ಹಿರಿಯೂರು ನಗರಸಭೆ ಕೈ ವಶಕ್ಕೆ : ಶಾಸಕಿ ಕೆ ಪೂರ್ಣಿಮಾಗೆ ಮುಖಭಂಗ
ಹಿರಿಯೂರು, ಮೇ 31: ಭಾರಿ ಕುತೂಹಲ ಮೂಡಿಸಿದ್ದ ಹಿರಿಯೂರು ನಗರಸಭೆ ಚುನಾವಣೆಯಲ್ಲಿ ಕೊನೆಗೂ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ.
ಒಟ್ಟು 31 ವಾರ್ಡ್ ಗಳಲ್ಲಿ ಒಂದು ಸ್ಥಾನಕ್ಕೆ ಜೆಡಿಎಸ್ ಅವಿರೋಧವಾಗಿ ಆಯ್ಕೆಯಾಗಿತ್ತು. ಉಳಿದ 30 ಸ್ಥಾನಗಳಲ್ಲಿ ಮೈತ್ರಿ ಜೆಡಿಎಸ್-ಕಾಂಗ್ರೆಸ್ ಹಾಗೂ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು. ಅಚ್ಚರಿ ಎಂಬಂತೆ ಮೈತ್ರಿ ಪಕ್ಷ ಕಾಂಗ್ರೆಸ್-13, ಜೆಡಿಎಸ್-3 (ಅವಿರೋಧ ಆಯ್ಕೆ 1 ಸೇರಿ), ಬಿಜೆಪಿ-6, ಪಕ್ಷೇತರರು 9 ಸ್ಥಾನಗಳಲ್ಲಿ ಜಯಸಾಧಿಸಿದ್ದಾರೆ. ಸರಳ ಬಹುಮತಕ್ಕೆ ಬೇಕಾಗಿರುವ 16 ಸ್ಥಾನಗಳನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷ ಜಯಗಳಿಸಿದ್ದು, ಅಧಿಕಾರ ಹಿಡಿಯುವ ಹಾದಿ ಸುಗಮವಾಗಿದೆ.
ಚಿತ್ರದುರ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ : ಡಿ ಸುಧಾಕರ್ ಆಯ್ಕೆ
ಸ್ಥಳೀಯ ಸಂಸ್ಥೆಯಲ್ಲಿ ಫಲ ನೀಡಿದ ಮೈತ್ರಿ: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹಿರಿಯೂರು ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸಿದ್ದರು, ಬಿಜೆಪಿ ಲೀಡ್ ಪಡೆದಿದ್ದು ನಗರಸಭೆ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರ ನಡೆದಿತ್ತು. ಕಳೆದ ಬಾರಿ ಜೆಡಿಎಸ್, ಕಾಂಗ್ರೆಸ್, ಪಕ್ಷೇತರರನ್ನು ತನ್ನ ತೆಕ್ಕೆಗೆ ಸೆಳೆಯುವ ಮೂಲಕ ಗದ್ದುಗೆ ಏರಿದ್ದ ಬಿಜೆಪಿ ಈ ಬಾರಿ ಸ್ವತಂತ್ರವಾಗಿ ಅಧಿಕಾರ ಪಡೆಯುವ ಕನಸು ಕಂಡಿತ್ತು. ಇದಕ್ಕೆ ಪೂರಕವಾಗಿ ಲೋಕಸಭೆ ಚುನಾವಣೆಯಲ್ಲಿ ಮುನ್ನಡೆ ದೊರೆತಿತ್ತು. ಇದರಿಂದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಮುಖಂಡರು, ಕಾರ್ಯಕರ್ತರು ಬಹಳ ಉತ್ಸಾಹದಿಂದ ಚುನಾವಣೆ ಎದುರಿಸಿದ್ದರು. ಆದರೆ ಶಾಸಕಿ ಪೂರ್ಣಿಮಾಗೆ ಈ ಫಲಿತಾಂಶದಿಂದ ತೀವ್ರ ಮುಖಭಂಗ ಉಂಟಾಗಿದೆ.
ಈ ಮಧ್ಯೆ ಡಿಸಿಸಿ ಬ್ಯಾಂಕ್ ಚುನಾವಣೆ ಒತ್ತಡದಲ್ಲಿಯೂ ಕೊನೆ ಗಳಿಗೆಯಲ್ಲಿ ವಿಶ್ರಾಂತಿ ಇಲ್ಲದಂತೆ ಜೆಡಿಎಸ್ ಮುಖಂಡರನ್ನು ಜತೆಗೆ ಸೇರಿಸಿಕೊಂಡು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮಾಜಿ ಸಚಿವ ಡಿ.ಸುಧಾಕರ್ ಪ್ರಚಾರದಲ್ಲಿ ತೊಡಗಿದ್ದರು.
ಕಾಂಗ್ರೆಸ್-ಜೆಡಿಎಸ್ ರಾಜಕೀಯ ವೈರಿಗಳೆಂಬುದು ಸಾಬೀತಾಯ್ತು!
ಕೊನೆಗೂ ಫಲಿತಾಂಶ ಶುಕ್ರವಾರ ಬಿಜೆಪಿ ಅಧಿಕಾರದ ಆಸೆಗೆ ನೀರು ಎರಚಿದೆ. ಈ ಮೂಲಕ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಸಾಧಿಸಿದ್ದ ಕಾಂಗ್ರೆಸ್ ಮಾಜಿ ಶಾಸಕ ಡಿ.ಸುಧಾಕರ್ ಕ್ಷೇತ್ರದಲ್ಲಿ ತಮ್ಮ ಹಿಡಿತವನ್ನು ನಗರಸಭೆ ಚುನಾವಣೆ ಫಲಿತಾಂಶದ ಮೂಲಕ ಮರು ಸ್ಥಾಪಿಸಬಹುದು ಎನ್ನಲಾಗಿದೆ. ಒಟ್ಟಾರೆ, ಹಿರಿಯೂರು ನಗರಸಭೆ ಮೈತ್ರಿ ಪಕ್ಷದ ಪಾಲಾಗಿದ್ದು, ಬಿಜೆಪಿಗೆ ಸೋಲಾಗಿದೆ.