿದ್ಯಾರ್ಥಿಗಳು
ಚಿತ್ರದುರ್ಗ, ಎಪ್ರಿಲ್ 14: ಕೊರೊನಾ ವೈರಸ್ ನಿಂದಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಸಾರಿಗೆ ಸೌಲಭ್ಯ ಬಂದ್ ಆಗಿದೆ. ಇದೇ ಸಂದರ್ಭದಲ್ಲಿ ಮಕ್ಕಳು ಮಧ್ಯಪ್ರದೇಶದಲ್ಲಿದ್ದರೆ, ಪಾಲಕರು ಚಿತ್ರದುರ್ಗದಲ್ಲಿದ್ದಾರೆ.
ಕೊರೊನಾ ವೈರಸ್ ಹರುಡುವಿಕೆಯನ್ನು ತಡೆಗಟ್ಟಲು ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ಮಕ್ಕಳು ಮಧ್ಯಪ್ರದೇಶದಲ್ಲೇ ಲಾಕ್ ಆಗಿದ್ದಾರೆ. ಮಧ್ಯಪ್ರದೇಶದ ಇಂದೋರ್ ಸಮೀಪದ ದೇವಾಸ್ ನಗರದಲ್ಲಿ ಚಿತ್ರದುರ್ಗ ಮೂಲದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ 23 ಮಕ್ಕಳು ದೇವಾಸ್ ನವೋದಯ ವಿದ್ಯಾಲಯದಲ್ಲಿ 9 ನೇ ತರಗತಿ ಓದುತ್ತಿದ್ದಾರೆ. ಪಾಲಕರನ್ನು ನೆನೆದು ಮಕ್ಕಳು ಕಣ್ಣೀರಿಡುತ್ತಿರುವ ದೃಶ್ಯ ಕಂಡುಬಂದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ದೇವಾಸ್ ಶಾಲೆಗೆ ವರ್ಗಾವಣೆ ಆಗಿದ್ದರು. 1 ವರ್ಷದ ಮೈಗ್ರೇಷನ್ ಕೋರ್ಸ್ ಗಾಗಿ ದೇವಾಸ್ ನವೋದಯ ವಿದ್ಯಾಲಯಕ್ಕೆ ವರ್ಗಾವಣೆ ಆಗಿದ್ದರು.
ಉಡುವಳ್ಳಿ ನವೋದಯ ಶಾಲೆಯ 9 ನೇ ತರಗತಿಯ 23 ವಿದ್ಯಾರ್ಥಿಗಳು ದೇವಾಸ್ ಗೆ ವರ್ಗಾವಣೆಯಾಗಿದ್ದರು. 23 ವಿದ್ಯಾರ್ಥಿಗಳ ಪೈಕಿ 11 ವಿದ್ಯಾರ್ಥಿನಿಯರು, 12 ವಿದ್ಯಾರ್ಥಿಗಳನ್ನು ವರ್ಗಾವಣೆ ಮಾಡಲಾಗಿತ್ತು.
ಮಧ್ಯಪ್ರದೇಶದ ದೇವಾಸ್ ಸಮೀಪದಲ್ಲಿ ಕೊರೊನಾ ವೈರಸ್ ಹೆಚ್ಚಾಗಿದ್ದು, ಮಕ್ಕಳು ಜೀವ ಕೈಯಲ್ಲಿಡಿದು ಬದುಕುತ್ತಿದ್ದಾರೆ. ನಮ್ಮನ್ನು ವಾಪಸ್ ಊರಿಗೆ ಕರೆಸಿಕೊಳ್ಳಿ ಎಂದು ಮಕ್ಕಳು ಅಂಗಲಾಚುತ್ತಿದ್ದಾರೆ.
ಮಕ್ಕಳ ಈ ಗೋಳಾಟ ನೋಡಿ ಪ್ರಧಾನಮಂತ್ರಿಗೆ ಪಾಲಕರು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಸ್ಯಾನಿಟೈಸರ್ ಬಸ್ ಮೂಲಕ ಮಕ್ಕಳನ್ನು ಕರ್ನಾಟಕಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಬೇಕು ಮತ್ತು ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಮಕ್ಕಳನ್ನು ಕರೆತರಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.